ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪ್ಲೇಸ್ಟೆಂಟ್ ಸೆಲ್ ಹಾಗೂ ಪಿಎಂ ಉಷಾ ಯೋಜನೆ ಸಾಫ್ಟ್ ಕಾಂಪೊನೆಂಟ್ ಕಾರ್ಯಕ್ರಮದಡಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಇಂದು ನಿರುದ್ಯೋಗಿಗಳು ದಂಗೆ ಎದ್ದಿರುವ ಕಾಲದಲ್ಲಿ ಒಂದಿಷ್ಟು ನಮ್ಮ ಭಾಗದ ಯುವಕರಿಗೆ ಉದ್ಯೋಗವನ್ನು ಕೊಡಿಸಬೇಕೆಂಬ ನಿಟ್ಟಿನಲ್ಲಿ ಪ್ರತಿಷ್ಠಿತ ಎಂಟು ಕಂಪನಿಗಳನ್ನು ಆಹ್ವಾನಿಸಲಾಗಿದೆ. 390 ಮಂದಿಗೆ ಉದ್ಯೋಗ ನೀಡಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಮಾನವ ಅಭಿವೃದ್ಧಿ ಕಂಪನಿ ಮ್ಯಾನೇಜರ್ ಮನ್ಮಥ ಮಾತನಾಡಿ, ಉದ್ಯೋಗಗಳು ಲಕ್ಷಾಂತರ ಇವೆ. ಯುವಕರಲ್ಲಿ ಕಂಪ್ಯೂಟರ್ ಜ್ಞಾನ, ವಿವಿಧ ಉದ್ಯೋಗಾಧಾರಿತ ಕೌಶಲ್ಯಗಳು ಇದ್ದರೆ ಉತ್ತಮ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಮೇಳಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆಯ್ಕೆಯಾದವರಿಗೆ ಸಂಜೆಯೆ ಉದ್ಯೋಗ ಪ್ರಮಾಣ ಪತ್ರಗಳನ್ನು ಪ್ರಾಂಶುಪಾಲರ ಕಡೆ ನೀಡುತ್ತೇವೆ ಎಂದರು.ಪಿ.ಎಂ.ಉಷಾ ವಿಭಾಗದ ಸಂಚಾಲಕರಾದ ಡಾ.ಎ.ದೇವಿಕ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರದ ಆಶಯದಂತೆ ಪದವಿ ಪಡೆದ ಯುವಕರಿಗೆ ಉದ್ಯೋಗವನ್ನು ವಿವಿಧ ಕಂಪನಿಗಳಲ್ಲಿ ಕೊಡಿಸುವ ಕೆಲಸವನ್ನು ಕಾಲೇಜು ಮಾಡುತ್ತಿದೆ ಎಂದರು.
ಕಾಲೇಜಿನ ಪ್ಲೇಸ್ಟೆಂಟ್ ಸೆಲ್ ಅಧಿಕಾರಿ ಭರತ್ ಬಿ.ಟಿ.ಮಾತನಾಡಿ, ಈಗಾಗಲೇ ಬಿಇ, ಎಂಕಾಂ, ಬಿಎಸ್ಸಿ, ಬಿಎ, ಬಿಕಾಂ, ಎಂಎಸ್ಡಬ್ಲ್ಯೂ, ಬಿಬಿಎ, ಎಂಬಿಎ ಮಾಡಿರುವ 170 ಅಭ್ಯರ್ಥಿಗಳು ಆನ್ಲೈನ್ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಉದ್ಯೋಗ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಧ ಕಂಪನಿಗಳ ಸಂಚಾಲಕರಾದ ಪ್ರಶಾಂತ್, ಸುಸ್ಮಿತಾ, ವಿನುತಾ ಬಾಲರಾಜು, ಸ್ನೇಹ, ಹರ್ಷಿತ, ಡಾ.ರಾಜೇಶ್ವರಿ, ಮಹಂತೇಶ್, ಎಸ್.ಎಲ್.ಎನ್.ಮೂರ್ತಿ, ರಾಮಪ್ಪ ಜಿ.ಎಸ್, ಐಕ್ಯೂಎಸಿ ಸಂಚಾಲಕ ಮೊಹಮ್ಮದ್ ಸಾದತ್, ಹೇಮಲತ ಬಿ.ಆರ್, ಡಾ.ಗಂಗಾಧರ್ ಆರ್, ಬಸವರಾಜು ಟಿ, ಲಕ್ಷ್ಮಣನಾಯಕ್, ವಲಿ ಆರ್, ತಿಪ್ಪೇಶ್, ಮಹಾಲಿಂಗಪ್ಪ, ಶ್ರೀಧರ ಮೂರ್ತಿ, ಡಾ.ರೇಖಾ, ಜಯಶ್ರೀ, ಡಾ.ವೆಂಕಟೇಶ್, ಮಂಜುನಾಥ್, ಕಚೇರಿ ಮೇಲ್ವಿಚಾರಕ ನರಸಿಂಹಮೂರ್ತಿ ಪಿ.ಎನ್ ಮುಂತಾದವರು ಹಾಜರಿದ್ದರು.