ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅನ್ನದಾಸೋಹದ ಮಠವೆಂದೇ ಪ್ರಸಿದ್ಧಿ ಪಡೆದ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದ ಜಾತ್ರಾ ಮಹೋತ್ಸವದ ರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ಸೋಮವಾರ ಅದ್ಧೂರಿಯಾಗಿ ನೆರವೇರಿತು.ಬೆಳಗ್ಗೆ ೮ ಕ್ಕೆ ಚಕ್ರವರ್ತಿ ದಾನೇಶ್ವರಶ್ರೀ ಭಾವಚಿತ್ರದೊಂದಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಆದಿನಂದೀಶ್ವರ ರಥೋತ್ಸವ ಜರುಗಿತು. ಜಾತ್ರಾ ಮಹೋತ್ಸವದಲ್ಲಿ ನಾಡಿನ ಹಲವರು ಮಠಾಧೀಶರು ಪಾಲ್ಗೊಂಡಿದ್ದರು. ಕಣ್ಣು ಹಾಯಿಸಿದಷ್ಟು ಜನಸಾಗರವೇ ಮಹಾರಥೋತ್ಸವದಲ್ಲಿ ಪಾಲ್ಗೊಂಡಿತ್ತು, ಭಕ್ತರ ಹರ್ಷೋದ್ಗಾರದ ಮಧ್ಯೆ ಅದ್ಧೂರಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಶಾಸಕ ಸಿದ್ದು ಸವದಿ, ಇದು ಬರೀ ತೇರಲ್ಲ, ಜನರ ತೇರು. ಪ್ರತಿಯೊಬ್ಬನಲ್ಲೂ ಆದಿನಂದೀಶ್ವರ ನೆಲೆಸಿದ್ದಾನೆ. ಅಂತೆಯೇ ಜಾತ್ರೆ ಸೇರಿದಂತೆ ದಿನಂಪ್ರತಿ ಕ್ವಿಂಟಾಲ್ಗಟ್ಟಲೇ ದವಸ ಧಾನ್ಯ ಹರಿದು ಬರುತ್ತದೆ. ಅದು ಮತ್ತೆ ಜನರಿಗೆ ಸಮರ್ಪಣೆಯಾಗುತ್ತದೆ ಚಕ್ರವರ್ತಿ ದಾನೇಶ್ವರ ಶ್ರೀಗಳ ಆಶೀರ್ವಾದದಿಂದ ನಿತ್ಯ ಅನ್ನದಾಸೋಹ ಮಠದಿಂದ ಜರುಗುತ್ತಿರುವುದು ವಿಶೇಷವೆಂದರು.
ಹಾಲುಗ್ಗಿ, ಹೋಳಿಗೆ, ಮಾವಿನ ಶೀಕರಣೆ, ಹಾಲು, ತುಪ್ಪು, ರೊಟ್ಟಿ ,ಪಲ್ಲೆ, ಚಪಾತಿ, ಭಜಿ, ಅನ್ನ ಸಾಂಬಾರ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಬಂಡಿಗಣಿಮಠಕ್ಕೆ ಆಗಮಿಸಿದ್ದರು. ಚಕ್ರವರ್ತಿ ದಾನೇಶ್ವರ ಅಭಿವೃದ್ಧಿ ಸೇವಾ ಸಂಘದ ಸದಸ್ಯರೊಂದಿಗೆ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು.