ಸಾರಾಂಶ
ಡಾ.ಸಿ.ಎಂ. ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಜೂರಾಗಿದ್ದ ಚಿಕ್ಕಮಕ್ಕಳ ತಜ್ಞ ವೈದ್ಯ ಹುದ್ದೆ 2017ರಲ್ಲಿ ಬಾಗಲಕೋಟೆಗೆ ಹೋಗಿ ಬಡವರಿಗೆ ಸಾಕಷ್ಟು ತೊಂದರೆ ಆಗಿತ್ತು. ಸುಮಾರು 7 ವರ್ಷಗಳ ಬಳಿಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ನೇಮಕ ಮಾಡಿ ಬುಧವಾರ ಆದೇಶ ನೀಡಿದ್ದು, ಈ ಭಾಗದ ಸಾರ್ವಜನಿಕರಲ್ಲಿ ಹರ್ಷ ವ್ಯಕ್ತವಾಗಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆ 30 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಸದ್ಯ 50 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಇಲ್ಲಿ ಪ್ರತಿ ತಿಂಗಳಿಗೆ ಸರಾಸರಿ 75 ಹೆರಿಗೆಗಳಾಗುತ್ತವೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಹೆರಿಗೆಗಳಾಗುವ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆ ಚಿಕ್ಕಮಕ್ಕಳ ತಜ್ಞ ವೈದ್ಯರಿಲ್ಲದೇ ಸೊರಗಿತ್ತು.2025 ಜನವರಿಯಿಂದ ಮೇ ತಿಂಗಳವರೆಗೆ ಹೆರಿಗೆ ಮಾಹಿತಿ:
ಜನವರಿ -76, ಫೆಬ್ರವರಿ- 82, ಮಾರ್ಚ್- 78, ಏಪ್ರಿಲ್ - 65, ಮೇ-77 ಹೀಗೆ 5 ತಿಂಗಳಲ್ಲಿ 378 ಅಂದರೆ ವರ್ಷಕ್ಕೆ ಸರಾಸರಿ 900 ಮಕ್ಕಳ ಜನನವಾಗುತ್ತವೆ. ಹೆರಿಗೆ ನಂತರ ನವಜಾತ ಶಿಶುಗಳಗೆ ಅನಾರೋಗ್ಯ ಕಂಡುಬಂದರೆ ಖಾಸಗಿ ಆಸ್ಪತ್ರೆಗೆ ಹೋಗಿ ಹಣ ಖರ್ಚು ಮಾಡುವ ಚಿಂತಾಜನಕ ಸ್ಥಿತಿ ಇಲ್ಲಿನ ಬಡವರದಾಗಿತ್ತು. ಉಚಿತವಾಗಿ ಹೆರಿಗೆ ಮಾಡಲಾಗುತ್ತಿತ್ತಾದರೂ ಜನಿಸಿದ ಮಕ್ಕಳಿಗೆ ಅನಾರೋಗ್ಯ ಬಂದರೆ ಖಾಸಗಿ ಆಸ್ಪತ್ರೆ ಮೊರೆ ಹೋಗಿ ಸಾವಿರಾರು ರು. ಖರ್ಚು ಮಾಡಬೇಕಿತ್ತು.ಒಂದು ವರ್ಷದಿಂದ ಶಾಸಕ ಭೀಮಸೇನ ಚಿಮ್ಮಕಟ್ಟಿ ಅವರ ಪ್ರಯತ್ನದಿಂದ ಪುನಃ ಆಸ್ಪತ್ರೆಗೆ ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಅವರು ಬುಧವಾರ ಆದೇಶ ಹೊರಡಿಸಿ ಹಳೆ ಬಾಗಲಕೋಟೆಯ 50 ಹಾಸಿಗೆಯ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞ ವೈದ್ಯರಾಗಿದ್ದ ಡಾ.ಅಹಮ್ಮದ್ ರಸೂಲ್ ಶಿರಸಂಗಿ ಅವರನ್ನು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ಬಿಡುಗಡೆ ಮಾಡಿದ್ದು, ಈ ಭಾಗದ ಸಾರ್ವಜನಿಕರಲ್ಲಿ ಹರ್ಷ ತಂದಿದೆ.
ಹುಟ್ಟಿದ ಮಕ್ಕಳಿಗೆ ರಕ್ತ ಹೀನತೆ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದರೆ ಮಕ್ಕಳ ತಪಾಸಣೆ ಮಾಡಲು ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕ್ಕಮಕ್ಕಳ ತಜ್ಞ ವೈದ್ಯರೇ ಇರಲಿಲ್ಲ. ಕೆಲ ತಿಂಗಳಿಂದ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕಾರಣ ಅಲ್ಲಿಂದ ಹುದ್ದೆ ಸ್ಥಳಾಂತರವಾಗಿತ್ತು. ಈ ತಾಂತ್ರಿಕ ಸಂಕಷ್ಟದಿಂದ ಗುಳೇದಗುಡ್ಡ ಜನತೆ ಕಷ್ಟ ಅನುಭವಿಸುವಂತಾಗಿತ್ತು. 2017ರಲ್ಲಿದ್ದ ಹುದ್ದೆ ಹೇಗೆ ಸ್ಥಳಾಂತರವಾಯಿತು ಎಂಬುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ನೇಮಕ ಮಾಡಿ ಡಿಎಚ್ಒ ಆದೇಶ ಮಾಡಿದ್ದು, ಬಹಳ ಅನುಕೂಲವಾಗಲಿದೆ. 7 ವರ್ಷದಿಂದ ಈ ಹುದ್ದೆ ಸ್ಥಳಾಂತರವಾದ ಬಳಿಕ ಈ ಭಾಗದ ಬಡ ಜನರಿಗೆ ಸಾಕಷ್ಟು ತೊಂದರೆಯಾಗಿತ್ತು. ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಿಂದ ಡಾ.ಶರಸಂಗಿ ಅವರು ಎರಡು ದಿನಗಳಲ್ಲಿ ಬಂದು ಹಾಜರಾಗಬಹುದು.
-ಡಾ. ನಾಗರಾಜ ಕುರಿ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಗುಳೇದಗುಡ್ಡ---ಕೋಟ್ 2ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದ ಫಲವಾಗಿ ಈ ಕಾರ್ಯವಾಗಿದೆ. ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ಚಿಕ್ಕಮಕ್ಕಳ ತಜ್ಞ ವೈದ್ಯರ ಅಗತ್ಯ ತುಂಬಾನೇ ಇತ್ತು. ಜನರ ಒತ್ತಡವೂ ಇತ್ತು. ಡಿಎಚ್ಓ ಅವರು ವೈದ್ಯರನ್ನು ನೇಮಿಸಿ ಆದೇಶ ಮಾಡಿದ್ದಾರೆ. ವೈದ್ಯರು ಬೇಗ ಹಾಜರಾಗಿ ವರದಿ ಮಾಡಿಕೊಳ್ಳಲಿ.
-ಭೀಮಸೇನ ಚಿಮ್ಮನಕಟ್ಟಿ ಶಾಸಕರು, ಬಾದಾಮಿ.