ದುಷ್ಕರ್ಮಿಗಳಿಂದ ಯುವಕನ ಕೊಲೆ ನೋವಿನ ಸಂಗತಿ

| Published : May 29 2025, 02:17 AM IST

ಸಾರಾಂಶ

ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಬಹಳ ನೋವಿನ ಸಂಗತಿ. ಪೊಲೀಸರಿಗೆ ಕೊಲೆ ಆರೋಪಿಗಳ ಪ್ರಾಥಮಿಕ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಬಂಧಿಸುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಬಹಳ ನೋವಿನ ಸಂಗತಿ. ಪೊಲೀಸರಿಗೆ ಕೊಲೆ ಆರೋಪಿಗಳ ಪ್ರಾಥಮಿಕ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಬಂಧಿಸುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಕೋಮುವಾದದ ಕೆಟ್ಟ ವಾತಾವರಣ ನಿರ್ಮಾಣ ಆಗಿದೆ. ಅದರ ಫಲಶೃತಿಯೇ ಈ ಘಟನೆ. ಸರಣಿ ಹತ್ಯೆ ಆಗುತ್ತಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೂ ಕೂಡ ಕೆಟ್ಟ ಹೆಸರು ಬರುತ್ತಿದೆ. ಘಟನೆಯಲ್ಲಿ ರಹೀಂ ಎಂಬಾತ ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನೋಬ್ಬರು ಗಾಯಗೊಂಡಿದ್ದಾರೆ. ವೈಷಮ್ಯ, ಸೇಡು ಘಟನೆಗೆ ಕಾರಣ ಎನ್ನುವುದು ಕಂಡುಬರುತ್ತಿದೆ. ಪೊಲೀಸರ ತನಿಖೆಯ ನಂತರವೇ ಎಲ್ಲವೂ ತಿಳಿಯಲಿದೆ ಎಂದರು.

ಅಮಾನವೀಯವಾಗಿ, ಭರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜಕ್ಕೆ ಕೆಟ್ಟ ಸಂದೇಶ. ಎಲ್ಲಾ ರೀತಿಯ ಕಟ್ಟೇಚ್ಚರವನ್ನು ಪೊಲೀಸರು ವಹಿಸಿದ್ದಾರೆ. ಬಿಜೆಪಿಯವರ ತರ ಪ್ರಚೋಧನಾಕಾರಿಯಾಗಿ ಮಾತನಾಡಲ್ಲ. ಅ ತರ ಜನ ನಾವಲ್ಲ. ಅವರ ಬಾಯಿಗೆ ಲಂಗು ಲಗಾಮಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡ್ತಾರೆ. ಅವರ ಬಂಡವಾಳನೇ ಅದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣ ಆಗೋಕೆ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳೇ ಕಾರಣ ಎಂದು ಆರೋಪಿಸಿದರು.

ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಎಲ್ಲರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲೂ ಎಲ್ಲರನ್ನೂ ಬಂಧಿಸುತ್ತೇವೆ. ಕಾನೂನು ಉಲ್ಲಂಘನೆ ಆದಾಗ ಕ್ರಮ ಆಗುತ್ತದೆ. ಯಾರೇ ಹತ್ಯೆ ಆದ್ರೂ ಧರ್ಮ, ಜಾತಿ ಪ್ರಶ್ನೆ ಬರಲ್ಲ. ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತದೆ. ಸುಹಾಸ್ ಶೆಟ್ಟಿ ಕೂಡ ರೌಡಿ ಶೀಟರ್‌ ಆತನ ಮೇಲೂ ಕೇಸ್ ಇವೆ. ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ. ಕ್ರಮ ಆಗುತ್ತದೆ ಎಂದು ಹೇಳಿದರು.

ಮುಸಲ್ಮಾನರು ಎಂದರೇ ಕೆಟ್ಟ ಅಭಿಪ್ರಾಯವನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳನ್ನು ನೋಡಿದರೆ ತರ್ಕ, ನ್ಯಾಯ, ಮಾನವೀಯತೆ, ಮನುಷ್ಯತ್ವ ಯಾವುದು ಇಲ್ಲ. ವಿಷ, ಕೊಳಕು ತುಂಬಿದ ಮನಸುಗಳು ಎಂದು ಟೀಕಿಸಿದರು.

ದಕ್ಷಿಣ ಕನ್ನಡದಲ್ಲಿ ಈಗಾಗಲೇ ಸೆಕ್ಷನ್ 144 ಹಾಕಲಾಗಿದೆ. ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ತೀವ್ರ ತರವಾದ ಕ್ರಮವನ್ನು ಸರ್ಕಾರ ಹಾಗೂ ಪೊಲೀಸರು ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಟಾಸ್ಕ್ ಫೋರ್ಸ್ ರಚನೆ:

ದಕ್ಷಿಣ ಕನ್ನಡದಲ್ಲಿ ಸ್ಪೆಷಲ್ ಟಾಸ್ಕ್‌ಫೋರ್ಸ್ ರಚನೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವರು ಈ ಹಿಂದೆಯೇ ಹೇಳಿದ್ದಾರೆ. ಟಾಸ್ಕ್‌ಫೋರ್ಸ್ ರಚನೆಗೆ ಎಲ್ಲಾ ವ್ಯವಸ್ಥೆ ನಡೀತಿದೆ. ಅಲ್ಲದೇ ಆಂಟಿ ಕಮ್ಯೂನಲ್ ಫೋರ್ಸ್ ಅನ್ನು ಮಾಡಬೇಕಾಗುತ್ತದೆ ಎಂದರು.

ಕೋಮುವಾದ ಸಮಾಜವನ್ನು ವಿಭಜನೆ ಮಾಡುತ್ತದೆ. ಕೋಮುವಾದದ ವಿರುದ್ಧ ಕಾನೂನು ಹಾಗೂ ಸಾಮಾಜಿಕ ಹೋರಾಟ ಮಾಡಬೇಕಾಗುತ್ತದೆ. ಪ್ರತಿ ಮನೆಯ ಹತ್ತಿರ ಪೊಲೀಸರು ಇರೋಕೆ ಆಗಲ್ಲ. ಮೊನ್ನೆ ಅವರು ಪ್ರಚೋಧನಾಕಾರಿಯಾಗಿ ಕೆಲವರು ಭಾಷಣ ಮಾಡಿದ್ದರು. ಅವರ ಮೇಲೂ ಸಹ ಕೇಸ್ ಆಗಿದೆ. ಉದ್ರೇಕಕಾರಿ ಭಾಷಣವನ್ನು ಸಂಘ ಪರಿವಾರದವರು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದರು.

ಶಿವಮೊಗ್ಗದಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಘಟನೆ ನಡೆದರೆ ಪ್ರವಾಸ ಅಥವಾ ಬಂಡವಾಳ, ಉದ್ಯಮ ಮಾಡೋಕೆ ಯಾರು ಬರ್ತಾರೆ ಎಂದು ಪ್ರಶ್ನಿಸಿದರು

ಶರಣ್ ಪಂಪವೆಲ್ ಬಂದ್ ಕರೆ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಚೋದನೆ ಮಾಡೋರಿಗೆ ಇದೇ ಕೆಲಸ. ಹಿಂದುತ್ವದ ಅಡಿಯಲ್ಲಿ ರಕ್ಷಣೆ ತಗೋತ್ತಾರೆ. ಹಿಂದುತ್ವ ಹೇಳಿಕೊಂಡು ಏನು ಬೇಕಾದ್ರೂ ಮಾಡಬಹುದು. ಒಬ್ಬರನ್ನು ಸಾಯಿಸಿದ್ರೇ ಧರ್ಮದ ಬೆಂಬಲವಿದೆ ಅಂದು ಕೊಳ್ಳುತ್ತಾರೆ. ಹಿಂದುತ್ವವನ್ನು ಉಪಯೋಗಿಸಿಕೊಂಡು, ಮಾಡಬಾರದ ಕೆಲಸ ಮಾಡ್ತಾರೆ. ಮರಳು ಧಂದೆ ಮಾಡೋರು, ರೌಡಿಗಳು ಸಹ ಉಪಯೋಗಿಸಿಕೊಳ್ತಾರೆ. ಇದು ನಿಜವಾದ ವಸ್ತುಸ್ಥಿತಿ ಎಂದು ಹರಿಹಾಯ್ದರು.