ಬಸ್‌ ನಿಲ್ದಾಣ ಪಕ್ಕದ ಜಾಗ ಹಿಂದೂ, ಮುಸ್ಲಿಂದಲ್ಲ, ಸರ್ಕಾರಿ ಜಾಗ

| Published : Jun 27 2025, 12:48 AM IST

ಬಸ್‌ ನಿಲ್ದಾಣ ಪಕ್ಕದ ಜಾಗ ಹಿಂದೂ, ಮುಸ್ಲಿಂದಲ್ಲ, ಸರ್ಕಾರಿ ಜಾಗ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯ ಬಸ್ ನಿಲ್ದಾಣ ಪಕ್ಕದಲ್ಲಿರುವ ಪುರಸಭೆ ಮುಂಭಾಗದ ಸುಮಾರು 1.5 ಎಕರೆ ಪಾಳುಬಿದ್ದ ಜಾಗ ಪಟ್ಟಣದಲ್ಲಿನ ಹಿಂದೂ ಮತ್ತು ಮುಸ್ಲಿಮರಲ್ಲಿ ನಮ್ಮದು-ನಮ್ಮದು ಎಂಬ ವಿವಾದ 60 ವರ್ಷಗಳಿಂದಲೂ ಇದೆ. ಇದು ಈ ಎರಡು ಧರ್ಮದವರದೂ ಅಲ್ಲ, ಸರ್ಕಾರಿ ಜಾಗ ಎಂದು ಪುರಸಭೆಯಿಂದ ಹಿಡಿದು ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿಯೂ ದಾಖಲಾಗಿದೆ. ಈ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಅಭಿವೃದ್ಧಿ ಕೆಲಸಗಳನ್ನು ನಡೆಸಲಿ ಎಂದು ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಗೌ.ಹಾಲೇಶ್ ಹೇಳಿದ್ದಾರೆ.

- ಜನಪರ ಅಭಿವೃದ್ಧಿಗೆ ಈ ಜಾಗ ಬಳಸಿ: ಗೌ.ಹಾಲೇಶ್‌

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಮುಖ್ಯ ಬಸ್ ನಿಲ್ದಾಣ ಪಕ್ಕದಲ್ಲಿರುವ ಪುರಸಭೆ ಮುಂಭಾಗದ ಸುಮಾರು 1.5 ಎಕರೆ ಪಾಳುಬಿದ್ದ ಜಾಗ ಪಟ್ಟಣದಲ್ಲಿನ ಹಿಂದೂ ಮತ್ತು ಮುಸ್ಲಿಮರಲ್ಲಿ ನಮ್ಮದು-ನಮ್ಮದು ಎಂಬ ವಿವಾದ 60 ವರ್ಷಗಳಿಂದಲೂ ಇದೆ. ಇದು ಈ ಎರಡು ಧರ್ಮದವರದೂ ಅಲ್ಲ, ಸರ್ಕಾರಿ ಜಾಗ ಎಂದು ಪುರಸಭೆಯಿಂದ ಹಿಡಿದು ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿಯೂ ದಾಖಲಾಗಿದೆ. ಈ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಅಭಿವೃದ್ಧಿ ಕೆಲಸಗಳನ್ನು ನಡೆಸಲಿ ಎಂದು ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಗೌ.ಹಾಲೇಶ್ ಹೇಳಿದರು.

ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಜಾಗಕ್ಕೆ ಸಂಬಂಧಪಟ್ಟಂತೆ ಪುರಸಭೆಯ ಅಸೆಸ್ಮೆಂಟ್ ನಂಬರ್ 268/247ರಲ್ಲಿ ಮಕಾನ್ ಎಂದೂ, ಇನ್ನೊಂದು ಅಸೆಸ್ಮೆಂಟ್ ನಂಬರ್ 269/248 ರಲ್ಲಿ ಕೋಟೆ ರಂಗನಾಥ ಸ್ವಾಮಿ ಜಾಗ ಎಂದೂ ನಮೂದಾಗಿತ್ತು. ಈ ಎರಡು ಅಸೆಸ್ಮೆಂಟ್‌ ನಂಬರ್‌ಗಳು ಒಂದೇ ಜಾಗಕ್ಕೆ ಸಂಬಂಧ ಪಟ್ಟಿದ್ದಾಗಿದೆ. 1955-56ರಲ್ಲಿ ಈ ಎರಡು ಅಸೆಸ್ಮೆಂಟ್‌ಗಳಲ್ಲಿ ಮೆಕಾನ್ ಜಾಗ ಎಂದು ಹೇಳುತ್ತಿದ್ದರು. ಆಗ ಪಟ್ಟಣದ ಕೋಟೆಯ ಶ್ರೀ ಭೇಟೆ ರಂಗನಾಥ ದೇವಾಲಯಕ್ಕೆ ಸೇರಿದ ಪುಷ್ಕರಣಿ ಮತ್ತು ಹೂವಿನ ವನ ಇರುವ ಜಾಗ ದೇವಾಲಯದ್ದು ಎಂಬ ತಗಾದೆ ಶಿವಮೊಗ್ಗದಲ್ಲಿದ್ದ ಉಪ ವಿಭಾಗೀಯ ಅಧಿಕಾರಿಗಳ (ಎಸ್.ಡಿ.ಒ) ನ್ಯಾಯಾಲಯಕ್ಕೆ ಹೋಯಿತು ಎಂದರು.

ಆಗಿನ ಉಪ ವಿಭಾಗೀಯ ಅಧಿಕಾರಿ 1965- 66ರಲ್ಲಿ ಚನ್ನಗಿರಿಗೆ ಬಂದು ವಿವಾದಿತ ಜಾಗದ ಎರಡು ಕಡೆಯ ಹಿರಿಯರನ್ನು ಕರೆದು ವಿಚಾರಿಸಿ, ಈ ಜಾಗ ಮೂಲತಃ ಯಾರಿಂದ ಬಂದಿದೆ ಎಂಬ ದಾಖಲಾತಿ ನೀಡಿರಿ ಎಂದರು. ಆಗ ಈ ಎರಡು ಕಡೆಯವರ ಬಳಿ ದಾಖಲಾತಿಗಳೇ ಇರಲಿಲ್ಲ. ಆದಕಾರಣ 1967ರಲ್ಲಿ ಈ ಜಾಗವು ಸರ್ಕಾರಕ್ಕೆ ಸೇರಿದ್ದಾಗಿದೆ ಎಂದು ಆದೇಶ ಮಾಡಿದ್ದಾರೆ. ಈ ಆದೇಶದ ಪ್ರಕಾರ 1967ರಲ್ಲಿ ಆಗಿನ ಪುರಸಭೆ ಅಧ್ಯಕ್ಷರಾಗಿದ್ದ ಬಿ.ಎಸ್.ಕೃಷ್ಣ ಅಯ್ಯಂಗಾರ್ ಆಗಿನ ಮುಖ್ಯಾಧಿಕಾರಿ ಈ ಜಾಗವನ್ನು ಸರ್ಕಾರಿ ಜಾಗ ಎಂದು ಕಡತದಲ್ಲಿ ಸೇರಿಸಿದ್ದರು. ಅಲ್ಲಿಂದ ಹಿಡಿದು 2025ರ ಇಸವಿಯ ಇಲ್ಲಿಯವರೆಗೆ ಸರ್ಕಾರಿ ಜಾಗ ಎಂದಿರುವ ದಾಖಲಾತಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳಿಗೆ ಸರ್ಕಾರಿ ಜಾಗವಿದು ಎಂಬುದು ತಿಳಿದಿದ್ದರೂ ಈ ಜಾಗದ ವಿವಾದ ನ್ಯಾಯಾಲಯದಲ್ಲಿದೆ ಎಂದು ಸುಳ್ಳು ಹೇಳುತ್ತಾ, ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ಬಸವರಾಜ ಶಿವಗಂಗಾ, ಪುರಸಭೆ ಮುಖ್ಯಾಧಿಕಾರಿ ಅವರಿಗೂ ಮನವಿ ಸಲ್ಲಿಸಿ, ಈ ಜಾಗಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ನೀಡಲಾಗುವುದು. ಈ ಜಾಗವು ಸಾರ್ವಜನಿಕರ ಬಳಕೆಗೆ ಅನುಕೂಲವಾಗುಂತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಅಧ್ಯಕ್ಷ ನಾಗೇಂದ್ರಪ್ಪ, ಪುರಸಭೆ ಸದಸ್ಯ ಪಟ್ಲಿ ನಾಗರಾಜ್, ಬಿ.ಕೃಷ್ಣಪ್ಪ, ಹಿರೇಮಳಲಿ ನಾಗರಾಜ್, ಸಿ.ಎಂ. ಗುರುಸಿದ್ದಯ್ಯ, ಬುಳ್ಳಿ ನಾಗರಾಜ್ ಉಪಸ್ಥಿತರಿದ್ದರು.

- - -

-26ಕೆಸಿಎನ್‌ಜಿ1.ಜೆಪಿಜಿ:

ಮಯೂರ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಅಧ್ಯಕ್ಷ ಗೌ.ಹಾಲೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.