ಯುವಮತದಾರರ ಕೈಯಲ್ಲಿದೆ ದೇಶದ ಭವಿಷ್ಯ

| Published : Apr 24 2024, 02:31 AM IST

ಸಾರಾಂಶ

ಕೇವಲ ಮಾಹಿತಿ ತಿಳಿದುಕೊಳ್ಳದೇ ಸುತ್ತಮುತ್ತಲಿನ ಜನರಿಗೂ ಪಾರದರ್ಶಕ ಚುನಾವಣೆ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳು ತಿಳಿಸುವಂತ ಕಾರ್ಯ ಮಾಡಬೇಕು

ನರಗುಂದ: ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರು ತಪ್ಪದೆ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ ದೇಶ ರಕ್ಷಣೆ ಮಾಡಬೇಕೆಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು. ಅವರು ಮಂಗಳವಾರ ಪಟ್ಟಣದ ಸರ್ಕಾರಿ ಎಂಜಿನೀಯರಿಂಗ ಕಾಲೇಜಿನಲ್ಲಿ ಯುವ ಮತದಾರರಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸಲು ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಯಿತು.

ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾದ ಯುವ ಮತದಾರರು ಕಡ್ಡಾಯವಾಗಿ ಮತದಾನ ದಿನ ಮತದಾನ ಮಾಡುವ ಕುರಿತು ಸಂಕಲ್ಪ ಮಾಡಿ ಸಹಿ ಸಂಗ್ರಹ ಅಭಿಯಾನದಲ್ಲಿ ರುಜು ಹಾಕಿದರು.ಆ ನಂತರ ತಹಸೀಲ್ದಾರ ಶ್ರೀಶೈಲ ತಳವಾರ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ಎಂಜಿನೀಯರಿಂಗ್ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೇ ಬಗ್ಗೆ ತಿಳಿದುಕೊಂಡಿರಬೇಕು. ಮತಯಂತ್ರಗಳ ಕಾರ್ಯಕ್ಷಮತೆ ಮತ್ತು ಗೌಪ್ಯತೆ ಹಾಗೂ ಚುನಾವಣೆ ನಡೆಯುವ ಪ್ರತಿ ಹಂತಗಳನ್ನು ತಿಳಿದಿರಬೇಕು. ಜತೆಗೆ ಕೇವಲ ಮಾಹಿತಿ ತಿಳಿದುಕೊಳ್ಳದೇ ಸುತ್ತಮುತ್ತಲಿನ ಜನರಿಗೂ ಪಾರದರ್ಶಕ ಚುನಾವಣೆ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳು ತಿಳಿಸುವಂತ ಕಾರ್ಯ ಮಾಡಬೇಕು ಎಂದರು.

ಅಭಿಯಾನದಲ್ಲಿ ನರಗುಂದ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ. ಹಂಪಣ್ಣ ಸಜ್ಜನ ಮಾತನಾಡಿ, ಮತದಾನ ಮಾಡದೇ ಜನಪ್ರತಿನಿಧಿಗಳನ್ನು ಸೌಲಭ್ಯ ಒದಗಿಸಿ ಅಂತ ಕೇಳುವುದಕ್ಕಿಂತ ಮತ ಚಲಾಯಿಸಿ ಸೌಲಭ್ಯ ಕೇಳುವುದು ಉತ್ತಮ ಮತದಾರನ ನಡೆಯಾಗಿದೆ. ಸಮಾಜದಲ್ಲಿ ವಿವಿಧ ಸೌಲಭ್ಯಗಳಿಗಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮತದಾರರ ಸಂಖ್ಯೆ ದೊಡ್ಡದಿದೆ. ಹಲವು ಮತದಾರರು ಮತದಾನ ದಿನ ಮತ ಚಲಾಯಿಸಿದೇ ಚುನಾವಣೆ ಬಳಿಕ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಸಂಪ್ರದಾಯ ಹೊಂದಿರುವುದು ಸರಿಯಲ್ಲ. ಮತದಾನ ದಿನ ಯೋಗ್ಯ ಅಭ್ಯರ್ಥಿಗೆ ಮತ ಹಾಕಿ ಜನಪ್ರತಿನಿಧಿಗಳನ್ನು ಸೌಲಭ್ಯಗಳಿಗಾಗಿ ಪ್ರಶ್ನಿಸುವುದು ಉತ್ತಮ ಮತದಾರನ ಲಕ್ಷಣವಾಗಿದೆ ಎಂದು ತಿಳಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಸ್ವೀಪ್ ಸಮಿತಿ ವತಿಯಿಂದ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಮೊದಲ ಭಾರಿಗೆ ಮತದಾನ ಮಾಡುತ್ತಿರುವ ವಿದ್ಯಾರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗದೇ ದೇಶಕ್ಕೆ ಕೀರ್ತೀ ತರುವ ಸಂಸದರನ್ನು ಆಯ್ಕೆಗೊಳಿಸಲು ಮುಂದಾಗಬೇಕೆಂದು ಹೇಳಿದರು.

ಅಭಿಯಾನದಲ್ಲಿ ಭಾಗವಹಿಸಿದ್ದ 250 ಕ್ಕೂ ಅಧಿಕ ಯುವ ಮತದಾರ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಿನ ಎನ್.ಎಸ್.ಎಸ್ ಸಂಯೋಜಕ ಬಸವರಾಜ ಹೊಸಕೋಟಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಸರ್ಕಾರಿ ಎಂಜಿನೀಯರಿಂಗ್‌ ಕಾಲೇಜಿನ ಪ್ರಾಚಾರ್ಯರರು ಸಿದ್ದನಗೌಡ ಪಾಟೀಲ, ಪ್ರದೀಪ ಕದಂ, ಎಂಜಿನೀಯರಿಂಗ್ ವಿದ್ಯಾರ್ಥಿಗಳು ಹಾಗೂ ತಾಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.