ಕನ್ನಡಪ್ರಭ ವಾರ್ತೆ ತುರುವೇಕೆರೆ

ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ಹತ್ತಾರು ಹಿರಿಯ ಮುಖಂಡರನ್ನು ಗೌರವಿಸುವ ಮೂಲಕ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡಿ ದಿವಂಗತರಾಗಿರುವ ಹಲವಾರು ಮುಖಂಡರ ಶ್ರಮವನ್ನು ಸ್ಮರಿಸಲಾಯಿತು. ಕಳೆದ 46 ವರ್ಷಗಳಿಂದಲೂ ಪಕ್ಷಕ್ಕಾಗಿ ದುಡಿದಿರುವ ಹಲವು ಹಿರಿಯ ಜೀವಗಳನ್ನು ಗೌರವಿಸಲಾಯಿತು.

ಬಿಜೆಪಿ ಮುಖಂಡರಾದ ಅರಳಿಕೆರೆ ಶಿವಯ್ಯ ಮಾತನಾಡಿ, ಪಕ್ಷದ ಸಂಕಷ್ಟದ ಕಾಲದಲ್ಲೂ ಪಕ್ಷ ನಿಷ್ಠೆ ತೋರಿದ ಫಲವಾಗಿ ಇಂದೂ ಸಹ ಪಕ್ಷ ತಾಲೂಕಿನಲ್ಲಿ ಸದೃಢವಾಗಿ ಬೆಳೆದು ನಿಂತಿದೆ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆದಿರುವುದರಿಂದಲೇ ಪಕ್ಷ ಇನ್ನೂ ಗಟ್ಟಿಗೊಳ್ಳಲಿದೆ ಎಂದು ಹೇಳಿದರು.

ಉಪಾಧ್ಯಕ್ಷ ಹರಿಕಾರನಹಳ್ಳಿ ಪ್ರಸಾದ್ ಮಾತನಾಡಿ, 80ರ ದಶಕದಲ್ಲಿ ಲೋಕಸಭೆಯಲ್ಲಿ ಕೇವಲ 2 ಸ್ಥಾನಗಳಿಂದ ತನ್ನ ಅಸ್ತಿತ್ವ ತೋರಿಸಿದ್ದ ಬಿಜೆಪಿ, ಇಂದು ಸತತವಾಗಿ ಮೂರನೇ ಬಾರಿ ಅಧಿಕಾರ ನಡೆಸುವ ಹಂತಕ್ಕೆ ಬಂದಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಏಕೈಕ ಪಕ್ಷವಾಗಿದೆ. ಮುಂಬರುವ ದಿನಗಳಲ್ಲೂ ಸಹ ಹಿಂದೂಗಳ ಉಳಿವಿಗಾಗಿ ಮೋದಿಯವರ ಕೈ ಬಲಪಡಿಸಬೇಕು. ತಾಲೂಕಿನಲ್ಲೂ ಸಹ ನಮ್ಮ ಪಕ್ಷದವರೇ ಶಾಸಕರಾಗಬೇಕೆಂಬ ಛಲದೊಂದಿಗೆ ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.


ಈ ವೇಳೆ ಮಂಡಲ ಅಧ್ಯಕ್ಷ ಡೊಂಕಿಹಳ್ಳಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ಡಿ.ಮೂರ್ತಿ, ಕಡೇಹಳ್ಳಿ ಸಿದ್ದೇಗೌಡ, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಜಿಲ್ಲಾ ಮುಖಂಡರಾದ ಹಾಲೇಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಧಾಮಣಿ, ಜಿಲ್ಲಾ ಉಪಾಧ್ಯಕ್ಷೆ ಉಮಾ ರಾಜ್, ಸೋಮೇನಹಳ್ಳಿ ಜಗದೀಶ್, ಸಂತೋಷ್ ಕಂಟ್ಲಿ, ತಾಲೂಕು ಕಾರ್ಯದರ್ಶಿ ಮಹೇಶ್, ಯೋಗೀಶ್ ಸೇರಿ ಹಲವರು ಇದ್ದರು.

7 ಟಿವಿಕೆ 2 – ತುರುವೇಕೆರೆಯ ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಿರಿಯ ಮುಖಂಡರನ್ನು ಗೌರವಿಸಲಾಯಿತು.