ಕಾತರಾಜ ಆಯೋಗ ವರದಿ ಕಸದಬುಟ್ಟಿಗೆ ಎಸೆದ ಸರ್ಕಾರ

| Published : Jul 06 2025, 01:48 AM IST

ಸಾರಾಂಶ

ಕಾಂತರಾಜ ಆಯೋಗ ನೀಡಿದ ವರದಿಯನ್ನು ಬಲಾಢ್ಯ ಸಮುದಾಯಗಳಿಗೆ ಮಣಿದು, ಕಸದ ಬುಟ್ಟಿಗೆ ಎಸೆಯುವ ಮೂಲಕ ರಾಜ್ಯ ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ ಟೀಕಿಸಿದ್ದಾರೆ.

- ಹೊಸ ಸಮೀಕ್ಷೆ ಮಾಡಬೇಕೆಂಬ ಕಾರಣಕ್ಕೆ ಜಾತಿಗಣತಿ ವರದಿ ತಿರಸ್ಕಾರ: ಜಿಬಿವಿ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂತರಾಜ ಆಯೋಗ ನೀಡಿದ ವರದಿಯನ್ನು ಬಲಾಢ್ಯ ಸಮುದಾಯಗಳಿಗೆ ಮಣಿದು, ಕಸದ ಬುಟ್ಟಿಗೆ ಎಸೆಯುವ ಮೂಲಕ ರಾಜ್ಯ ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ ಟೀಕಿಸಿದ್ದಾರೆ.

ಕೇವಲ 90 ದಿನಗಳಲ್ಲಿ ಜಾತಿಗಣತಿ ವರದಿ ರೂಪಿಸುವುದು ತುಂಬಾ ಕಷ್ಟದ ಸಂಗತಿ. ಈಗಾಗಲೇ 24 ದಿನ ಕಳೆದುಹೋಗಿದ್ದು, ಉಳಿದ 45 ದಿನಗಳಲ್ಲಿ ವರದಿ ತುಂಬಾ ಕಷ್ಟವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಹಾಗೂ ಪ್ರತಿ 10 ವರ್ಷದ ನಂತರ ಹೊಸ ಸಮೀಕ್ಷೆ ಮಾಡಬೇಕೆಂಬ ಕಾರಣಕ್ಕೆ ಜಾತಿಗಣತಿ ವರದಿ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

90 ದಿನಗಳಲ್ಲಿ ಮರು ಸರ್ವೇ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಜಾತಿಗಣತಿ ವರದಿ ಜಾರಿಗೆ ಭರವಸೆ ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರ. ಇದೇ ಸರ್ಕಾರ ವರದಿಯ ಅಂಕಿ ಅಂಶಗಳನ್ನು ಬಹಿರಂಗಪಡಿಸಿರುವುದು ಎಸ್ಸಿ- ಎಸ್ಟಿ- ಒಬಿಸಿ ಸಮುದಾಯಗಳಿಗೆ ತೀವ್ರ ಬೇಸರ ತಂದಿದೆ ಎಂದು ದೂರಿದ್ದಾರೆ.

ಶಾಲೆಗಳಲ್ಲಿ ಪ್ರಿಪ್ರೇಟರಿ, ಬೋರ್ಡ್ ಪರೀಕ್ಷೆ ಸಿದ್ಧತೆಯಲ್ಲಿ ಶಿಕ್ಷಕರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಶಿಕ್ಷಕರಿಂದ ಮರುಸರ್ವೇ ಸಾಧ್ಯವಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಕರೆ ತಂದು ಸರ್ವೇ ಮಾಡಿಸುವುದಾಗಿ ಸರ್ಕಾರ ಹೇಳಿದೆ. ಈ ಬಗ್ಗೆಯೂ ಸ್ಪಷ್ಟನೆ ಇಲ್ಲ. ರಾಜ್ಯದ 7.5 ಕೋಟಿ ಜನರ ಮನೆ ಮನೆಗೆ ಹೋಗಿ ಸರ್ವೇ ಮಾಡಲು ಬಾಕಿ ಉಳಿದ ಕೇವಲ 45 ದಿನ ಸಾಲದು ಎಂದು ತಿಳಿಸಿದ್ದಾರೆ.

ಕಾಂತರಾಜ ಆಯೋಗದ ವರದಿ ಶೇ.75ರಷ್ಟುಅಂದರೆ ಸುಮಾರು 4.1 ಕೋಟಿಯಷ್ಟು ಓಬಿಸಿ ಸಮುದಾಯ ಇರುವುದಾಗಿ ಹೇಳಿದ್ದರೆ, ಮತ್ತೊಂದು ವರದಿ ಪ್ರಕಾರ 211 ಕ್ಷೇತ್ರಗಳಲ್ಲಿ ಒಬಿಸಿ ಮತ ನಿರ್ಣಾಯಕ. ಕಾಂತರಾಜ ಆಯೋಗದ ವರದಿ ಬಹಿರಂಗಪಡಿಸಿದರೆ ಕುರ್ಚಿಗೆ ಕುತ್ತು ಬರುತ್ತದೆ, ಅಧಿಕಾರ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೆಲ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ, ವರದಿ ಬಿಡುಗಡೆ ಮಾಡದಂತೆ ಪ್ರಭಾವ ಬೀರಿರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

- - -

(ಕೋಟ್‌)

ಕೆಲವು ಸಂಘಟನೆಗಳು ಸರ್ಕಾರ, ಪಕ್ಷವೊಂದರ ಪರ ಕೆಲಸ ಮಾಡುತ್ತಿರುವಂತಿದೆ. ಸಮಾಜಗಳ ಪರ ಧ್ವನಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. ಸರ್ಕಾರವನ್ನು ಉಳಿಸಲು, ವ್ಯಕ್ತಿಯನ್ನು ಬೆಳೆಸಲು ಹೋರಾಟ ಮಾಡುವುದರಿಂದ ಶೋಷಿತ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲಾಗದು. ಈ ಬಗ್ಗೆ ತುಂಬಾ ಚಿಂತನೆ, ಜಾಗೃತಿ ಮೂಡಿಸಬೇಕು. ಆಗ ಸಮಸಮಾಜ ನಿರ್ಮಾಣ ಸಾಧ್ಯ.

- ಜಿ.ಬಿ.ವಿನಯಕುಮಾರ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ

- - -

-5ಕೆಡಿವಿಜಿ6: ಜಿ.ಬಿ.ವಿನಯಕುಮಾರ