ಸಾರಾಂಶ
- ಸಂಡೂರಿನ ಎನ್ಎಂಡಿಸಿ ಸಂಸ್ಥೆ ಕ್ಯಾಂಪಸ್ನಲ್ಲಿ ದಾವಣಗೆರೆ ವೈಎಚ್ಎಐ ಘಟಕ ಉದ್ಘಾಟಿಸಿ ಡಾ.ರಾಜೀವ್ - - -
ಕನ್ನಡಪ್ರಭ ವಾರ್ತೆ ಹರಿಹರಸದಾ ಬಿಸಿಲ ತಾಪ, ಗಣಿ ಧೂಳಿನಿಂದ ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗಿದ್ದ ಬಿಸಿಲನಾಡು ಸಂಡೂರು ಚಾರಣಿಗರನ್ನು ಕೈಬೀಸಿ ಕರೆಯುವಂಥ ಪರಿಸರದಿಂದ ಕೂಡಿದೆ ಎಂದು ಬೆಂಗಳೂರಿನ ಯೂತ್ ಹಾಸ್ಟೆಲ್ ಅಸೋಸಿಯನ್ ರಾಜ್ಯಾಧ್ಯಕ್ಷ ಡಾ. ಎಲ್.ಕೆ. ರಾಜೀವ್ ಅಭಿಪ್ರಾಯಪಟ್ಟರು.
ಸಂಡೂರಿನ ಎನ್ಎಂಡಿಸಿ ಸಂಸ್ಥೆ ಕ್ಯಾಂಪಸ್ನಲ್ಲಿ ದಾವಣಗೆರೆ ವೈಎಚ್ಎಐ ಘಟಕ ಉದ್ಘಾಟನಾ ಸಮಾರಂಭ, ಸಂಡೂರಿನ ನಾರಿಹಳ್ಳ ಹಾಗೂ ದೋಣಿಮಲೈ ಚಾರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಡೂರಿನ ನಾರಿಹಳ್ಳ, ದೋಣಿಮಲೈನ ಗುಡ್ಡಬೆಟ್ಟಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. ಇಲ್ಲಿನ ಪರಿಸರ ಚಾರಣ ಮತ್ತಷ್ಟು ರೋಮಾಂಚನಗೊಳಿಸಿ, ಪ್ರವಾಸಿಗರು ಹಾಗೂ ಚಾರಣಿಗರ ಮನಸಿಗೆ ಮುದ ನೀಡುತ್ತದೆ. ಮಹಾತ್ಮ ಗಾಂಧೀಜಿ ಸಂಡೂರಿಗೆ ಬಂದಾಗ, "ಸಂಡೂರನ್ನು ಸೆಪ್ಟಂಬರಿನಲ್ಲಿ ನೋಡಿ " ಎಂದು ಅಂದಿದ್ದರಂತೆ. ಇದರಿಂದ ಅಲ್ಲಿಯ ಮನಸೂರೆಗೊಳ್ಳುವ ಸುಂದರತೆ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು.
ಸಂಘಟನೆ ಬೆಂಗಳೂರು ಘಟಕದ ಅಧ್ಯಕ್ಷ ಎನ್.ಎಸ್. ಪ್ರಸನ್ನ ಮಾತನಾಡಿ, ಚಾರಣ ಮನಸ್ಸಿನ ಭಾವನೆಗಳನ್ನು ಕ್ರೋಢೀಕರಿಸಲು ಸಹಕಾರಿಯಾಗಿದೆ. ಮಾನಸಿಕ ಒತ್ತಡ ಕಡಿಮೆ ಮಾಡುವ ಮೂಲಕ ಮಾನವೀಯ ಭಾವನೆಗಳನ್ನು ಪ್ರಕೃತಿಯೊಡನೆ ಬೆರೆಸುವ ಕೆಲಸ ಮಾಡುತ್ತದೆ ಎಂದರು.ಸಂಡೂರಿನ ಚಾರಣ ಮಾರ್ಗದರ್ಶಕ ಜೆಟ್ಟಿನ್ ರಾಜ್ ಹಾಗೂ ರಾಮ್ಘಡ್ ಅವರ ಮಾರ್ಗದರ್ಶನದಲ್ಲಿ 10ರಿಂದ 60 ವರ್ಷದ 60 ಜನರು 2 ದಿನಗಳ ಕಾಲ ಚಾರಣದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಂಡೂರಿನ ನಾರಿಹಳ್ಳ, ಭೈರವ ತೀರ್ಥ ದೇವಸ್ಥಾನ, ತಿಮ್ಮಪ್ಪನ ಗುಂಡಿ, ಅಂತಹ ಕಡಿದಾದ ಬೆಟ್ಟಗಳ ಏರುವುದರಲ್ಲಿ ಚಾರಣಿಗಳು ನಾ ಮುಂದು ನೀ ಮುಂದೆ ಎನ್ನುವಂತೆ ಉತ್ಸಾಹಭರಿತರಾಗಿದ್ದರು. ರಾಷ್ಟ್ರ ಮಟ್ಟದ ಚಾರಣದಲ್ಲಿ ಭಾಗವಹಿಸಿದ್ದ 64 ವರ್ಷದ ದಾವಣಗೆರೆ ಮೂಲದ ಕೆ. ಜ್ಯೋತಿ ಲಿಂಗಪ್ಪ ದಂಪತಿ ಈ ಚಾರಣದಲ್ಲಿ ಭಾಗಿಯಾಗಿದ್ದರು.
ಎನ್ಎಂಡಿಸಿ ಅಧಿಕಾರಿಗಳು ಚಾರಣಗಳಲ್ಲಿ ಮೂಲಸೌಕರ್ಯ ಒದಗಿಸಿ ಸೇವಾ ಮನೋಭಾವ ತೋರಿದರು. ರಾಜ್ಯ ಕಾರ್ಯದರ್ಶಿ ಡಾ. ಅರವಿಂದ್ ಗೋಪಾಲ್, ಕೋಶಾಧ್ಯಕ್ಷ ಜಿ.ಗಣಪತಿ, ಸದಸ್ಯ ಫಣೀಂದ್ರ, ಎನ್ಎಂಡಿಸಿಯ ಸಿಜಿಎಂ ಎಸ್.ಬಿ. ಸಿಂಗ್, ಜಿಎಂ ಕೆ.ಪಿ. ಸಿಂಗ್, ಹಣಕಾಸು ಶಾಖೆ ಎಚ್ಒಡಿ ಮಹಾಬಾತ್ರ, ದಾವಣಗೆರೆ ಘಟಕದ ಸಿಎ ನಂದೀಶ್ ಹೊಸಮಠ, ಜಿ.ಕೆ. ವಿನಾಯಕ, ವಿವಿಧ ಜಿಲ್ಲೆಗಳಿಂದ ಅಗಮಿಸಿದ ಚಾರಣಿಗರು, ಎನ್ಎಂಡಿಸಿ ಸಿಬ್ಬಂದಿ ಪಾಲ್ಗೊಂಡಿದ್ದರು.- - - ಕೋಟ್ಸ್
ನಾವು ಅನೇಕ ರಾಷ್ಟ್ರಮಟ್ಟದ ಚಾರಣಗಳಲ್ಲಿ ಭಾಗವಹಿಸಿದ್ದೇವೆ. ಸಂಡೂರಲ್ಲಿ ಇಂಥ ಅತ್ಯದ್ಭುತ ಚಾರಣ ಸ್ಥಳ ಇದೆ ಎಂದು ಅನೇಕರಿಗೆ ಗೊತ್ತಿಲ್ಲ. ಈ ದಿನ ಜೀವನದ ಕೊನೆವರೆಗೆ ಮರೆಯದಂಥ ಕ್ಷಣ. ದಾವಣಗೆರೆಯ ಮೊಟ್ಟಮೊದಲ ಘಟಕ ಆರಂಭ, ಚಾರಣ ಏರ್ಪಡಿಸಿ ಸಕಲ ಸೌಕರ್ಯಗಳೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿ ಶ್ಲಾಘನೀಯ- ಡಾ.ಅನಸೂಯ ದೇಸಾಯಿ, ಸೆಂಟ್ ಜಾನ್ಸ್ ಹಾಸ್ಪಿಟಲ್ ಬೆಂಗಳೂರು
ನವಚಾರಣ ಘಟಕವನ್ನು ನೆನೆದರೆ ಮನಸಲ್ಲೊಂದು ಪುಳಕ. ಬಯಲಸೀಮೆಯ ಕಾನನದ ಮಧ್ಯೆ ಬದುಕಿನ ಪಯಣ ಕೆಲವರಿಗೆ ಸಿಹಿ ಹೂರಣ, ಹಲವರಿಗೆ ಕಹಿ ಚೂರಣ. ಮತ್ತೆ ಯಾರದ್ದೋ ಬದುಕಿಗೆ ತಳಿರು ತೋರಣ. ಒಟ್ಟಿನಲ್ಲಿ ಈ ಬದುಕೊಂದು ಭವ್ಯ ಚಾರಣ- ಡಾ. ಸತ್ಯಜಿತ್ ದಾಂಡಗಿ, ಮ್ಯಾಕ್ಸಿಲೊಫೇಷಿಯಲ್ ಸರ್ಜನ್, ಬೆಂಗಳೂರು
- - --ಚಾರಣ1:
ಸಂಡೂರಿನ ಎನ್ಎಂಡಿಸಿ ಸಂಸ್ಥೆ ಕ್ಯಾಂಪಸ್ನಲ್ಲಿ ದಾವಣಗೆರೆ ವೈಎಚ್ಎಐ ಘಟಕ ಉದ್ಘಾಟನೆ ಸಮಾರಂಭದಲ್ಲಿ ಚಾರಣಿಗರು ಪಾಲ್ಗೊಂಡರು.