ಸಾರಾಂಶ
ಹಾವೇರಿ: ವಿಶ್ವದಲ್ಲಿ ಭಾರತವು ಅಪಾರ ವೈವಿಧ್ಯಮ ರೀತಿಯ ಆಧ್ಯಾತ್ಮಿಕ ಸಿರಿ ಸಂಪತ್ತು ಹೊಂದಿದ್ದು, ಮುನಿಗಳು, ಶರಣರು ಸೇರಿದಂತೆ ಅಲ್ಲಮಪ್ರಭುಗಳು ಈ ಮಣ್ಣಿಗಾಗಿ ತಮ್ಮ ಬದುಕನ್ನು ಸಮರ್ಪಿಸಿದ್ದಾರೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.ನಗರದ ಬಸವ ಕೇಂದ್ರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಏರ್ಪಡಿಸಿದ್ದ ಶರಣ ಸಂಗಮ, ಮಠದಂಗಳದಲ್ಲಿ ಮಹಾಮನೆ ಹಾಗೂ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶೂನ್ಯಪೀಠದ ಪ್ರಥಮ ಅಧ್ಯಕ್ಷರಾಗಿ ಅಲ್ಲಮಪ್ರಭು ಪ್ರಭಾವಿಸುವ ಶಕ್ತಿ ಪಡೆದಿದ್ದರು. ಅವರ ವಚನಗಳ ವೈಚಾರಿಕ ನಿಲುವು ಭಿನ್ನ ಹಾಗೂ ವಿಶಿಷ್ಟ. ಗೂಡಾರ್ಥಗಳ ವಚನಗಳು ಜಗತ್ತಿನ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುತ್ತವೆ. ವ್ಯೋಮಕಾಯದ ನೆಲದ ಮರೆಯ ಮಿಂಚಿನ ವ್ಯಕ್ತಿತ್ವ ಹೊಂದಿದ್ದರು ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಅಲ್ಲಮಪ್ರಭುಗಳ ನಿಲುವು ಅತ್ಯಂತ ಗಾಢ ಚಿಂತನೆಗೆ ಹಾಗೂ ವಚನಗಳಲ್ಲಿ ಉಚ್ಚ- ನೀಚ ಎನ್ನುವುದಕ್ಕಿಂತ ಅಧ್ಯಾತ್ಮಿಕ ದೃಷ್ಟಿಕೋನದಿಂದ ಗ್ರಹಿಸುವ ಬಗೆಯನ್ನು ತೋರಿಸಿಕೊಟ್ಟವರು ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ನನಗೆ ಅಲ್ಲಮಪ್ರಭುಗಳು ಸದಾ ಆಕರ್ಷಣೀಯವಾಗಿ ಕಾಣುವರು. ಅವರ ವೈಚಾರಿಕ ನಿಲುವಿನ ಪ್ರತಿಪಾದನೆ ಅನನ್ಯ. ಶರಣ ಸಂಗಮದಲ್ಲಿ ಅವರ ಜಯಂತಿ ಆಚರಿಸುವುದು ಖುಷಿ ಮೂಡಿಸಿದೆ ಎಂದರು. ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲತಾ ಪಾಟೀಲ ನಿರ್ದೇಶನದಲ್ಲಿ ಕನ್ನಡತಿ ಕಲಾ ತಂಡ ಬೋರ್ವೆಲ್ ನಾಟಕವನ್ನು ಹಾಗೂ ಕರ್ಜಗಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿ.ಎಂ. ಓಂಕಾರಣ್ಣನವರ ನಿರ್ದೇಶನದ ಗಾಂಧಿ ಹಚ್ಚಿದ ಗಿಡ ನಾಟಕ ಪ್ರದರ್ಶಿಸಿದರು.
ಇದಕ್ಕೂ ಮುನ್ನ ಸಾಧಕರಾದ ಲತಾ ಪಾಟೀಲ, ಐಶ್ವರ್ಯ ಕಾಶೆಟ್ಟಿ, ಭೂಮಿಕಾ ರಜಪೂತ ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ರಾಜೇಶ್ವರಿ ಬಿಷ್ಟನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿಸನಳ್ಳಿ, ಮಹೇಶ ಮರಿಬಸಣ್ಣನವರ, ಬಸವೇಶ್ವರಗೌಡ ಪಾಟೀಲ, ಮಂಜುನಾಥ ಸಣ್ಣಿಂಗನವರ, ಚಂಪಾ ಹುಣಸಿಕಟ್ಟಿ, ಕಮಲಾ ಬುಕ್ಕಶೆಟ್ಟಿ, ಕಸ್ತೂರಮ್ಮ ಕಾಶೆಟ್ಟಿ, ತೇಜಸ್ವಿನಿ ಕಾಶೆಟ್ಟಿ ಇದ್ದರು.ಎಂ.ಬಿ. ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಹರನಗಿರಿ ನಿರೂಪಿಸಿದರು. ಅರಳಿಕಟ್ಟಿ ಗೂಳಪ್ಪ ವಂದಿಸಿದರು.