ಕೈ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ

| Published : Nov 05 2024, 12:43 AM IST

ಸಾರಾಂಶ

ಚನ್ನಗಿರಿ ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ರೈತರ ಜಮಿನುಗಳಿಗೆ ಸಂಬಂಧಿತ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ ಸಮಸ್ಯೆ ಉಂಟುಮಾಡುತ್ತಿದ್ದು ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ತಾಲೂಕು ಬಿಜೆಪಿ ಪಕ್ಷದ ಮುಖಂಡ ಸಂತೆಬೆನ್ನೂರು ಬಸವರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಫ ಸಂಖ್ಯಾತರನ್ನು ಒಲೈಸುವ ಉದ್ದೇಶದಿಂದ ಬಡ ರೈತರ ಜಮೀನುಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸುತ್ತಿದ್ದು, ಇದು ಸರಿಯಲ್ಲ ರೈತರ ಭೂಮಿಯನ್ನು ಕಸಿದುಕೊಳ್ಳುವ ನಿಮ್ಮ ಕೀಳುಮಟ್ಟದ ರಾಜಕಾರಣಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ತಾಲೂಕು ಬಿಜೆಪಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ದೇಶದ ಬಹುಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ಕೇವಲ ಒಂದು ಸಮುದಾಯದ ಒಲೈಕೆಗಾಗಿ ರಾಜ್ಯದ ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ದೆಹಲಿಯಲ್ಲಿ ಸಂಸತ್‌ನ ಜಾಗ ಸೇರಿ ಲಕ್ಷಾಂತರ ಹೆಕ್ಟರ್ ಭೂಮಿಯನ್ನು ವಕ್ಫ್ ಸೇರಿದೆ ಎಂದು ಹೇಳುತ್ತಿದ್ದು ಇದು ಸರಿಯಲ್ಲ, ಈ ಕೂಡಲೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.

ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ, ಹಾಗೂ ಸಚಿವ ಜಮೀರ್ ಅಹಮದ್ ಅವರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ನಂಜುಂಡಪ್ಪ, ಪಾರಿಪರಮೇಶ್, ಮೊಟ್ಟೆಚಿಕ್ಕಣ್ಣ, ಪಟ್ಲಿನಾಗರಾಜ್, ಮುಖಂಡರಾದ ಕೆ.ಆರ್.ಗೋಪಿ, ಬುಳ್ಳಿ ನಾಗರಾಜ್, ಪಿ.ಬಿ.ನಾಯಕ, ಹನುಮಂತ್ ವಂಶಿ, ಮಾಲತೇಶ್, ಉಮೇಶ್, ಕೆ.ಪಿ.ಎಂ ಲತಾ, ನಿರ್ಮಲಾ, ಶಶಿಕಲಾ, ಸಂಗಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಗೊಂಡನಹಳ್ಳಿ ಜಗದೀಶ್, ದೋಣಿಹಳ್ಳಿ ಯತೀಶ್, ಮಾಚನಾಯ್ಕನಹಳ್ಳಿ ಪುನೀತ್ ಸೇರಿ ಹಕವರು ಭಾಗವಹಿಸಿದ್ದರು.