ಸಾರಾಂಶ
ಘಟನೆಯ ಬಗ್ಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು ಈ ಅಮಾನುಷ ಕೃತ್ಯ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಜೀವಂತ ಸಾಕು ನಾಯಿಯನ್ನೇ ಮನೆ ಮಾಲೀಕ ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ತಳ್ಳಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ. ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.ನಗರದ ಡೊಂಗರಕೇರಿಯಲ್ಲಿ ಶನಿವಾರ ಈ ಕೃತ್ಯ ಬೆಳಕಿಗೆ ಬಂದಿದ್ದು ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಿದ್ದ ಹೆಣ್ಣು ಶ್ವಾನವನ್ನು ಮನೆಯವರು ಬಲವಂತದಿಂದ ಅಮಾನವೀಯವಾಗಿ ನಗರದ ಕಸ ವಿಲೇ ಮಾಡುವ ಪಾಲಿಕೆಯ ಲಾರಿಗೆ ಹಾಕಿ ನಗರದ ಹೊರವಲಯದ ವಾಮಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದೆ.ಸಾಕು ನಾಯಿಯನ್ನುಮನೆ ಮಾಲೀಕರೇ ಕಸ ವಿಲೇವಾರಿ ವಾಹನಕ್ಕೆ ಬಲವಂತವಾಗಿ ತಳ್ಳುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು ಈ ಅಮಾನುಷ ಕೃತ್ಯ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅದೇ ರೀತಿ ಪಚ್ಚನಾಡಿ ಪ್ರದೇಶದಲ್ಲಿ ಪ್ರಾಣಿ ದಯಾ ಸಂಘದ ಸದಸ್ಯರು ಹುಡುಕಾಟ ನಡೆಸಿದ್ದು, ಈ ಶ್ವಾನ ಕಂಡರೆ ಮಾಹಿತಿ ನೀಡುವಂತೆ ಕೋರಿದ್ದಾರೆ.