ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷಿಕರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು. ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಕ್ಕಾಗ ಮಾತ್ರ ರೈತನ ಬೆವರಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ೩ನೇ ರಾಜ್ಯ ಮಟ್ಟದ ರೈತ ಜಾಗೃತ ಶಿಬಿರ ಉದ್ಘಾಟಿಸಿ ಮಾತನಾಡಿದರು. ರೈತರ ಯಾವುದೇ ಸಮಸ್ಯೆಗಳಿದ್ದರೆ ಅವುಗಳಿಗೆ ಈ ನಾಡಿನ ಎಲ್ಲಾ ಮಠಾಧೀಶರು ಸದಾ ಬೆಂಬಲವಾಗಿ ಇರುತ್ತೇವೆ ಎಂದು ಭರವಸೆ ನೀಡಿದರು.
ಹುಲಜಂತಿ ಮಾಳಿಂಗರಾಯ ಮಹಾರಾಜರು ಮಾತನಾಡಿ, ರೈತ ದೇಶದ ಬೆನ್ನೆಲುಬು, ರೈತ ಸಂತೋಷದಿಂದ ಬದುಕಿ ಬಾಳಬೇಕಾದರೆ ಒಗ್ಗಟ್ಟಿನಿಂದ ಸಂಘಟನಾತ್ಮಕವಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಡಿಮೆ ಜಮೀನಿನಲ್ಲಿ ಹೆಚ್ಚು ಹೆಚ್ಚು ಆದಾಯ ಮಾಡಿಕೊಳ್ಳಲು ಇಂತಹ ರೈತರ ವಿಚಾರ ಗೋಷ್ಠಿಗಳು, ಚಿಂತನಾ ಸಭೆಗಳು ಮೇಲಿಂದ ಮೇಲೆ ಆಗಬೇಕು. ಕಡಿಮೆ ಜಮೀನಿನಲ್ಲಿ ಹೆಚ್ಚು ಆದಾಯ ವೃದ್ಧಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ರೈತನಿಗೆ ಬಲ ತುಂಬುವ ಕೆಲಸಗಳು ನಡೆಯಬೇಕಿದೆ ಎಂದು ಹೇಳಿದರು.ಸಂಘದ ರಾಜ್ಯಧ್ಯಕ್ಷ ಚುನ್ನಪ್ಪಾ ಪೂಜೇರಿ ಮಾತನಾಡಿ, ಕಳೆದ ೫೦ ವರ್ಷಗಳಿಂದ ನಾವು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಆದರೆ ಕೃಷಿಗೆ ಬೇಕಾಗಿರುವ ಎಲ್ಲ ಸಾಮಾಗ್ರಿಗಳ ಬೆಲೆ ಮುಗಿಲು ಮಟ್ಟಿದೆ, ನಮ್ಮನ್ನಾಳುವ ಸರ್ಕಾರಗಳು ಮಾತ್ರ ಅನ್ನದಾತನನ್ನು ತುಳಿಯುವ ಕೆಲಸವನ್ನು ಮಾಡುತ್ತಿವೆ. ಅದಕ್ಕಾಗಿ ಎಲ್ಲಾ ರೈತರು ಒಗ್ಗಟಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೫ ಸಾಧಕರಿಗೆ ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ ಹಾಗೂ ರೈತರಿಗಾಗಿ ಹಗಲಿರುಳು ಶ್ರಮವಹಿಸಿ ದಶಕಗಳ ಕಾಲ ಹೋರಾಟ ಮಾಡಿ ನ್ಯಾಯ ಕೊಡಿಸಲು ಪ್ರಾಮಣಿಕ ಪ್ರಯತ್ನ ಮಾಡಿರುವ ಹಿರಿಯ ರೈತ ಹೋರಾಟಗಾಗಿರಿಗೆ, ವಿಜಯಪುರದ ಬರಗಾಲದ ಭೀಮಶಿ ಎಂದೇ ಖ್ಯಾತಿ ಪಡೆದಿರುವ ಹಿರಿಯ ರೈತ ಹೋರಾಟಗಾರರ ಸ್ಮರಣಾರ್ಥ ರಾಜ್ಯ ಮಟ್ಟದ ಸುಮಾರು ೨೫ ಜನ ರೈತ ಹೋರಾಟಗಾರರಿಗೆ ರೈತ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಉತ್ತರ ಕರ್ನಾಟಕ ಅಧ್ಯಕ್ಷ ದೇವಿಂದ್ರಪ್ಪಗೌಡ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ರಾಜ್ಯ ಉಪಾಧ್ಯಕ್ಷ ಸುರೇಶ ಪರಗಣ್ಣವರ, ಮಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ಜಕರಾಯ ಪೂಜಾರಿ, ವೀರಣ್ಣ ಸಜ್ಜನ, ಸೋಮು ಬಿರಾದಾರ, ಸಾತಲಿಂಗಯ್ಯ ಸಾಲಿಮಠ, ಈರಪ್ಪ ಕುಳೆಕುಮಟಗಿ, ಎಸ್.ಟಿ ಪಾಟೀಲ, ನಿತೀನ ಮ್ಯಾಕೇರಿ, ಮಹಾದೇವಪ್ಪ ತೇಲಿ, ಶ್ರೀಶೈಲ ವಾಲಿಕಾರ, ಸುಜಾತಾ ಅವಟಿ, ಸಂಗೀತಾ ರಾಠೋಡ ಮುಂತಾದವರು ಭಾಗವಹಿಸಿದ್ದರು.------ಕೋಟ್ರೈತ ಸಂಘಟನೆಗಳು ಒಂದಾಗಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟ ಮಾತ್ರ ರೈತರಿಗೆ ಸಿಗಬೇಕಾಗಿರುವ ಎಲ್ಲಾ ಸರ್ಕಾರಿ ಸೌಲಭ್ಯಗಳು ಸಿಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ರೈತರನ್ನು ಸಮಯ ಬಂದಾಗಲೆಲ್ಲ ಎಲ್ಲರೂ ಉಪಯೋಗಿಸಿಕೊಂಡು ಬೀಸಾಡಿದ್ದಾರೆ. ಇನ್ನು ಮುಂದಾದರು ರೈತರೆಲ್ಲರು ಜಾಗೃತರಾಗಿ ರೈತ ಕುಲದ ಬಗ್ಗೆ ಚಿಂತನೆ ಮಾಡಿ ಅಭಿವೃದ್ಧಿಯತ್ತ ಸಾಗಬೇಕು.ಮಾಳಿಂಗರಾಯ ಮಹಾರಾಜರು, ಹುಲಜಂತಿ