ಕುಶಾಲನಗರ ತಾಲೂಕಿನಲ್ಲಿ ಪಂಚಾಯತ್ ರಾಜ್ ಲೋಕೋಪಯೋಗಿ ಇಲಾಖೆಗಳ ಉಪವಿಭಾಗ ತೆರೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸಣ್ಣೇಗೌಡ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನಲ್ಲಿ ಪಂಚಾಯತ್ ರಾಜ್ ಲೋಕೋಪಯೋಗಿ ಇಲಾಖೆಗಳ ಉಪವಿಭಾಗ ತೆರೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸಣ್ಣೇಗೌಡ ಮನವಿ ಮಾಡಿದ್ದಾರೆ. ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ತಾಲೂಕಿನಲ್ಲಿ ನೆಲ್ಲಿ ಹುದಿಕೇರಿಯಿಂದ ಶಿರಂಗಾಲ ತನಕ ಕಾರ್ಯಯೋಜನೆಗಳ ಒತ್ತಡ ಅಧಿಕವಾಗಿದ್ದು ಪ್ರತ್ಯೇಕ ಕುಶಾಲನಗರ ಉಪವಿಭಾಗ ತೆರೆಯುವ ಅಗತ್ಯತೆ ಇದೆ ಹೇಳಿದ್ದಾರೆ. ಹಿಂದೆ ಹೋಬಳಿ ಕ್ಷೇತ್ರವಾಗಿದ್ದ ಕುಶಾಲನಗರ ಇದೀಗ ಕಳೆದ ಮೂರು ವರ್ಷಗಳ ಹಿಂದೆ ನೂತನ ತಾಲೂಕಾಗಿ ರಚನೆಯಾಗಿದೆ. ಈ ಸಂಬಂಧ ಉಪ ವಿಭಾಗ ಕಚೇರಿಗಳನ್ನು ತೆರೆಯಲು ಕ್ಷೇತ್ರ ಶಾಸಕರು ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಹೊರ ಭಾಗದ ಗುತ್ತಿಗೆದಾರರು ಕಾಮಗಾರಿ ಟೆಂಡರ್ ಸಂದರ್ಭದಲ್ಲಿ ಹಸ್ತಕ್ಷೇಪ ಮಾಡದೆ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ, ಅವಕಾಶ ನೀಡಬೇಕಾಗಿದೆ ಎಂದು ಅವರು ಹೇಳಿದರು. ಪ್ರಸಕ್ತ ಗುತ್ತಿಗೆದಾರರು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸೇರಿ ಕಾಮಗಾರಿ ನಡೆಸಿರುವ ಅಂದಾಜು 200 ಕೋಟಿ ಅಧಿಕ ಬಿಲ್ ಬಾಕಿ ಇರುವುದಾಗಿ ಅವರು ಮಾಹಿತಿ ನೀಡಿದರು.
ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ ಸಭೆ ಇತ್ತೀಚೆಗೆ ನಡೆದು ಅಧ್ಯಕ್ಷರಾಗಿ ಸಣ್ಣೇಗೌಡ, ಗೌರವಾಧ್ಯಕ್ಷರಾಗಿ ಬಿಎಸ್ ಜಗದೀಶ್ ವಿ ಟಿ ದಿನೇಶ್ ಕೆ ಟಿ ಅರುಣ್ ಕುಮಾರ್ ಉಪಾಧ್ಯಕ್ಷರಾಗಿ ದೊರೆಸ್ವಾಮಿ, ಎಂ ಆರ್ ಉತ್ತಪ್ಪ, ಕಾರ್ಯದರ್ಶಿಯಾಗಿ ಬಿ ಸಿ ಮುರಳಿದರ್, ಸಹ ಕಾರ್ಯದರ್ಶಿಯಾಗಿ ಎಂ ಸಿ ಅನಿಲ್ ಕುಮಾರ್ ಖಜಾಂಚಿಯಾಗಿ ಆಲೀಫ್, ಸಂಚಾಲಕರಾಗಿ ಬಿ ಎಸ್ ಶಶಿಕಿರಣ್ ಮತ್ತು ಸಲಹೆಗಾರರಾಗಿ ಪುರುಷೋತ್ತಮ ರೈ ಆಯ್ಕೆಯಾಗಿದ್ದಾರೆ. ಸಮಿತಿಗೆ 12 ಮಂದಿ ನಿರ್ದೇಶಕರನ್ನು ನೇಮಿಸಲಾಗಿದೆ ಎಂದು ಸಣ್ಣೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಂ ಆರ್ ಉತ್ತಪ್ಪ ಕಾರ್ಯದರ್ಶಿ ಬಿ ಸಿ ಮುರುಳಿಧರ್ ಖಜಾಂಚಿ ಅಲೀಫ್ ಸಹ ಕಾರ್ಯದರ್ಶಿ ಎಂ ಸಿ ಅನಿಲ್ ಕುಮಾರ್ ಸಂಚಾಲಕರಾದ ಬಿ ಎಸ್ ಶಶಿಕಿರಣ್ ನಿರ್ದೇಶಕರಾದ ಕೆ ಸಿ ಮಧು ಮತ್ತು ಎಂ ಈ ಕುಮಾರ್ ಇದ್ದರು.ಕುಶಾಲನಗರದಲ್ಲಿ ರಸ್ತೆ ಕಾಮಗಾರಿ ಕಳಪೆ ಹಿನ್ನೆಲೆಯಲ್ಲಿ ಶಾಸಕರು ಉದ್ಘಾಟನೆ ಮಾಡದೆ ಹಿಂತಿರುಗಿದ ಘಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರಾದ ಸಣ್ಣೇಗೌಡ ಕುಶಾಲನಗರ ಪಟ್ಟಣದ ನಿಂಗೇಗೌಡ ಬಡಾವಣೆಯಲ್ಲಿ ಅಂದಾಜು 3 ಲಕ್ಷದ ವೆಚ್ಚದಲ್ಲಿ ಸುಮಾರು 120 ಮೀಟರ್ ಉದ್ದದ ರಸ್ತೆ ಡಾಮರೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ ಅಲ್ಲಿನ ಕೆಲವು ಸ್ಥಳೀಯರ ಒತ್ತಾಯದಿಂದ ಶಾಸಕರು ಮಾಹಿತಿಯ ಕೊರತೆಯ ನಡುವೆ ಉದ್ಘಾಟನೆಗೆ ಬಂದಿರುವ ಬಗ್ಗೆ ತಿಳಿಸಿದರು. ಸಂಬಂಧಿಸಿದ ಗುತ್ತಿಗೆದಾರರನ್ನು ಕರೆಸಿ ಅವರಿಗೆ ಅಂದಾಜು ಪಟ್ಟಿಯಂತೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.