ಸಾರಾಂಶ
ಹಾವೇರಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಮುಜರಾಯಿ ಇಲಾಖೆಗೆ ಸೇರಿದ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೈನಿಕರ ಹೆಸರಿನಲ್ಲಿ ಸಂಕಲ್ಪ ಮಾಡಿ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಯಿತು. ನಗರದ ಪುರಸಿದ್ದೇಶ್ವರ ದೇವಸ್ಥಾನ, ಗಳಗನಾಥದ ಗಳಗೇಶ್ವರ, ಹಾನಗಲ್ಲಿನ ತಾರಕೇಶ್ವರ ದೇವಸ್ಥಾನ, ರಾಣಿಬೆನ್ನೂರು ತಾಲೂಕು ದೇವರಗುಡ್ಡ ಮಾಲತೇಶ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಲ್ಲಿ ಯೋಧರ ಆರೋಗ್ಯ, ಆಯುಷ್ಯಕ್ಕಾಗಿ ಮತ್ತು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಗಾಗಿ ಪ್ರಾರ್ಥಿಸಲಾಯಿತು. ಕೆಲವು ಕಡೆ ಸಾರ್ವಜನಿಕರು ಗಣೇಶ, ಆಂಜನೇಯ, ದುರ್ಗಾದೇವಿ, ಈಶ್ವರ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಯುವಕರು ಜವಾಬ್ದಾರಿಯಿಂದ ವಿಮುಖರಾಗಬಾರದು
ಹಾನಗಲ್ಲ: ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಲು ಯುವಕರು ಮುಂದೆ ಬರುತ್ತಿಲ್ಲ. ಸಾಮಾಜಿಕ ಜವಾಬ್ದಾರಿಯಿಂದ ವಿಮುಖರಾಗುತ್ತಿರುವ ಪರಿಣಾಮ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ತಿಳವಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.ಧರ್ಮ, ಜಾತಿಗಳ ಸಂಘರ್ಷದಲ್ಲಿ ನಾವು ಸಿಲುಕಿಕೊಂಡಿದ್ದು, ಆರ್ಥಿಕ ಅಭಿವೃದ್ಧಿಯ ಚಟುವಟಿಕೆಗಳನ್ನು ಕೈಬಿಟ್ಟಿದ್ದೇವೆ. ಚೀನಾ ತನ್ನ ಉತ್ಪಾದಕತೆ ವೃದ್ಧಿಸಿಕೊಂಡು ಆರ್ಥಿಕವಾಗಿ ಪ್ರಬಲವಾಗುತ್ತಿದೆ ಎಂದರು.
ಬಳಿಕ ಶಿಬಿರಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಪ್ರಕಾಶ ಬಾಗಣ್ಣನವರ, ಸೀತಾಳದ ಎಂ.ಎಸ್. ಈ ಸಂದರ್ಭದಲ್ಲಿ ಇದ್ದರು.