ಸಾರಾಂಶ
ಪ್ರಾಂಶುಪಾಲರೊಬ್ಬರಿಗೆ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಿಸಿ, ಅದನ್ನೀಗ ತಡೆ ಹಿಡಿದು ರಾಜ್ಯ ಸರ್ಕಾರ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ ಪ್ರಾಂಶುಪಾಲರೊಬ್ಬರಿಗೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ಘೋಷಿಸಿ, ಅದನ್ನೀಗ ತಡೆಹಿಡಿದು ರಾಜ್ಯ ಸರ್ಕಾರ ಹೊಸ ವಿವಾದಕ್ಕೆ ನಾಂದಿ ಹಾಡಿದೆ.ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ. ಜಿ. ಅವರಿಗೆ ರಾಜ್ಯ ಸರ್ಕಾರ ಈ ಬಾರಿಯ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಿಸಿತ್ತು.
ಆದರೆ ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಕೆಲ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಹಿಜಾಬ್ ವಿವಾದದ ಸಂದರ್ಭದಲ್ಲಿ ಈ ಪ್ರಾಂಶುಪಾಲರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನೊಳಗೆ ಪ್ರವೇಶಿಸುವುದಕ್ಕೆ ತಡೆದಿದ್ದರು ಎಂಬುದು ಈ ಪ್ರಗತಿಪರರ ಆಕ್ಷೇಪಕ್ಕೆ ಕಾರಣ.ಆದರೆ ಈ ಪ್ರಾಂಶುಪಾಲರು ಅಂದಿನ ಸರ್ಕಾರದ ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸುವಂತಿಲ್ಲ ಎಂಬ ಆದೇಶವನ್ನು ಪಾಲಿಸಿದ್ದರು. ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ಇತರ ವಿದ್ಯಾರ್ಥಿಗಳು ವಿರೋಧಿಸಿ ಪ್ರತಿಭಟಿಸಿದ್ದರಿಂದ, ಪ್ರಾಂಶುಪಾಲರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಬಳಿ ತಡೆದಿದ್ದರು. ಈ ಫೋಟೋವನ್ನು ಬಳಸಿಕೊಂಡು ಕೆಲ ಪ್ರಗತಿಪರರು ಈ ಪ್ರಾಂಶುಪಾಲರು ಹಿಜಾಬ್ ವಿರೋಧಿ ಎಂಬಂತೆ ಬಿಂಬಿಸಿ, ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಒತ್ತಡಕ್ಕೆ ಮಣಿದ ಸರ್ಕಾರ ರಾಮಕೃಷ್ಣ ಬಿ.ಜಿ. ಅವರಿಗೆ ಘೋಷಿಸಲಾಗಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ.