ಕನ್ನಡಪ್ರಭ ವಾರ್ತೆ ಮಡಿಕೇರಿ
ಕರಡಿಗೋಡು ಗ್ರಾಮದಲ್ಲಿ ನೆಲೆಗೊಂಡಿರುವ ಗ್ರಾಮಸ್ಥರ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರ ವಾರ್ಷಿಕೋತ್ಸವ ಕೊನೆ ದಿನವಾದ ಮಂಗಳವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.ಉತ್ಸವದ ಕೊನೆ ದಿನ ಮಂಗಳವಾರ ರುದ್ರಪಾರಾಯಣ, ದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗಂಗಾ ಸ್ನಾನ ನಡೆಯಿತು. ಬಳಿಕ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಕೊಂಡ ಸೇವೆ ನಡೆಯಿತು.ಇಲ್ಲಿನ ಬಸವೇಶ್ವರನಲ್ಲಿ ಪ್ರಾರ್ಥನೆ ಮಾಡಿಕೊಂಡರೆ ತಮ್ಮ ಇಷ್ಟಾರ್ಥಗಳು ಈಡೇರುತ್ತೆ ಎಂಬ ನಂಬಿಕೆ ಭಕ್ತರದು, ಹೀಗೆ ಹರಕೆ ಹೊತ್ತಿದ್ದ ಕರಡಿಗೋಡು, ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಸಾವಿರಾರು ಮಂದಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ ತೀರಿಸಿ, ಬಸವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಮಹಾಪೂಜೆ ಬಳಿಕ ನೆರೆದಿದ್ದ ಭಕ್ತರಿಗೆ ದೇವರ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ದೇವಾಲಯ ಸಮಿತಿ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಕೆ.ಎ.ಚಿದಾನಂದ, ತಕ್ಕ ಮುಖ್ಯಸ್ಥರಾದ ದೇವಿಪ್ರಕಾಶ್.ಕೆ.ಬಿ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬಸವೇಶ್ವರನಲ್ಲಿ ಪ್ರಾರ್ಥನೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತೆ. ಹೀಗಾಗಿ ಹರಕೆ ಹೊತ್ತಿದ್ದ ನೂರಾರು ಭಕ್ತರು ಉತ್ಸವಕ್ಕೆ ಆಗಮಿಸಿ ಹರಕೆ ಒಪ್ಪಿಸಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಾಡಿನ ಸುಭಿಕ್ಷೆಗಾಗಿ ನಡೆದ ಉತ್ಸವ ದೇವರ ಕೃಪೆಯಿಂದ ಯಾವುದೇ ಅಡೆತಡೆ ಇಲ್ಲದೆ ನಡೆದಿದೆ.ದೇವಿಪ್ರಕಾಶ್, ತಕ್ಕ ಮುಖ್ಯಸ್ಥರು