ಸಾರಾಂಶ
ಕಳೆದ 2 ವರ್ಷದಲ್ಲಿ ತಾಲೂಕಿಗೆ ಮೂರು ಪಶು ಚಿಕಿತ್ಸಾಲಯ ಮಂಜೂರು ಮಾಡಿಸಿ ಉದ್ಘಾಟಿಸಲಾಗಿದೆ. ನನಗೆ ಶಿಕ್ಷಣವೇ ಇಲ್ಲ ಎನ್ನುತ್ತಿದ್ದ ನನಗಿಂತ ಬಹಳ ವಿದ್ಯಾವಂತ ಸಂಭಾವಿತರು 10 ವರ್ಷಗಳ ಕಾಲ ಶಾಸಕರಾಗಿದ್ದರೂ ಕೂಡ ತಾಲೂಕಿಗೆ ಒಂದು ಪಶು ಆಸ್ಪತ್ರೆ ಮಂಜೂರು ಮಾಡಿಸಿದ್ದರೆ ತಿಳಿಸಿ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜನರ ಆರೋಗ್ಯ ಮತ್ತು ಜೀವನ ಎಷ್ಟು ಮುಖ್ಯವೋ ಜಾನುವಾರುಗಳ ಆರೋಗ್ಯವೂ ಕೂಡ ಅಷ್ಟೇ ಮುಖ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ನಾಗಲಾಪುರ ಮತ್ತು ಸಣಬ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಲಾಳನಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.
ಕಳೆದ 2 ವರ್ಷದಲ್ಲಿ ತಾಲೂಕಿಗೆ ಮೂರು ಪಶು ಚಿಕಿತ್ಸಾಲಯ ಮಂಜೂರು ಮಾಡಿಸಿ ಉದ್ಘಾಟಿಸಲಾಗಿದೆ. ನನಗೆ ಶಿಕ್ಷಣವೇ ಇಲ್ಲ ಎನ್ನುತ್ತಿದ್ದ ನನಗಿಂತ ಬಹಳ ವಿದ್ಯಾವಂತ ಸಂಭಾವಿತರು 10 ವರ್ಷಗಳ ಕಾಲ ಶಾಸಕರಾಗಿದ್ದರೂ ಕೂಡ ತಾಲೂಕಿಗೆ ಒಂದು ಪಶು ಆಸ್ಪತ್ರೆ ಮಂಜೂರು ಮಾಡಿಸಿದ್ದರೆ ತಿಳಿಸಿ ಎಂದು ಮಾಜಿ ಶಾಸಕ ಸುರೇಶ್ಗೌಡರನ್ನು ಜರಿದರು.ಸಹಕಾರ ಸಂಘಗಳ ಮೂಲಕ ತಾಲೂಕಿನ ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ 200 ಕೋಟಿ ರು. ಬಡ್ಡಿ ರಹಿತ ಸಾಲ ನೀಡಲಾಗಿದೆ. ಇಷ್ಟೆಲ್ಲಾ ಒಳ್ಳೆಯ ಕಾರ್ಯಕ್ರಮ ಕೊಟ್ಟರೂ ಮಹಿಳೆಯರಿಗೂ ತೃಪ್ತಿ ಇಲ್ಲವಲ್ಲ ಎಂಬುದೇ ನಮ್ಮ ಚಿಂತೆ. ನಾನು ಮಾಡಿರುವ ತಪ್ಪಾದರೂ ಏನೆಂಬುದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಲಾಳನಕೆರೆ ಗ್ರಾಪಂ ಅಧ್ಯಕ್ಷ ಸಿ.ಎನ್.ಮಂಜೇಶ್, ಮನ್ಮುಲ್ ನಿರ್ದೇಶಕರಾದ ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಶರತ್ರಾಜ್ ಸೇರಿದಂತೆ ಹಲವರು ಇದ್ದರು.