ಸಾರಾಂಶ
-ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ವಿಷಾಧ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಗೌರವಿಸದವರ ಕೈಯಲ್ಲಿ ಪ್ರಜಾಪ್ರಭುತ್ವದ ಚುಕ್ಕಾಣಿ ಸಿಗುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ಚಿತ್ರದುರ್ಗ ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಣವಿಲ್ಲದೆ ಒಂದು ಗ್ರಾ.ಪಂ ಚುನಾವಣೆ ಗೆಲ್ಲಲಾಗದಂತಹ ಸ್ಥಿತಿಗೆ ಪ್ರಜಾಪ್ರಭುತ್ವ ಬಂದಿರುವುದಕ್ಕೆ ಕಾರಣ ಯಾರು? ಎಂಬುದನ್ನು ಅರಿಯಬೇಕಾಗಿದೆ.ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಗಟ್ಟಿಗೊಳಿಸಲು ಕರ್ನಾಟಕ ಸರ್ಕಾರವು ಆಚರಿಸುತ್ತಿರುವ 2500ಕಿಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮ ಅಭಿನಂದನಾರ್ಹ ಎಂದರು.
ಹಸಿವು, ಅಸ್ಪ್ರುಶ್ಯತೆ, ಬಡತನ ನಿವಾರಣೆಗಾಗಿ ಕೆಲಸ ಮಾಡುತ್ತಿರುವ ಸಾವಿರಾರು ಸಂಘಟನೆಗಳು, ಪ್ರಗತಿಪರ ಚಿಂತಕರು, ಚುನಾವಣೆಯ ಸಂದರ್ಭದಲ್ಲಿ ಹಣದ ಪ್ರಭಾವದ ಮುಂದೆ ಅಸಹಾಯಕರಾಗಿ ಕೈಚೆಲ್ಲಿ ಕೂರುತ್ತಿರುವುದು ಈ ದೇಶದ ದೌರ್ಭಾಗ್ಯವೇ ಸರಿ. ಹಣವಿದ್ದವರಿಗೆ ಮಾತ್ರ ಹುದ್ದೆ, ಉದ್ಯೋಗ, ಅಧಿಕಾರ ಎಂಬುದು ಜನಸಾಮಾನ್ಯರಿಗೆ ದಿಕ್ಕು ತೋಚದಂತಾಗಿದೆ.ಮತದಾನದ ಹಕ್ಕು ಚಲಾಯಿಸಲು ಮತದಾರನಿಗೆ ಹಣ ನೀಡುವುದು ಕಡ್ಡಾಯವೆನ್ನುವಂತಾಗಿರುವು ದರಿಂದಲೇ ಕಾರ್ಪೊರೇಟರ್ ಗಳ ಹಣತೆಯಂತೆ ರಾಜಕೀಯ ಪಕ್ಷಗಳು ಕುಣಿಯುತ್ತಿವೆ. ಹಣ, ಜಾತಿ ಬಲ ಇರುವ ವ್ಯಕ್ತಿಗಳು ವಿಧಾನಸೌಧ-ಪಾರ್ಲಿಮೆಂಟ್ ಗಳನ್ನು ವಂಶಪಾರಂಪರ್ಯದ ಜಹಾಗೀರ್ ಎಂದುಕೊಂಡಿವೆ ಎಂದರು.
ಜಗತ್ತಿಗೆ ನೈತಿಕತೆ ಬೋಧಿಸಿದ ಬುದ್ದ, ಪ್ರಪಂಚಕ್ಕೆ ಮೊದಲ ಸಂಸತ್ತನ್ನು ಕೊಡುಗೆ ನೀಡಿದ ಬಸವಣ್ಣ ಅವರ ವಿಚಾರಧಾರೆಗಳು ಜನಸಾಮಾನ್ಯರ ದೈನಂದಿನ ಜೀವನದ ಆಚಾರ ವಿಚಾರಗಳ ಮೌಲ್ಯಗಳಾಗದೆ ವೇದಿಕೆಗಳ ಭಾಷಣಗಳಾಗಿರುವುದೇ ದುರಂತ. ಭಾರತದಲ್ಲಿ ಪ್ರಜಾಪ್ರಭುತ್ವ ಅಂತಂಕದಲ್ಲಿರುವುದಕ್ಕೆ ಬಸವಣ್ಣ ಮತ್ತು ಅಂಬೇಡ್ಕರ್ ಅನುಯಾಯಿಗಳಲ್ಲಿನ ಒಗ್ಗಟ್ಟಿನ ಕೊರತೆಯೇ ಕಾರಣ. ಪ್ರಜಾಪ್ರಭುತ್ವಕ್ಕೆ ಘನತೆ ತರಲು ಸಾಧ್ಯವಿರುವುದು ಸಾಮಾನ್ಯ ನಾಗರಿಕನಿಂದ ಮಾತ್ರ ಸಾಧ್ಯ.ಚುನಾವಣೆಯಲ್ಲಿ ಹಣ, ಮದ್ಯ, ಜಾತಿ ಪ್ರೇಮಕ್ಕಾಗಿ ಮತದಾನ ಮಾಡುವುದ ತಿರಸ್ಕರಿಸಿದಾಗಲೇ ಪ್ರಜಾಪ್ರಭುತ್ವ ಗೆಲ್ಲಲು ಸಾಧ್ಯ. ಆಮಿಷ ರಹಿತ ಚುನಾವಣೆಗಳು ನಡೆದಾಗ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಇದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಬೇಕಿದೆ ಎಂದರು.
ಪ್ರಾಂಶುಪಾಲ ಜಿ.ಎಸ್.ಸಿದ್ದಲಿಂಗಮ್ಮ, ನಿವೃತ್ತ ಎಸ್ಐ ಕೃಷ್ಣಪ್ಪ, ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಇಂದೂಧರ್ ಗೌತಮ್, ಸಚಿನ್ ಗೌತಮ್, ಶಿಕ್ಷಕಿ ಉಷಾ, ಶಾಂತಮ್ಮ, ಶಕುಂತಲಾ, ಬನ್ನೀ ಕೋಟ್ ಹನುಮಂತಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಬುರುಜನರೊಪ್ಪ ಹನುಮಂತಪ್ಪ, ರಮೇಶ್, ಗಿರಿಜಾ, ಪವಿತ್ರ, ಅಮೃತಾ ಇದ್ದರು.---------------
ಪೋಟೋ ಕ್ಯಾಪ್ಸನ್ಚಿತ್ರದುರ್ಗದ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಂವಿಧಾನ ಪೀಠಿಕೆ ಪಠಣ ಮಾಡಲಾಯಿತು.
------ಫೋಟೋ ಫೈಲ್ ನೇಮ್- 15 ಸಿಟಿಡಿ5