ಸರ್ಕಾರಕ್ಕೆ ಹಣದ ಲೆಕ್ಕ ಕೇಳೋರ್‌ ಬೇಕು: ರವಿ ಚನ್ನಣ್ಣವರ್‌

| Published : Feb 09 2025, 01:15 AM IST

ಸಾರಾಂಶ

ಜಾತ್ರೆಯಾಗಲಿ, ಸರ್ಕಾರದ ಯೋಜನೆಗಳಾಗಲಿ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಸುಧಾರಣೆ ತರದಿದ್ದರೆ, ಅದು ಅಪ್ರಯೋಜಕ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ವಾಸ್ತವಿಕತೆ ಮರೆತು, ಬರೀ ಗತವೈಭವದ ಭ್ರಮೆಯಲ್ಲಿ ಕಳೆದರೆ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚನ್ನಣ್ಣನವರ್‌ ಹರಿಹರದಲ್ಲಿ ಹೇಳಿದ್ದಾರೆ.

- ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ನೌಕರರ ಗೋಷ್ಠಿ -ಕಾರ್ಯಾಗಾರ ಉದ್ಘಾಟನೆ । ದುಡಿದರೆ ಮಾತ್ರ ಬದುಕು ಎಂದ ಅಧಿಕಾರಿ- - - ಕನ್ನಡಪ್ರಭ ವಾರ್ತೆ ಹರಿಹರ ಜಾತ್ರೆಯಾಗಲಿ, ಸರ್ಕಾರದ ಯೋಜನೆಗಳಾಗಲಿ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಸುಧಾರಣೆ ತರದಿದ್ದರೆ, ಅದು ಅಪ್ರಯೋಜಕ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ವಾಸ್ತವಿಕತೆ ಮರೆತು, ಬರೀ ಗತವೈಭವದ ಭ್ರಮೆಯಲ್ಲಿ ಕಳೆದರೆ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚನ್ನಣ್ಣನವರ್‌ ಹೇಳಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಆಯೋಜಿಸಿದ್ದ ನೌಕರರ ಗೋಷ್ಠಿ ಮತ್ತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

70 ವರ್ಷಗಳಲ್ಲಿ ಜನರ ವರಮಾನ ₹10 ಸಾವಿರ ದಾಟಿಲ್ಲ ಎನ್ನುವುದಾದರೆ, ದಲಿತ ಕವಿ ಹೇಳಿದಂತೆ ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾಂತಂತ್ರ್ಯ ಎಂಬಂತೆ ಆಗುತ್ತದೆ. ಸ್ವಾತಂತ್ರ್ಯ ಬಡವರ ಮನೆಗೆ ಆಶಾಕಿರಣ ತರಲಿಲ್ಲ. ಸರ್ಕಾರ ರಾಜ್ಯದ 27 ಸಾವಿರ ಹಳ್ಳಿಗಳ, 6 ಸಾವಿರ ಗ್ರಾ.ಪಂ.ಗಳಿಗೆ ಮೀಸಲಿಡುವ ಹಣದ ಲೆಕ್ಕ ಕೇಳುವ ಪ್ರತಿ ಹಳ್ಳಿಯ 10 ಜನರನ್ನು ತಯಾರಿಸಬೇಕಿದೆ ಎಂದ ಅವರು, ಮೂರ್ತಿ ಪೂಜೆ, ವ್ಯಕ್ತಿ ಪೂಜೆ ಬದಲು ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂದು ದುಡಿದರೆ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮಾತನಾಡಿ, ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆಯಿದೆ. 5.12 ಲಕ್ಷ ನೌಕರರಿದ್ದಾರೆ. 2.60 ಲಕ್ಷ ಹುದ್ದೆ ಖಾಲಿ ಇವೆ. ನೌಕರರ ಮೇಲೆ ಅಪಾರ ಒತ್ತಡವಿದೆ. ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ನೌಕರರಿಗೆ ಕಾರ್ಯಕ್ಷಮತೆ ಆಧಾರಿತ ಬಡ್ತಿ ನೀಡುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದೆ. ಆ ವ್ಯವಸ್ಥೆ ಬಂದರೆ ಅರ್ಹತೆ ಇದ್ದವರಿಗೆ ಅವಕಾಶವಾಗುತ್ತದೆ ಎಂದರು.

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ರಾಜಕಾರಣಿಗಳಿಗೆ 5 ವರ್ಷ ಅಧಿಕಾರವಾದರೆ, ಸರ್ಕಾರಿ ನೌಕರರು 60ನೇ ವರ್ಷ ಸತತವಾಗಿ ಅಧಿಕಾರದಲ್ಲಿರುತ್ತಾರೆ. ನೌಕರರ ಪ್ರಾಮಾಣಿಕ ಸೇವೆಯಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಸಮಾಜದ ಯುವಜನರು ಕೇವಲ ಸರ್ಕಾರಿ ನೌಕರಿ ನೆಚ್ಚಿಕೊಳ್ಳಬಾರದು. ಉದ್ಯಮ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಅಂಬೇಡ್ಕರ್, ಪೆರಿಯಾರ್, ಎಲ್.ಜಿ. ಹಾವನೂರು ಅವರನ್ನೂ ಹೀನಾಯವಾಗಿ ನಡೆಸಿಕೊಂಡಿರುವ ಈ ಸಮಾಜದಲ್ಲಿ ಹೋರಾಟ ನಡೆಸಿ, ಮೇಲೆ ಬರುವ ಸವಾಲು ನಿಮ್ಮ ಮುಂದಿದೆ ಎಂದು ತಿಳಿಸಿದರು.

ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ ಸಾನಿಧ್ಯ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್. ಮಂಜುನಾಥ್ ಉಪನ್ಯಾಸ ನೀಡಿದರು. ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಪಿ. ಜಗದೀಶ್ವರ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ, ಬೆಳಗಾವಿ ಅಬಕಾರಿ ಉಪ ಆಯುಕ್ತ ಡಾ. ವೈ.ಮಂಜುನಾಥ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಜಿಪಂ ಸಿಇಒ ಸುರೇಶ್ ಬಿ.ಹಿಟ್ನಾಳ್, ಪರಿಶಿಷ್ಟ ಪಂಗಡ ನೌಕರರ ಸಂಘದ ಗೌರವಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಇತರರಿದ್ದರು.

- - - -08ಎಚ್‍ಆರ್‍ಆರ್06: ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ನೌಕರರ ಗೋಷ್ಠಿಯಲ್ಲಿ ರವಿ ಡಿ. ಚನ್ನಣ್ಣವರ್‌ ಮಾತನಾಡಿದರು. -08ಎಚ್‍ಆರ್‍ಆರ್ 06ಎ: ನೌಕರರ ಗೋಷ್ಠಿಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಉದ್ಘಾಟಿಸಿದರು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ ಸಾನಿಧ್ಯ ವಹಿಸಿದ್ದರು. ರವಿ ಡಿ. ಚನ್ನಣ್ಣನವರ್ ಇತರರು ಉಪಸ್ಥಿತರಿದ್ದರು.