ಕನ್ನಡಪ್ರಭ ವಾರ್ತೆ ಮಳವಳ್ಳಿ

ಕನ್ನಡ ನಾಡು-ನುಡಿ, ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ ಬಜೆಟ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ ಅನುದಾನ ನೀಡುವಲ್ಲಿ ನಿರಾಸಕ್ತಿ ತೋರಿಸಿದೆ ಎಂದು ಕರ್ನಾಟಕ ಗೃಹಮಂಡಳಿ ಆಯುಕ್ತ ಕೆ.ಎ.ದಯಾನಂದ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ತಳಗವಾದಿ ಗ್ರಾಮದಲ್ಲಿ ಶ್ರೀಚಿರಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್‌ನಿಂದ ನಡೆದ ಮಹಿಳಾ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾಷಣದ ಉದ್ದಕ್ಕೂ ಸಂಸ್ಕೃತಿ, ನಾಡು, ನುಡಿ, ಧರ್ಮ ಬಗ್ಗೆ ಮಾತನಾಡಲಾಗುತ್ತದೆ. ಆದರೆ, ನಾಡಿನ ಸಂಸ್ಕೃತಿಯ ಅರಿವನ್ನು ತಿಳಿಸುವ ಕನ್ನಡ ಸಂಸ್ಕೃತಿ ಇಲಾಖೆಗೆ ಬಜೆಟ್‌ನಲ್ಲಿ ಕೇವಲ ಶೇ.1 ಅಥವಾ 2ರಷ್ಟು ಮಾತ್ರ ಅನುದಾನ ಮೀಸಲಿಡುವುದು ವಿಷಾದನೀಯ ಎಂದರು.

ಜಾನಪದ ಗ್ರಾಮೀಣ ಬದುಕಿನ ಭಾಗವಾಗಿದೆ. ಭಾವನೆ, ನೋವು, ಸುಖ ದುಃಖಗಳನ್ನು ಹೊರ ಹಾಕುವ ಸಾಧನವಾಗಿದೆ. ಇತ್ತಿಚಿನ ದಿನಗಳಲ್ಲಿ ಸತ್ಯವಂತರ ರೀತಿಯಲ್ಲಿ ಮಾತನಾಡುತ್ತಾರೆ. ಆದರೆ, ನಡೆ ನುಡಿ ಬೇರೆಯಾಗಿಯೇ ಇರುತ್ತದೆ. ನಡೆನುಡಿಗಳನ್ನು ಒಂದಾಗಿಸಿದರೇ ಸುಂದರ ಬದುಕನ್ನು ಕಾಣಬಹುದಾಗಿದೆ ಎಂದರು.

ಮಹಾ ಭಾರತ ಜೀವನ ಮೌಲ್ಯಗಳನ್ನು ತಿಳಿಸುವಲ್ಲಿ ಸಹಕಾರಿಯಾಗಿದೆ. ಪ್ರತಿಯೊಬ್ಬರು ಓದು ಅರ್ಥೈಸಿಕೊಂಡರೇ ಜೀವನ ಸಾರ್ಥಕಗೊಳಿಸಿಕೊಳ್ಳಬಹುದು. ಪೂಜಾ ಕುಣಿತ ಕೇವಲ ಗಂಡಿಗೆ ಮಾತ್ರ ಎಂಬ ಉದ್ದೇಶದಿಂದ ಗಂಡು ಕಲೆ ಎಂದು ಕರೆಯಲಾಗುತ್ತಿತ್ತು. ಆದರೆ, ಹೆಣ್ಣು ಕೂಡ ಪುರುಷನಷ್ಟೆ ಪೂಜಾ ಕುಣಿತವನ್ನು ಮಾಡಬಹುದು ಎನ್ನುವುದನ್ನು ಸವಿತ ಚೀರು ಕುನ್ನಯ್ಯ ಜಗತ್ತಿಗೆ ತೋರಿಸಿದರು. ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿದ್ದು, ಪ್ರತಿಯೊಬ್ಬರ ಸಹಕಾರ ಆಗತ್ಯವಾಗಿದೆ ಎಂದರು.


ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜಾನಪದ ಉಳಿಸಲು ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ. ಮಂಡ್ಯ ಜಿಲ್ಲೆ ಜಾನಪದ ಬೀಡಲಾಗಿದೆ. ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಾಗಿದೆ. ಕಲಾವಿದರ ಬದುಕಿನಲ್ಲಿ ಸರ್ಕಾರ ಸಹಾಯ ಮಾಡದೇ ಹೋದರೆ ಜಾನಪದ ಉಳಿಯುವುದಿಲ್ಲ. ಜಾನಪದ ಕಲಾವಿದರಿಗೆ ವಿಶೇಷ ಆದ್ಯತೆ ನೀಡಬೇಕಿದೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನಾ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ವೇದಿಕೆ ವರೆಗೆ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಚಾಲನೆ ನೀಡಿದರು. ವೇದಿಕೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌ ಮಲ್ಲಿಕಾರ್ಜುನಸ್ವಾಮಿ, ಡಾ.ಬಿ.ವಿ.ನಂದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ. ಶ್ರೀಚಿರಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್ ಅಧ್ಯಕ್ಷೆ ಸವಿತ ಚೀರುಕುನ್ನಯ್ಯ, ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಕೆ.ರಾಜು, ಟಿಎಪಿಸಿಎಂಎಸ್ ನಿರ್ದೇಶಕ ವಿಶ್ವ ದಿಲೀಪ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹನುಮಂತು, ಮುಖಂಡರಾದ ರಾಮಣ್ಣ, ಟಿ.ಎಂ.ಪ್ರಕಾಶ್, ಸೋಮೇಗೌಡ, ಕಿರಣ್, ಚಿಕ್ಕೇಗೌಡ, ಶಿವಕುಮಾರ್ ಸೇರಿದಂತೆ ಇತರರು ಇದ್ದರು.