ಸಾರಾಂಶ
ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮ ಪಂಚಾಯತಿ ಕಚೇರಿಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ನಡೆದಿದ್ದು, ಕಚೇರಿಯಲ್ಲಿನ ಪೀಠೋಪಕರಣಗಳು ಹಾನಿಗೀಡಾಗಿವೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ಕಲಕಾಂಬ ಗ್ರಾಮ ಪಂಚಾಯತಿ ಕಚೇರಿಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ನಡೆದಿದ್ದು, ಕಚೇರಿಯಲ್ಲಿನ ಪೀಠೋಪಕರಣಗಳು ಹಾನಿಗೀಡಾಗಿವೆ.ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಎರಡು ಬಣಗಳು ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದವು. ಅವರವರ ಕಾಲೋನಿಯಲ್ಲಿ ಸಂಸದೆ ಪ್ರಿಯಾಂಕಾ ಅವರನ್ನು ಆಹ್ವಾನಿಸಿ ಸನ್ಮಾನಿಸಲು ನಿರ್ಧರಿಸಿದ್ದವು. ಆದರೆ, ಕಾರ್ಯಕ್ರಮ ಮುಗಿದ ತಕ್ಷಣ ಒಂದು ಬಣದ ಸನ್ಮಾನ ಸ್ವೀಕರಿಸಿ, ಸಂಸದೆ ಪ್ರಿಯಾಂಕಾ ಗ್ರಾಮದಿಂದ ತೆರಳಿದ್ದಾರೆ. ಇದರಿಂದ ಎರಡು ಗುಂಪುಗಳ ವಾಗ್ವಾದ ನಡೆದು ಗಲಾಟೆಯಾಗಿದೆ. ಬಳಿಕ ಒಂದು ಗುಂಪು ರಾತ್ರಿ ಗ್ರಾಪಂ ಕಚೇರಿ ಮೇಲೆ ದಾಳಿ ನಡೆಸಿದೆ.
ಕಿಡಿಗೇಡಿಗಳು ಬಿಯರ್ ಬಾಟಲ್ನಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಗ್ರಾಪಂ ಕಚೇರಿ ಆವರಣ ಮತ್ತು ಒಳಗಡೆ ಬಿಯರ್ ಬಾಟಲ್ ಗಾಜುಗಳು ಪುಡಿಪುಡಿಯಾಗಿರುವುದು ಕಂಡುಬಂದಿದೆ. ಘಟನೆಯಲ್ಲಿ ಗ್ರಾಪಂ ಕಚೇರಿ ಕಿಟಕಿ ಗಾಜು ಜಖಂಗೊಂಡಿದೆ. ಬೆಂಕಿ ಹಚ್ಚಿದ ಕಿಡಿಗೇಡಿಗಳು ಸಿಸಿಟಿವಿ ಕ್ಯಾಮೆರಾ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಡಿವಿಆರ್ನಲ್ಲಿ ದಾಳಿಯ ದೃಶ್ಯ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.