ಕನ್ನಡಪ್ರಭ ವಾರ್ತೆ ಜಗಳೂರು

ದೇವಸ್ಥಾನ ಬೀಗ ಒಡೆದ ಕಳ್ಳರು ಹುಂಡಿಯಲ್ಲಿದ್ದ ₹1 ಲಕ್ಷಕ್ಕೂ ಅಧಿಕ ಮೊತ್ತದ ಕಾಣಿಕೆ ಹಣ ಕಳವು ಮಾಡಿದ ಘಟನೆ ತಡರಾತ್ರಿ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಸ್ತೆ ಸಮೀಪವೇ ಇರುವ ಮಾದಲಿಂಗೇಶ್ವರ ದೇವಸ್ಥಾನದಲ್ಲಿ ರಾತ್ರಿ ದೇವಸ್ಥಾನದ ಬೀಗ ಮುರಿದು 2 ಕಾಣಿಕೆ ಹುಂಡಿಗಳನ್ನು ಹೊತ್ತೊಯ್ದಿದ್ದಾರೆ. ಬಳಿಕ ಸಮೀಪದ ಹೊಲದಲ್ಲಿ ಕಬ್ಬಿಣದ ಹುಂಡಿ ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಮುಂದಿನ ಮಾರ ಮಾದಲಿಂಗೇಶ್ವರ ಗುಗ್ಗರಿ ಹಬ್ಬ ಇದೆ. ಈ ಕಾರಣಕ್ಕೆ ದೇವಸ್ಥಾನಕ್ಕೆ ಬಣ್ಣ ಬಳಿದು, ಶೃಂಗಾರಗೊಳಿಸಿ ಮೈದಾನ ಸ್ವಚ್ಛಗೊಳಿಸಿ, ಜಾತ್ರೆಗೆ ಸಿದ್ಧತೆ ನಡೆದಿರುವಾಗಲೇ ಹುಂಡಿ ಕಳವು ಘಟನೆ ನಡೆದಿದೆ.

ಈ ಹಿಂದೆ ಸಹ ಕಳ್ಳರು ಎರಡು ಬಾರಿ ಹುಂಡಿ ಹಣ ಕಳವು ಮಾಡಿದ್ದರು. ಆ ಕಳ್ಳರು ಇದುವರೆಗೂ ಪತ್ತೆಯಾಗಿಲ್ಲ ಎಂದು ದೇವಸ್ಥಾನ ಪೂಜಾರಿ ಪುತ್ರ ಪ್ರಹ್ಲಾದ್ ಅಸಮಾಧಾನ ವ್ಯಕ್ತಪಡಿಸಿದರು. ಕಳ್ಳರನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಜಗಳೂರು ಪೊಲೀಸ್ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ ನಟರಾಜ್ ದಪ್ತೇದಾನ್ ಶಿವಪ್ರಕಾಶ್ ಆಗಮಿಸಿ ಸ್ಥಳ ಪರಿಶೀಲಿಸಿ, ದೂರು ದಾಖಲಿಸಿದರು.

- - - -17ಜೆ.ಜಿ.ಎಲ್.1: