ಸಾರಾಂಶ
ಪಂಚಶೀಲ - ಅಷ್ಠಾಂಗಮಾರ್ಗ ಪಾಲನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯ ಮುಖ್ಯಸ್ಥ ಬಂತೇ ಬೋಧಿದತ್ತಥೇರಾ ಹೇಳಿದರು.
ಮಂಡ್ಯ: ಪಂಚಶೀಲ - ಅಷ್ಠಾಂಗಮಾರ್ಗ ಪಾಲನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯ ಮುಖ್ಯಸ್ಥ ಬಂತೇ ಬೋಧಿದತ್ತಥೇರಾ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಧ್ಯಾನಮಂದಿರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಆಯೋಜಿಸಿದ್ದ ಭಗವಾನ್ ಬುದ್ಧರ 2568ನೇ ವೈಶಾಖ ಪೂರ್ಣಿಮಾ(ಬುದ್ಧ ಜಯಂತಿ) ಮತ್ತು ಧ್ಯಾನ-ಉಪಾಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮನುಷ್ಯ ಒಳ್ಳೆ ಮಾರ್ಗದಲ್ಲಿ ಜೀವನ ನಡೆಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಲು ಬುದ್ಧರು ಬೋಧಿಸಿದ ಪಂಚಶೀಲ -ಅಷ್ಠಾಂಗ ಮಾರ್ಗ ಪಾಲನೆ ಅತ್ಯವಶ್ಯವಿದೆ. ಬುದ್ಧರ ಜಯಂತಿಯನ್ನು ವಿಶ್ವಾಧ್ಯಂತ ಹಲವು ದೇಶಗಳಲ್ಲಿ ಆಚರಿಸಿ ಭಗವಾನ್ ಬುದ್ಧರ ಸಂದೇಶಗಳನ್ನು ಪಾಲನೆ ಮಾಡಲು ಸಂಕಲ್ಪ ಮಾಡುತ್ತಿದ್ದಾರೆ. ಧ್ಯಾನ ಮತ್ತು ಬುದ್ಧರ ಆರಾಧನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.ಮಹಾಸಭಾ ದಕ್ಷಿಣ ಕರ್ನಾಟಕ ಭಾಗದ ಅಧ್ಯಕ್ಷ ಎಂ.ಸಿ.ಶಿವರಾಜು ಮಾತನಾಡಿ, ಭಗವಾನ್ ಬುದ್ದರ ಪಂಚಶೀಲ-ಅಷ್ಠಾಂಗ ಮಾರ್ಗದೆಡೆಗೆ ಯುವಜನತೆ ಹೆಚ್ಚು ಆಕರ್ಷಿತರಾಗಿ ವೈಜ್ಞಾನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಬೌದ್ಧ ಮಹಾಸಭಾ ಬುದ್ದರ ವಿಚಾರಗಳು, ಭೋಧಿ ಸತ್ವ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ಪ್ರಚುರಪಡಿಸಲು ಸನ್ನದ್ದವಾಗಿದೆ ಎಂದರು. ಈ ವೇಳೆ ಕೊಳ್ಳೇಗಾಲದ ಜೇತನ ಬುದ್ಧ ವಿಹಾರದ ಮುಖ್ಯಸ್ಥ ಮನೋರಖ್ಖಿತ ಬಂತೇಜಿ, ಬೆಂಗಳೂರಿನ ಸ್ಪೂರ್ತಿಧಾಮದ ಲೋಕರತ್ನ ಬುದ್ಧ ವಿಹಾರದ ಮುಖ್ಯಸ್ಥ ಧರ್ಮವೀರ ಬಂತೇಜಿ, ಮಹಾಸಭಾ ಜಿಲ್ಲಾ ಶಾಖೆ ಅಧ್ಯಕ್ಷ ಬಿ.ಅನ್ನದಾನಿ, ಕಾರ್ಯದರ್ಶಿ ಎಸ್.ಪಿ.ನಾರಾಯಣಸ್ವಾಮಿ, ಖಜಾಂಚಿ ಕೆ.ಸಿದ್ದಯ್ಯ, ಉಪಾಸಕರಾದ ಎಸ್.ಸಿದ್ದಯ್ಯ, ಉಪಾಧ್ಯಕ್ಷರಾದ ಎಚ್.ಕೆ.ಚಂದ್ರಹಾಸ, ಡಾ.ಕೆ.ಎಂ.ಸುರೇಶ್, ಪ್ರೊ.ಸಿದ್ದರಾಜು, ನಿವೃತ್ತ ಆಧಿಕಾರಿ ಗುರುಮೂರ್ತಿ ಇದ್ದರು.