ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಉಚ್ಛ ನ್ಯಾಯಾಲಯದ ಪೀಠದ ವ್ಯಾಪ್ತಿಗೆ ಸೇರಿಸುವ ಸರ್ಕಾರದ ನಡೆಯನ್ನು ವಿರೋಧಿಸಿ ಜಿಲ್ಲಾ ವಕೀಲರ ಸಂಘವು ಬೃಹತ್ ಹೋರಾಟಕ್ಕೆ ಕರೆ ನೀಡಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಉಚ್ಛ ನ್ಯಾಯಾಲಯದ ಪೀಠದ ವ್ಯಾಪ್ತಿಗೆ ಸೇರಿಸುವ ಸರ್ಕಾರದ ನಡೆಯನ್ನು ವಿರೋಧಿಸಿ ಜಿಲ್ಲಾ ವಕೀಲರ ಸಂಘವು ಬೃಹತ್ ಹೋರಾಟಕ್ಕೆ ಕರೆ ನೀಡಿದೆ.ಜಿಲ್ಲೆಯು ಪ್ರಸ್ತುತ ಇರುವಂತೆ ಧಾರವಾಡ ಉಚ್ಛ ನ್ಯಾಯಾಲಯದ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಯಬೇಕು ಎಂದು ಆಗ್ರಹಿಸಿ ಆ. 13ರಂದು ಬೆಳಗ್ಗೆ 10 ಗಂಟೆಗೆ ಕಾರವಾರದಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಿತ್ರ ಸಮಾಜ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪಾದಯಾತ್ರೆ ನಡೆಯಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸರ್ಕಾರದ ಈ ಪ್ರಸ್ತಾಪವು ಅವೈಜ್ಞಾನಿಕವಾಗಿದ್ದು, ಜಿಲ್ಲೆಯಾದ್ಯಂತ ನಡೆಸಿದ ಪೂರ್ವಭಾವಿ ಸಭೆಗಳಲ್ಲಿ ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ತಿಳಿಸಿದರು.ಮಂಗಳೂರು ಪೀಠಕ್ಕೆ ಜಿಲ್ಲೆಯನ್ನು ಸೇರಿಸುವುದರಿಂದ ವಕೀಲರಿಗಿಂತ ಹೆಚ್ಚಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ. ಕಾರವಾರದಿಂದ ಧಾರವಾಡಕ್ಕೆ ಕೇವಲ 170 ಕಿಮೀ ದೂರವಿದ್ದು, 3 ಗಂಟೆಗಳಲ್ಲಿ ತಲುಪಬಹುದು. ಆದರೆ ಮಂಗಳೂರಿಗೆ 270 ಕಿಮೀ ಪ್ರಯಾಣಿಸಬೇಕಾಗಿದ್ದು, ಕನಿಷ್ಠ 5ರಿಂದ 6 ಗಂಟೆಗಳ ಕಾಲ ಬೇಕಾಗುತ್ತದೆ. ವಿಶೇಷವಾಗಿ ಹಳಿಯಾಳ ತಾಲೂಕಿನ ಜನರಿಗೆ ಧಾರವಾಡ ಅತ್ಯಂತ ಸಮೀಪದಲ್ಲಿದ್ದು, ಅಲ್ಲಿಂದ ಮಂಗಳೂರಿಗೆ ಹೋಗಬೇಕೆಂದರೆ 7 ಗಂಟೆಗಳ ಸುದೀರ್ಘ ಪ್ರಯಾಣ ಅನಿವಾರ್ಯವಾಗುತ್ತದೆ. ಇದು ಬಡವರು, ವಯೋವೃದ್ಧರು ಹಾಗೂ ಮಹಿಳೆಯರ ಮೇಲೆ ಭಾರಿ ಹೊರೆಯಾಗಲಿದೆ ಎಂದು ನಾಗರಾಜ ಕಳವಳ ವ್ಯಕ್ತಪಡಿಸಿದರು.
ಮಂಗಳೂರು ಪೀಠದ ಪ್ರಸ್ತಾಪದ ವಿರುದ್ಧ ಈಗಾಗಲೇ ರಾಜ್ಯಪಾಲರು ಮತ್ತು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಸಾವಿರಾರು ಪತ್ರಗಳನ್ನು ಕಳುಹಿಸುವ ಪತ್ರ ಚಳವಳಿ ಆರಂಭವಾಗಿದೆ ಎಂದರು.ಜಿಲ್ಲಾ ವಕೀಲರ ಸಂಘದ ನಾಗರಾಜ ದೇಶಭಂಡಾರಿ, ಪದ್ಮಾ ತಾಂಡೇಲ್, ದೀಪಾ, ಸಂಜಯ ಸಾಳುಂಕೆ, ಚರಣ್ ಡಿ.ನಾಯ್ಕ, ಲಕ್ಷ್ಮೀ ರಾಣೆ ಹಾಗೂ ಸುಮಿತಾ ಭೂತೆ ಉಪಸ್ಥಿತರಿದ್ದರು.