ರಂಗಭೂಮಿಯ ಹಿಂದೆ ಒಂದು ಒಳ್ಳೆಯ ಕಥೆ, ದಕ್ಷ ನಿರ್ದೇಶಕ, ರಂಗಸ್ಥಳ, ಪೂರಕ ಸಂಗೀತ, ಶ್ರೇಷ್ಠ ನಟನೆ ಹಾಗೂ ಸಮಾಜಕ್ಕೆ ಕೊಡುವ ಉತ್ತಮ ಸಂದೇಶ ಇರುತ್ತದೆ. ಇವುಗಳೇ ರಂಗಭೂಮಿಯ ಜೀವಂತಿಕೆಯ ಮುಖ್ಯ ಲಕ್ಷಣಗಳಾಗಿದ್ದು, ಇಂದಿನ ಆಧುನಿಕ ಯುಗದಲ್ಲೂ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಗುಣಗಳೇ ಕಾರಣ ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಾವು ವೇದಿಕೆಯ ಮೇಲೆ ಎಷ್ಟೇ ಬಣ್ಣ ಹಚ್ಚಿ ನಟಿಸಿದರೂ, ರಂಗಭೂಮಿ ಕಲಾವಿದರ ಬದುಕಿನ ನಿಜವಾದ ಬಣ್ಣ ಬಡತನದ್ದಾಗಿದೆ. ನಾಟಕ ನೋಡಿ ಚಪ್ಪಾಳೆ ತಟ್ಟುವ ಸಾರ್ವಜನಿಕರು ಕೇವಲ ಕನಿಕರದ ಮಾತುಗಳನ್ನಾಡುತ್ತಾರೆಯೇ ವಿನಃ ರಂಗಭೂಮಿಗೆ ಸಿಗಬೇಕಾದ ನೈಜ ಪ್ರೋತ್ಸಾಹ ಇಂದಿಗೂ ಕಡಿಮೆಯಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಹಿರಿಯ ರಂಗಭೂಮಿ ಕಲಾವಿದ ಕೆ. ಎಚ್. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೩೪ನೇ ಮಾಸಿಕ ಕನ್ನಡ ದೀಪ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂ.ಗ್ರಾ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ, ರಂಗಭೂಮಿಯ ಹಿಂದೆ ಒಂದು ಒಳ್ಳೆಯ ಕಥೆ, ದಕ್ಷ ನಿರ್ದೇಶಕ, ರಂಗಸ್ಥಳ, ಪೂರಕ ಸಂಗೀತ, ಶ್ರೇಷ್ಠ ನಟನೆ ಹಾಗೂ ಸಮಾಜಕ್ಕೆ ಕೊಡುವ ಉತ್ತಮ ಸಂದೇಶ ಇರುತ್ತದೆ. ಇವುಗಳೇ ರಂಗಭೂಮಿಯ ಜೀವಂತಿಕೆಯ ಮುಖ್ಯ ಲಕ್ಷಣಗಳಾಗಿದ್ದು, ಇಂದಿನ ಆಧುನಿಕ ಯುಗದಲ್ಲೂ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಗುಣಗಳೇ ಕಾರಣ ಎಂದು ಅಭಿಪ್ರಾಯಪಟ್ಟರು.
ಕಲಾವಿದರ ಮಾಸಾಶನ ವಿಳಂಬ:ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಸಿ. ಮೋಹನ್ ಬಾಬು ಮಾತನಾಡಿ, ನಮ್ಮ ಕಲಾವಿದರ ಸಂಘವು ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಮಾಸಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಪ್ರಸ್ತುತ ವಯೋವೃದ್ಧ ಹಾಗೂ ಅರ್ಹ ಕಲಾವಿದರಿಗೆ ಸರ್ಕಾರದಿಂದ ಸಿಗಬೇಕಾದ ಮಾಸಾಶನ ವಿತರಣೆಯಲ್ಲಿ ತೀವ್ರ ವಿಳಂಬವಾಗುತ್ತಿದೆ. ಈ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿ ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಗಣ್ಯರ ಉಪಸ್ಥಿತಿ ಮತ್ತು ಸಾಂಸ್ಕೃತಿಕ ವೈಭವ:ಕಾರ್ಯಕ್ರಮದ ಆರಂಭದಲ್ಲಿ ತಾಲೂಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಮುನಿವೀರಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ಕಾರ್ಯದರ್ಶಿ ಸುಬ್ರಮಣಿ ಸ್ವಾಗತ ಭಾಷಣ ಮಾಡಿದರು.
ಗಾಯಕರಾದ ಎಂ. ವಿ. ನಾಯ್ಡು , ಮಹಾತ್ಮಾಂಜನೇಯ, ನಾಗಣ್ಣ, ಎ. ಎಂ. ನಾರಾಯಣಸ್ವಾಮಿ ಮತ್ತು ರಾಮಣ್ಣ ಸುಶ್ರಾವ್ಯವಾಗಿ ರಂಗಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗೋವಿಂದರಾಜು, ಹಿರಿಯ ಕಲಾವಿದರಾದ ಬೈರೇಗೌಡ, ನಾಗರಾಜು ಸೇರಿದಂತೆ ತಾಲೂಕಿನ ಸಾಹಿತ್ಯಾಸಕ್ತರು ಹಾಗೂ ಹಲವಾರು ಕಲಾವಿದರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.