- ಶಾಮನೂರು ಕುಟುಂಬದ ಮೇಲೆ ಜನರ ಪ್ರೀತಿಗೆ ಡಾ.ಪ್ರಭಾ, ನೂತನ ಶಾಸಕ ಸಮರ್ಥ ಕೃತಜ್ಞತೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಜನತೆ ಶಾಮನೂರು ಕುಟುಂಬದ ಮೇಲಿಟ್ಟಿರುವ ಪ್ರೀತಿಗೆ ತಾವು ಚಿರಋಣಿಯಾಗಿದ್ದು, ಉತ್ತರ-ದಕ್ಷಿಣ ಕ್ಷೇತ್ರಗಳೆರೆಡೂ ನಮ್ಮ ಎರಡು ಕಣ್ಣುಗಳಂತಿವೆ. ಈ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.

ನಗರದ ಡಿಆರ್‌ಆರ್‌ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಹಿರಿಯ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಜಯ ಸಾಧಿಸಿದ ಹಿನ್ನೆಲೆ ಪತ್ನಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಪುತ್ರ ಸಮರ್ಥ ಜೊತೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಹಿಂದೆ ಸೈಯದ್ ಸೈಫುಲ್ಲಾರವರು ಸ್ಪರ್ಧೆ ಮಾಡಿದ್ದಾಗಲೂ ನಾವು ಗೆದ್ದಿದ್ದೆವು. ಇದೇನೂ ಹೊಸದಲ್ಲ. ಕ್ಷೇತ್ರದ ಜನತೆ ತಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ಇನ್ನೂ ಹೆಚ್ಚಿನ ಕೆಲಸಗಳನ್ನು ನೂತನ ಶಾಸಕ ಸಮರ್ಥ ಸಹ ಮಾಡಲಿದ್ದಾರೆ ಎಂದು ಎಸ್‌ಡಿಪಿಐ ಬೆಳೆಯಲು ಸ್ಥಳೀಯ ಕಾಂಗ್ರೆಸ್‌ ಮುಖಂಡರೇ ಕಾರಣವಾ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.


ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ತಮ್ಮ ಮಾವನವರು ಪ್ರತಿನಿಧಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇದೀಗ ನೂತನ ಶಾಸಕರಾಗಿ ಆಯ್ಕೆಯಾದ ಸಮರ್ಥ ಶಾಮನೂರು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದ್ದಾರೆ. ಇನ್ನೂ ಪರಿಣಾಮಕಾರಿಯಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು. ಚುನಾವಣೆಗೆರೆ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆಯೆಂದು ಆರೋಪಿಸಿದ ಬಿಜೆಪಿಯವರು, ತಾವು ಹೇಗೆ ಚುನಾವಣೆ ಮಾಡಿದ್ದಾರೆಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ನೂತನ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್ಸಿನ ಸಮರ್ಥ ಎಂ. ಶಾಮನೂರು ಮಾತನಾಡಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನಾವು ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ. ಆದಷ್ಟು ಬೇಗ ಕ್ಷೇತ್ರದಲ್ಲಿ ಸುಧಾರಣೆ ತರುವ ಕೆಲಸ ಮಾಡುತ್ತೇನೆ ಎಂದರು.

- - -

-4ಡಿವಿಜಿ18.ಜೆಪಿಜಿ:

ದಾವಣಗೆರೆಯಲ್ಲಿ ತಂದೆ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜೊತೆ ದಕ್ಷಿಣ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸಮರ್ಥ ಎಂ. ಶಾಮನೂರು ಸಂಭ್ರಮ ಹಂಚಿಕೊಂಡ ಕ್ಷಣ.