ಸಾರಾಂಶ
ಕನ್ನಡ ನಾಡಿನ ಒಬ್ಬ ಶ್ರೇಷ್ಠ ಸಾಹಿತಿ ಕಮಲಾ ಹಂಪನಾರನ್ನು ನಾಡು ಕಳೆದುಕೊಂಡು ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕನ್ನಡ ನಾಡಿನ ಒಬ್ಬ ಶ್ರೇಷ್ಠ ಸಾಹಿತಿ ಕಮಲಾ ಹಂಪನಾರನ್ನು ನಾಡು ಕಳೆದುಕೊಂಡು ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದ್ದು, ಮಹಿಳೆಯರಿಗೆ ಪ್ರೇರಣೆಯ ಸಾಹಿತಿ ಕೂಡ ಆಗಿದ್ದರು ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.ಭಾನುವಾರ ರಬಕವಿ ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದಲ್ಲಿ ಹಮ್ಮಿಕೊಂಡ ಕಮಲಾ ಹಂಪನಾವರವರ ಅಗಲಿಕೆಯ ಹಿನ್ನೆಲೆಯಲ್ಲಿ ಅವರಿಗೆ ನುಡಿನಮನ ಸಲ್ಲಿಸಿದ ನಂತರ ಅವರು ಮಾತನಾಡಿರು. ಕನ್ನಡದ ಖ್ಯಾತ ಸಾಹಿತಿ, ನಾಡೋಜ ಡಾ.ಕಮಲಾ ಹಂಪನಾವರು ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದ ಸುದ್ದಿ ತಿಳಿದು ನಾವು ಕೂಡ ದಿಗ್ಭ್ರಾಂತರಾದೆವು. ಅವರು ಅವಿರತ ಕನ್ನಡ ಸಾಹಿತ್ಯದ ಸೇವೆಯಲ್ಲಿ ತೊಡಗಿ ತಮ್ಮ ೮೯ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದು, ನಾಡಿಗೆ ತುಂಬಲಾರದ ಹಾನಿಯಾಗಿದೆ. ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದು, ನಾಡಿನ ಜನತೆಗೆ ದುಖಃದ ಸಂಗತಿ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ, ಬೆಂಗಳೂರಿನ ದೇವನಹಳ್ಳಿಯಲ್ಲಿ ೧೯೩೫ರ ಅಕ್ಟೋಬರ್ ೨೮ರಂದು ಸಿ. ರಂಗಧಾಮನಾಯಕ್ ಮತ್ತು ಲಕ್ಷಮ್ಮ ದಂಪತಿ ಪುತ್ರಿಯಾಗಿ ಕಮಲಾ ಹಂಪನಾ ಜನಿಸಿದರು. ತುಮಕೂರು ಮತ್ತು ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ ೧೯೫೬ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿ ಒಬ್ಬ ಉತ್ತಮ ಮಹಿಳಾ ಸಾಹಿತಿಯಾಗಿದ್ದರು ಎಂದು ಅವರ ಕುರಿತು ಕಿರುಪರಿಚಯ ನೀಡಿ ನುಡಿನಮನ ಸಲ್ಲಿಸಿದರು. ಪತ್ರಕರ್ತ ಮಲ್ಲಿಕಾರ್ಜುನ ತುಂಗಳ, ವಸ್ತ್ರದ ಬಸಯ್ಯನವರು ಮಾತನಾಡಿ, ಹಂಪನಾ ಅವರ ಅಗಲಿಕೆ ಬಹಳ ದುಖ ತಂದಿದೆ ಎಂದರು.ಸಮಾರಂಭದಲ್ಲಿ ಕಿರಣ ಆಳಗಿ, ವಿಶ್ವಜ ಕಾಡದೇವರ, ವಿರೂಪಾಕ್ಷಯ್ಯ ಹಿರೇಮಠ, ಪ್ರಕಾಶ ಕುಂಬಾರ, ಚಂದು ತುಂಗಳ, ಯಶವಂತ ವಾಜಂತ್ರಿ, ಸೋಮಶೇಖರ ಕೊಟ್ರಶೆಟ್ಟಿ, ಡಾ.ಸಿದ್ರಾಮ ಖಾನಾಪುರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.