ಕನ್ನಡ ಚಿತ್ರರಂಗದಲ್ಲೀಗ ಹಿಂದಿನ ನಾಯಕತ್ವ ಕಾಣಿಸುತ್ತಿಲ್ಲ

| N/A | Published : May 09 2025, 12:43 AM IST / Updated: May 09 2025, 12:45 PM IST

Vishwanath
ಕನ್ನಡ ಚಿತ್ರರಂಗದಲ್ಲೀಗ ಹಿಂದಿನ ನಾಯಕತ್ವ ಕಾಣಿಸುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವತಃ ಚಿತ್ರನಿರ್ಮಾಪಕರೂ ಆಗಿರುವ ಕನ್ನಡ ಹೋರಾಟಗಾರ ಡಾ.ಜಿ.ಪಿ.ವಿಶ್ವನಾಥ್ ''ಕನ್ನಡಪ್ರಭ''ದೊಂದಿಗೆ ಮುಖಾಮುಖಿ.

ಸಂಪತ್ ತರೀಕೆರೆ

ಕನ್ನಡ ನಾಡು-ನುಡಿ ಮೇಲೆ ಪರಭಾಷಿಕರ ದಾಳಿ ನಿರಂತರವಾಗಿ ನಡೆದಿದೆ. ಇತ್ತೀಚೆಗೆ ಕನ್ನಡ ನೆಲದಲ್ಲೇ ನಿಂತು ಕನ್ನಡಿಗರನ್ನು ಅವಹೇಳನ ಮಾಡುವಂಥ ದಾರ್ಷ್ಟ್ಯವನ್ನು ಪರಭಾಷಿಕರು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಗಾಯಕ ಸೋನು ನಿಗಮ್‌ ಪ್ರಕರಣ ಒಂದು ಉದಾಹರಣೆಯಷ್ಟೇ. ಆದರೆ, ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರ್ನಾಟಕದಲ್ಲೇ ಅಪ್ರತಿಮ ಕಲಾವಿದರು, ತಂತ್ರಜ್ಞರು ಇದ್ದರೂ ಸಿನಿಮಾರಂಗದವರಿಗೆ ಪರಭಾಷಾ ತಂತ್ರಜ್ಞರ ಮೇಲೆ ಏಕೆ ಮೋಹ. ಕನ್ನಡಿಗರನ್ನು ನಿರ್ಲಕ್ಷಿಸಿ ಪರಭಾಷಿಕರ ಬೆನ್ನು ಹತ್ತುವ ಚಟವೇಕೆ? 

ಕನ್ನಡಿಗರೇ ಈ ರೀತಿ ಕನ್ನಡದ ಕಲಾವಿದರನ್ನು ನಿರ್ಲಕ್ಷಿಸಿದರೆ ಏನು ಮಾಡಬೇಕು? ಪರಭಾಷಿಕರು ಬಾಯಿಗೆ ಬಂದಂತೆ ಕನ್ನಡದ ಬಗ್ಗೆ ಮಾತನಾಡದಂತೆ ತಡೆಯಲು ಕನ್ನಡಿಗರು ಹಾಗೂ ಸರ್ಕಾರ ಏನು ಕ್ರಮ ಕೈಗೊಳ್ಳಬೇಕು? ಇಷ್ಟಕ್ಕೂ ಕನ್ನಡಿಗರ ಈ ದಯನೀಯ ಸ್ಥಿತಿಗೆ ಕಾರಣವೇನು? ಕನ್ನಡಿಗರ ನಿರಭಿಮಾನವೇ? ಸರ್ಕಾರದ ನಿರ್ಲಕ್ಷ್ಯವೇ, ಕನ್ನಡ ಸಂಘಟನೆಗಳಲ್ಲಿ ತೀವ್ರವಾಗಿರುವ ನಾಯಕತ್ವದ ಕೊರತೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಸ್ವತಃ ಚಿತ್ರನಿರ್ಮಾಪಕರೂ ಆಗಿರುವ ಕನ್ನಡ ಹೋರಾಟಗಾರ ಡಾ.ಜಿ.ಪಿ.ವಿಶ್ವನಾಥ್ ''''''''ಕನ್ನಡಪ್ರಭ''''''''ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಕನ್ನಡಾಭಿಮಾನವನ್ನು ಪಹಲ್ಗಾಂ ಉಗ್ರ ದಾಳಿಗೆ ಹೋಲಿಸುವಂಥ ದಾರ್ಷ್ಟ್ಯ ನಡೆದಿದೆಯಲ್ಲ? ಇಂಥದ್ದನ್ನು ತಡೆಯೋದು ಹೇಗೆ?

ಕನ್ನಡಿಗರಿಗೆ, ಕನ್ನಡಕ್ಕೆ ಅವಮಾನ ಮಾಡಿದವರಿಗೆ ಚಿತ್ರರಂಗದಿಂದ ನಿಷೇಧ ಹೇರಿದರೆ ಸಾಲದು. ಆರು ತಿಂಗಳು ಇಲ್ಲವೇ ವರ್ಷ ಜೈಲಿಗೆ ಹಾಕಬೇಕು. 50 ಲಕ್ಷ ರು. ದಂಡ ವಿಧಿಸುವಂಥ ಕಾನೂನು ಜಾರಿಗೆ ಬರಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಸಿಕ್ಕಸಿಕ್ಕವರೆಲ್ಲ ಬಾಯಿಗೆ ಬಂದಂತೆ ಕನ್ನಡ, ಕನ್ನಡಿಗರ ಬಗ್ಗೆ ಮಾತನಾಡುತ್ತಾರೆ. ಸೋನು ನಿಗಮ್‌ ಇರಬಹುದು ಅಥವಾ ಇನ್ಯಾರೇ ಇರಬಹುದು. ಎಲ್ಲರಿಗೂ ಈ ಶಿಕ್ಷೆ ಅನ್ವಯ ಆಗಲೇಬೇಕು.

ಅಂದರೆ, ಸರ್ಕಾರ ಇದಕ್ಕಾಗಿಯೇ ಕಾಯ್ದೆಯೊಂದನ್ನು ತರಬೇಕು ಎಂಬುದು ನಿಮ್ಮ ಆಗ್ರಹವೇ?

ಹೌದು, ಇದೊಂದು ಘಟನೆಯಲ್ಲ. ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಈ ಸರ್ಕಾರ ಕಾಯ್ದೆಯೊಂದನ್ನು ರೂಪಿಸಿ ಯಾವುದೇ ರೀತಿಯಲ್ಲಿ ನಾಡು, ನುಡಿ, ಭಾಷೆ, ಸಂಸ್ಕೃತಿ ಬಗ್ಗೆ ಅಗೌರವವಾಗಿ ನಡೆದುಕೊಂಡರೆ, ಅವಮಾನಿಸಿದರೆ ಅಂಥವರಿಗೆ ಇಂತಹ ಶಿಕ್ಷೆ, ದಂಡ ವಿಧಿಸುತ್ತೇವೆ ಎಂಬ ಕಾಯ್ದೆ ತರಬೇಕು. ಈ ಕುರಿತು ಕಾನೂನಿನಲ್ಲೂ ಅವಕಾಶ ಇದೆ. ಈ ರಾಜಕಾರಣಿಗಳು ವೋಟ್‌ ಬ್ಯಾಂಕ್‌ಗಾಗಿ ಇದ್ಯಾವುದನ್ನೂ ತರುತ್ತಿಲ್ಲ. ಶಿಕ್ಷೆ, ದಂಡ ವಿಧಿಸುವವರೆಗೂ ಇಂಥ ಘಟನೆಗಳು ಮರುಕಳಿಸುತ್ತಿರುತ್ತವೆ. ಸರ್ಕಾರ ಉದ್ಧಟತನ ಪ್ರದರ್ಶಿಸುವ ಪರಭಾಷಿಕರಿಗೆ ಆರು ತಿಂಗಳು ಇಲ್ಲವೇ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂಥ ಕಾಯ್ದೆ ತರಬೇಕು. ಸಿನಿಮಾ ರಂಗದಿಂದ ಸೋನು ನಿಗಮ್‌ರನ್ನು ನಿರ್ಬಂಧಿಸಬೇಕು.

ಸೋನು ನಿಗಮ್‌ ಕ್ಷಮೆ ಕೋರಿದ್ದಾರೆ, ಮುಂದೇನು?

ವೇದಿಕೆಯಲ್ಲಿ ಗಾಬರಿಯಲ್ಲೋ ಟೆನ್ಷನ್‌ನಲ್ಲೋ ಏನೋ ಹೇಳಿರಬಹುದು. ಆದರೆ, ನಂತರ ಕನ್ನಡಿಗರಿಂದ ವಿರೋಧ ವ್ಯಕ್ತವಾದ ಕೂಡಲೇ ಕ್ಷಮೆ ಕೋರಬಹುದಿತ್ತು. ಅದರ ಬದಲು ತನ್ನನ್ನು ತಾನು ಸಮರ್ಥಿಸಿಕೊಳ್ಳಲೆತ್ನಿಸಿದರು. ತಪ್ಪುಗಳು ಆಗುತ್ತವೆ, ಆದರೆ ಆ ತಪ್ಪು ಸರಿಪಡಿಸಿಕೊಂಡು ಒಂದು ಕ್ಷಮೆ, ವಿಡಿಯೋ ಹಾಕಿದ್ದರೆ ಸಾಕಿತ್ತು. ಕ್ಷಮೆ ಕೇಳಿದ್ದರೆ ದೊಡ್ಡ ವ್ಯಕ್ತಿಯಾಗುತ್ತಿದ್ದ. ಅಣ್ಣಾವ್ರಿಗೆ ಅವರ ಕಲೆಗೆ ಮಾತ್ರವಲ್ಲ, ಅವರ ವ್ಯಕ್ತಿತ್ವಕ್ಕೂ ಮೇರು ನಟ ಎಂಬ ಗೌರವವಿತ್ತು. ಆದರೆ, ಈ ಸೋನು ನಿಗಮ್‌ನಂಥವರು ಕ್ಷಮೆಗೂ ಯೋಗ್ಯರಲ್ಲ.

ಘಟನೆ ನಡೆದು ವಾರವಾದರೂ ಚಿತ್ರರಂಗದ ಘಟಾನುಘಟಿಗಳು ಸುಮ್ಮನಿದ್ದರಲ್ಲ?

ಅಣ್ಣಾವ್ರು, ವಿಷ್ಣು ಸರ್‌, ಅಂಬರೀಶ್‌ ಅವರಂತಹ ಮೇರು ನಟರಿದ್ದಾಗ ಈ ಭಾಷೆ, ನಾಡು, ನುಡಿ, ನೆಲದ ಬಗ್ಗೆ ಬಹಳ ಅಭಿಮಾನವಿತ್ತು. ಇತ್ತೀಚಿನ ದಿನಗಳಲ್ಲಿ ಕನ್ನಡಿಗರಿಗೆ ಅಥವಾ ಭಾಷೆಗೆ ಏನಾದರೂ ತೊಂದರೆಯಾದರೆ, ಕನ್ನಡಪರ ಹೋರಾಟಗಾರರು ಇದ್ದಾರೆ ಬಿಡು. ಅವರು ನೋಡಿಕೊಳ್ಳುತ್ತಾರೆ ಎಂಬ ಮನೋಭಾವ ಬೆಳೆದಿದೆ. ನಿರ್ಲಕ್ಷ್ಯಕ್ಕೆ ಇದೇ ಕಾರಣ.

ಅಲ್ಲ, ಚಿತ್ರರಂಗಕ್ಕೆ ನಾಯಕತ್ವದ ಕೊರತೆಯಿದೆಯೇ?

ಈ ಹಿಂದೆ ಇದ್ದಂತೆ ಚಿತ್ರರಂಗದಲ್ಲಿರುವ ಈಗಿನ ನಟರು, ನಟಿಯರು, ತಂತ್ರಜ್ಞರು ಸೇರಿ ಇತರರನ್ನು ನಡೆಸುವಂಥ ನಾಯಕತ್ವ ಈಗ ಕಾಣುತ್ತಿಲ್ಲ. ಶಿವಣ್ಣ ಅಥವಾ ರವಿಚಂದ್ರನ್‌ ಅವರಂಥ ಹಿರಿಯ ನಟರು ಈಗ ನಾಯಕತ್ವ ವಹಿಸಿಕೊಳ್ಳಬೇಕು. ಆಗ ಯಾರೇ ಕುಚೇಷ್ಟೆ, ಕಪಿಚೇಷ್ಟೆ ಮಾಡಿದರೂ ಇಂಥ ನಾಯಕರು ಪ್ರತಿಕ್ರಿಯೆ ನೀಡಿ ಇಂಥವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರೆ ಸರ್ಕಾರ ತಕ್ಷಣ ಪರಿಗಣಿಸುತ್ತದೆ. ಆದರೆ, ಯಾರೂ ಮುಂದೆ ಬಂದಿಲ್ಲ. ಪರಿಸ್ಥಿತಿ ಹೀಗೇ ಮುಂದುವರೆದರೆ ಚಿತ್ರೋದ್ಯಮಕ್ಕೆ ಬೆಲೆ ಇಲ್ಲದಂತಾಗುತ್ತದೆ.

ನಟ, ನಟಿಯರ ಮೌನಕ್ಕೆ ತಾವು  ಪ್ಯಾನ್‌ ಇಂಡಿಯಾ  ಆಕಾಂಕ್ಷೆ ಕಾರಣವೇ?

ನೋಡಿ, ಉತ್ತಮ ಚಿತ್ರಗಳನ್ನು ಎಲ್ಲೆಡೆಯೂ ನೋಡುತ್ತಾರೆ. ಅದಕ್ಕೂ ಇಂಥ ಘಟನೆಗಳಿಗೂ ಸಂಬಂಧವಿಲ್ಲ. ನೀವು ಯಾವ ರಾಜ್ಯದಲ್ಲಿರುತ್ತೀರೋ ಆ ರಾಜ್ಯದ ಭಾಷೆ, ಸಂಸ್ಕೃತಿ, ಆಡಳಿತ, ನಾಡು, ನುಡಿಗೆ ಗೌರವ ಕೊಡಬೇಕು. ಸ್ಥಳೀಯ ಭಾಷೆ, ಸಂಸ್ಕೃತಿಗೆ ಗೌರವ ಕೊಡದವನು ಅಲ್ಲಿರಲು ಯೋಗ್ಯನೇ ಅಲ್ಲ ಎನ್ನುವಂಥ ಕಾಮನ್‌ಸೆನ್ಸ್‌ ಇರುವ ಯಾವ ವ್ಯಕ್ತಿಯೂ ಈ ರೀತಿ ಅಪಮಾನ ಮಾಡಲು ಹೋಗುವುದಿಲ್ಲ. ಬೇರೆ ವಿಷಯ ನಮಗ್ಯಾಕೆ ಎನ್ನುವಂತಹ ಸಣ್ಣತನವೇ ಜವಾಬ್ದಾರಿಯಿಂದ ದೂರ ಉಳಿಯಲು ಕಾರಣವಿರಬಹುದು.

ಹೌದು, ಈ ಚಿತ್ರೋದ್ಯಮಕ್ಕೆ ಪರಭಾಷಿಕ ತಂತ್ರಜ್ಞರ ಮೇಲೇಕೆ ಮೋಹ?

ಪರಭಾಷಿಕರಿಗೆ ಅವಕಾಶ ಕೊಡುವ ಬದಲು, ಸ್ಥಳೀಯ ಪ್ರತಿಭಾನ್ವಿತರಿಗೆ ಅವಕಾಶ ಕೊಡಬೇಕು. ಕನ್ನಡವನ್ನು ತಾತ್ಸಾರ ಮಾಡು‍‍‍‍ವವರ ಅವಶ್ಯಕತೆ ನಮಗಿಲ್ಲ. ಕರ್ನಾಟಕದಲ್ಲಿ ಬೇಕಾದಷ್ಟು ಪ್ರತಿಭಾನ್ವಿತರಿದ್ದಾರೆ. ಪರಭಾಷಿಕರನ್ನು ಕರೆಸಿ ಲಕ್ಷಾಂತರ ರುಪಾಯಿ ಕೊಡುವ ಬದಲು, ಇಲ್ಲಿನ ಪ್ರತಿಭೆಗಳನ್ನೇ ಬಳಸಿ ಅತ್ಯುತ್ತಮ ಚಿತ್ರ ನಿರ್ಮಿಸಬಹುದು. ಈ ನೆಲಕ್ಕೆ ಭಾಷೆಗೆ ಯಾರು ಗೌರವ ಕೊಡುತ್ತಾರೋ ಅವರೆಲ್ಲಾ ನಮ್ಮವರು. ಅವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಯಾರು ನಾಡು, ನುಡಿ, ನೆಲ, ಜಲ, ಭಾಷೆಗೆ ಅಗೌರವ ತೋರಿಸುತ್ತಾರೋ ಅವರೆಲ್ಲರೂ ಕನ್ನಡಿಗರ ಕಾಲಿನ ದೂಳಿಗೆ ಸಮಾನ. ಅವರು ಇಲ್ಲಿಗೆ ಬರುವ ಅವಶ್ಯಕತೆಯೇ ಇಲ್ಲ. ಹಾಡುವ ಅವಶ್ಯಕತೆಯೂ ಇಲ್ಲ. ದುರಾಹಂಕಾರದಲ್ಲಿ ಮುಳುಗಿರುವ ಸೋನು ನಿಗಮ್‌ ಕನ್ನಡಿಗರ ಕಾಲ್ದೂಳಿಗೂ ಸಮವಿಲ್ಲ.

ಛಿದ್ರವಾಗಿರುವ ಕನ್ನಡಪರ ಸಂಘಟನೆಗಳು ಒಗ್ಗೂಡದಿದ್ದರೆ ಭವಿಷ್ಯವೇನು?

ದೇವ ಒಬ್ಬ, ನಾಮ ಹಲವು. ಅಂತೆಯೇ ಸಂಘಟನೆಗಳ ಹೆಸರು ಬೇರೆ ಇರಬಹುದು. ಆದರೆ, ಉದ್ದೇಶವೊಂದೇ. ಈ ನಾಡು, ನೆಲ, ನುಡಿ, ಭಾಷೆ, ಜಲದ ವಿಚಾರವಾಗಿ. ಎಲ್ಲರೂ ಒಗ್ಗಟ್ಟಾಗಬೇಕು. ಮುಂದಿನ ದಿನಗಳಲ್ಲಿ ಈ ನಾಡಿಗೋಸ್ಕರ ಎಲ್ಲರೂ ಒಗ್ಗಟ್ಟಾಗುತ್ತಾರೆ ಎಂಬ ನಂಬಿಕೆ ಇದೆ. ಕನ್ನಡಪರ ಸಂಘಟನೆ, ಹೋರಾಟಗಾರರು ಇಲ್ಲದಿದ್ದರೆ ಇಂದು ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರೇ ಇರುತ್ತಿರಲಿಲ್ಲ.

ಕನ್ನಡ ಹೋರಾಟಗಳಿಗೆ ನಾಯಕತ್ವ ವಹಿಸುವ ನಾಯಕರ ಕೊರತೆ ಇದೆಯೇ?

ನಮ್ಮಲ್ಲಿ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು, ಟಿ.ಎ.ನಾರಾಯಣಗೌಡ, ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ ಈ ರೀತಿಯ ಬಲಿಷ್ಠ ನಾಯಕರು ಇದ್ದಾರೆ. ಅದರೆ, ಅವರು ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟಗಳು ನಡೆಸುತ್ತಿದ್ದರೆ ಇಂಥ ಘಟನೆಗಳು ನಡೆಯುತ್ತಿರಲಿಲ್ಲ. ಯಾರೋ ಒಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಹಂ ಕೂಡ ಬಿಡಬೇಕು.

ತಮಿಳರಿಗಿರುವಷ್ಟು ಭಾಷಾಭಿಮಾನ ಕನ್ನಡಿಗರಲ್ಲಿಲ್ಲವಲ್ಲ?

ಇದು ನಿಜ. ತಮಿಳುನಾಡು, ಕೇರಳದಲ್ಲಿ ಇರುವಷ್ಟು ಭಾಷಾಭಿಮಾನ ನಮ್ಮಲ್ಲಿಲ್ಲ. ರಾಜಕಾರಣಿ, ಚಿತ್ರೋದ್ಯಮ, ಸಾಮಾನ್ಯ ಆಟೋ ಚಾಲಕನಿಗೂ ಭಾಷಾಭಿಮಾನವಿದೆ. ಹಿಂದಿ ಬೋರ್ಡ್‌ಗಳನ್ನು ಹಾಕಲು, ಹಿಂದಿ ಬಳಸಲೂ ಬಿಡಲ್ಲ. ನಮ್ಮಲ್ಲಿ ಎಲ್ಲರೂ ಸೇರಿಕೊಂಡು ಚಿತ್ರಾನ್ನ ಆಗಿಬಿಟ್ಟಿದೆ. ಯಾವ ಭಾಷೆಯ ಬೋರ್ಡ್‌ ಹಾಕಿಕೊಂಡರೂ ಕೇಳುವವರೇ ಇಲ್ಲ. ಜನರು ಕೂಡ ಜವಾಬ್ದಾರಿ ರಹಿತರಂತೆ ವರ್ತಿಸುತ್ತಾರೆ.