ಸಾರಾಂಶ
ಯುವಶಕ್ತಿ ಮಿತ್ರಮಂಡಲದ 28ನೇ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಕುಂದಾಪುರಯುವಕರು ಬದಲಾವಣೆ ಮತ್ತು ಪ್ರಗತಿಯ ಹರಿಕಾರರು. ಯುವಶಕ್ತಿ ಸದ್ಬಳಕೆ ಆಗುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಊರಿನ ಭವಿಷ್ಯ ಯುವಕರನ್ನೇ ಅವಲಂಬಿಸಿದೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.ಅವರು ಯುವಶಕ್ತಿ ಮಿತ್ರ ಮಂಡಲ, ಹೆಗ್ಗಾರಬೈಲು ವಕ್ವಾಡಿ ಇದರ 28ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದಿ. ವಿ.ಕೆ ಮೋಹನ್ ಬಯಲು ರಂಗ ಮಂಟಪ ಉದ್ಘಾಟಿಸಿ, ವಿ.ಕೆ. ಮೋಹನ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಊರಿಗಾಗಿ ತನ್ನ ದುಡಿಮೆಯ ಬಹುಪಾಲನ್ನು ನೀಡಿದ ದಿವಂಗತ ವಿ.ಕೆ ಮೋಹನ್ ಸ್ಮರಣಾರ್ಥ ಜನ ಉಪಯೋಗಿ ಯೋಜನೆಗಳನ್ನು ಅರ್ಪಿಸಿರುವುದರ ಹಿಂದೆ ಯುವಶಕ್ತಿ ಮಿತ್ರಮಂಡಲದ ಸಮರ್ಥ ನಿರ್ವಹಣೆ ಶ್ಲಾಘನೀಯ. ಪ್ರಗತಿಪರ ಮತ್ತು ಮಹತ್ವಾಕಾಂಕ್ಷೆಯ ಸಮಾಜಕ್ಕೆ ಯುವಶಕ್ತಿ ಮಿತ್ರಮಂಡಲ ಇನ್ನಷ್ಟು ತೆರೆದುಕೊಳ್ಳುವಂತಾಗಲಿ ಎಂದು ಕುಂದರ್ ಹಾರೈಸಿದರು.ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಊರಿನ ಸರ್ವಾಂಗೀಣ ಪ್ರಗತಿ ಮತ್ತು ಅಭಿವೃದ್ಧಿಗೆ ಸಶಕ್ತ ಯುವ ಸಂಘಟನೆ ಮುಖ್ಯ. ಯುವಶಕ್ತಿ ಮಿತ್ರಮಂಡಲ ವಕ್ವಾಡಿಯ ಬೆನ್ನೆಲುಬು ಎಂದರು.
ಉದ್ಯಮಿಗಳಾದ ಎಂ.ರಾಜು ಪೂಜಾರಿ ಹಾಗೂ ವಿಠಲ ಪೂಜಾರಿ ಹೈ ಮಾಸ್ಟ್ ದೀಪ ಉದ್ಘಾಟಿಸಿದರು. ಕಾಳಾವರ ಗ್ರಾ.ಪಂ.ನ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳ ಪಾರ್ಕ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ ಭವಾನಿ ಎಸ್. ಆಚಾರ್ಯ ಅವರಿಗೆ ''''ಊರ ಗೌರವ ಪ್ರದಾನ'''' ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಾಲತಿ ಶೆಟ್ಟಿಗಾರ್ ವಕ್ವಾಡಿ, ಡಾ. ರಾಮಮೂರ್ತಿ ಕೆ.ಎನ್ ಹಾಗೂ ಡಾ. ಸಂತೋಷ್ ಕುಲಾಲ್ ವಕ್ವಾಡಿ ಅವರಿಗೆ ''''ಯುವಸ್ಪೂರ್ತಿ ಪುರಸ್ಕಾರ -2025'''' ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಪತ್ರಕರ್ತ ಸುಧಾಕರ್ ನಂಬಿಯಾರ್, ಕುಂದಾಪುರ ತಾಲೂಕು ಕೆ.ಡಿ.ಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಪ್ರೇಮಾ ಮೋಹನ್, ವಿ.ಕೆ ಗೋಪಾಲ್, ಮಡಾಮಕ್ಕಿ ಶಶಿಧರ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಸುಧೀರ್ ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಪ್ರೇಮ್ ಸಾಗರ್, ಚಿರಂಜೀವಿ, ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಉಪಸ್ಥಿತರಿದ್ದರು.ಯುವಶಕ್ತಿ ಮಿತ್ರಮಂಡಲ ವಕ್ವಾಡಿಯ ಗೌರವಾಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿದರು, ಸಂಸ್ಥೆಯ ಅಧ್ಯಕ್ಷ ವಿಜಯ್ ಪೂಜಾರಿ ವಂದಿಸಿ, ಪತ್ರಕರ್ತ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.