ದಿ.ಎಂ.ಸಿ.ಮನಗೂಳಿ ಸರಳ ವ್ಯಕ್ತಿತ್ವ ಯುವಕರಿಗೆ ಮಾದರಿ

| Published : Jan 29 2024, 01:35 AM IST

ಸಾರಾಂಶ

ದಿ.ಎಂ.ಸಿ.ಮನಗೂಳಿ 3ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಜಯಪುರ ಬಿರಾದಾರ ಕಣ್ಣಿನ ಆಸ್ಪತ್ರೆ ವೈದ್ಯ ಡಾ.ಸುನೀಲ ಬಿರಾದಾರ ಮಾತನಾಡಿ, ಅವರೊಬ್ಬ ಅಜಾತಶತ್ರು ಎಂದು ಬಣ್ಣಿಸಿದರು. ನಂತರ ನೇತ್ರ ಉಚಿತ ತಪಾಸಣೆ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಸಿಂದಗಿ

ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಬದುಕಿಗೆ ಜಗ್ಗದೆ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನುಗ್ಗುವ ಭಾವ ಹೊಂದಿದವರಲ್ಲಿ ದಿ.ಎಂ.ಸಿ.ಮನಗೂಳಿ ಒಬ್ಬರು. ಅವರು ಅಜಾತಶತ್ರುವಾಗಿದ್ದರು ಎಂದು ವಿಜಯಪುರ ಬಿರಾದಾರ ಕಣ್ಣಿನ ಆಸ್ಪತ್ರೆ ವೈದ್ಯ ಡಾ.ಸುನೀಲ ಬಿರಾದಾರ ಹೇಳಿದರು.

ಪಟ್ಟಣದ ಎಚ್.ಜಿ.ಕಾಲೇಜು ಮೈದಾನದಲ್ಲಿ ಭಾನುವಾರ ಮನಗೂಳಿ ಕುಟುಂಬ ಹಮ್ಮಿಕೊಂಡಿರುವ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ 3ನೇ ಪುಣ್ಯಸ್ಮರಣೆಯ ನಿಮಿತ್ತ ಆಯೋಜಿಸಿದ್ದ ನೇತ್ರ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಅವರು ಮಾತನಾಡಿದರು.

ದಿ.ಮನಗೂಳಿ ಅವರು ಸರಳ ವ್ಯಕ್ತಿ. ಇಂದಿನ ಯುವ ರಾಜಕಾರಣಿಗಳಿಗೆ ಅವರು ಮಾದರಿ. ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಬೇಕು ಎಂಬು ಮಾಡಿ ತೋರಿಸಿದ ವ್ಯಕ್ತಿತ್ವ ಅವರದು ಎಂದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ನಾವು ನಮ್ಮಆರೋಗ್ಯದ ಕಡೆಗೆ ನಾವು ಹೆಚ್ಚು ಮಹತ್ವ ನೀಡುತ್ತಿಲ್ಲ. ದೇಹದ ಎಲ್ಲ ಅಂಗಗಳಲ್ಲಿ ಕಣ್ಣು ಕೂಡ ಶ್ರೇಷ್ಠ ಅಂಗತ ಅದನ್ನು ನಾವೆಲ್ಲ ನಿರಂತರ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ದಿ.ಮನಗೂಳಿ ಅವರ ಪುಣ್ಯಸ್ಮರಣೆ ಅಂಗವಾಗಿ ನೇತ್ರ ಉಚಿತ ಶಿಬಿರ ಆಯೋಜನೆ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯ. ಇದರಿಂದ ಬಹಳ ಬಡಜನತೆಗೆ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.

ಶಿಬಿರಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿ ಮಾತನಾಡಿ, ನಮ್ಮ ತಂದೆ ಬಡಜನತೆ ಹಾಗೂ ಗ್ರಾಮೀಣ ಭಾಗದ ಜನತೆ ಮೇಲೆ ಹೆಚ್ಚು ಪ್ರೀತಿ ಉಳ್ಳವರಾಗಿದ್ದವರು. ಪ್ರಸ್ತುತ ಬರಗಾಲದ ಸಮಯವಾಗಿದ್ದರಿಂದ, ಗ್ರಾಮೀಣ ಮತ್ತು ನಗರ ಜನತೆಗೆ ಅನುಕೂಲವಾಗಲೆಂದು ಅವರ ಪುಣ್ಯಸ್ಮರಣೆಯ ವೇಳೆ ನೇತ್ರ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿಷ್ಠಾನದಿಂದ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.

ಈ ವೇಳೆ 312 ಜನರು ನೇತ್ರ ಉಚಿತ ತಪಾಸಣೆಗೆ ಒಳಪಟ್ಟರು. ಅವರಲ್ಲಿ 64 ಜನರು ನೇತ್ರ ಉಚಿತ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಮುಖಂಡ ಶಿವಪ್ಪಗೌಡ ಬಿರಾದಾರ, ಎಂ.ಎಸ್.ಪಾಟೀಲ, ಗೋಲ್ಲಾಳಪ್ಪಗೌಡ ಪಾಟೀಲ, ಮಹಾದೇವಪ್ಪಗೌಡ ಬಿರಾದಾರ, ಡಾ.ಸಂಗಮೇಶ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಪೂಜಾರಿ, ಸಾಧಿಕ ಸುಂಬಂಡ ಸೇರಿದಂತೆ ಅನೇಕರು ಇದ್ದರು.

--------

ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿಗಳು

ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮ ಪಟ್ಟಣದ ಎಚ್.ಜಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಈ ವೇಳೆ ಎಂ.ಸಿ.ಮನಗೂಳಿ ಅವರ ಸಮಾಧಿ ಹೂಗುಚ್ಚಗಳಿಂದ ಸಿಂಗಾರಗೊಂಡಿತ್ತು. ಬೆಳಗ್ಗೆ ಸಮಾಧಿಗೆ ರುದ್ರಾಭಿಷೇಕ ಪೂಜೆಯನ್ನು ಮನಗೂಳಿ ಅವರ ಧರ್ಮಪತ್ನಿ ಸಿದ್ದಮ್ಮಗೌಡತಿ ನೇತೃತ್ವದಲ್ಲಿ ಕುಟುಂಬದವರು ನೆರವೇರಿಸಿದರು.

ನಂತರ ಸಿಂದಗಿ ಮತಕ್ಷೇತ್ರದ ಸಾವಿರಾರು ಜನ ದಿ.ಮನಗೂಳಿ ಅವರ ಅಭಿಮಾನಿಗಳ ಬಳಗ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಯಕರ್ತರು, ರೈತರು, ಶಿಕ್ಷಕರು ಸೇರಿದಂತೆ ಅನೇಕರು ಮನಗೂಳಿ ಅವರ ಸಮಾಧಿಗೆ ತಂಡೋಪತಂಡವಾಗಿ ಆಗಮಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿ.ಎಂ.ಸಿ.ಮನಗೂಳಿ ಅವರ ಧರ್ಮಪತ್ನಿ ಸಿದ್ದಮ್ಮಗೌಡತಿ, ಮಕ್ಕಳಾದ ಡಾ.ಅರವಿಂದ ಮನಗೂಳಿ, ಶಾಸಕ ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ಚನ್ನವೀರಪ್ಪ(ಮುತ್ತು) ಮನಗೂಳಿ, ಅನ್ನಪೂರ್ಣ ನಿಡೋಣಿ ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ತಾಲೂಕಿನ ಸಾವಿರಾರು ಜನ ಅಭಿಮಾನಿಗಳು, ಕುಟುಂಬಸ್ಥರು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ಪಕ್ಷದ ಮುಖಂಡರು, ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರು, ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.