ಸಾರಾಂಶ
ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು ಎಂದು ಪರ್ಯಾಯ ಪೀಠಾಧಿಪತಿ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ತಿರುಮಲ ಕ್ಷೇತ್ರದ ಲಡ್ಡು ಪ್ರಸಾದದಲ್ಲಿ ನಡೆದಿರುವ ಕಲಬೆರಕೆಯ ಘಟನೆ ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ಪರ್ಯಾಯ ಪೀಠಾಧಿಪತಿ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.ಹಿಂದೂ ಧರ್ಮೀಯರ ಅತ್ಯಂತ ಪ್ರಮುಖ ಶ್ರದ್ಧಾ ಕೇಂದ್ರವಾದ ತಿರುಪತಿಯ ಶ್ರೀ ವೇಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಪ್ರಸಾದದಲ್ಲಿ ಕಲಬೆರಕೆಯ ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರವನ್ನು ಮಾಡಲಾಗಿದೆ. ಈ ಮೂಲಕ ಬಹುದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಿದ್ದು, ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ.ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ಸಂರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಸಂತರ ಪೀಠಾಧಿಪತಿಗಳ ನೇತೃತ್ವದ ಮಾರ್ಗದರ್ಶಕ ಮಂಡಳಿಯನ್ನು ರಚಿಸಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ತಿಳಿಸಿದರು.ಭಂಡಾರಿಕೇರಿ ಶ್ರೀಗಳ ಖಂಡನೆ: ತಿರುಪತಿಯಲ್ಲಿ ಶ್ರೀನಿವಾಸನ ಸನ್ನಿಧಿಯಲ್ಲಿ ನಡೆದಿರುವ ಅಪಚಾರವನ್ನು ತೀವ್ರವಾಗಿ ಖಂಡಿಸಿ, ಧರ್ಮ ಸಂಸತ್ ರಚಿಸಿ ಆ ಮೂಲಕ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.