ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾದ ಪೌರಾಣಿಕ ನಾಟಕಗಳು ಇತ್ತೀಚಿನ ವರ್ಷಗಳಲ್ಲಿ ನಶಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಹಾಗೂ ಜವಾಬ್ದಾರಿಯುತ ಕರ್ತವ್ಯದ ನಡುವೆಯೂ ನಮ್ಮ ಪೊಲೀಸ್ ಇಲಾಖೆಯವರು ತರಬೇತಿ ಪಡೆದು, ಪ್ರದರ್ಶನ ನೀಡುತ್ತಿದ್ದಾರೆ. ಇದೇ ರೀತಿ ನಮ್ಮ ಇಲಾಖೆ ಅಧಿಕಾರಿಗಳು ಎಲ್ಲಾ ಕಡೆಗಳಲ್ಲೂ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸಲಹೆ ನೀಡಿ, ಕಲಾವಿದರಿಗೂ ಹಾಗೂ ಕಲಾಭಿಮಾನಿಗಳಿಗೆ ಮೈಸೂರು ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಶುಭಕೋರಿದರು. ಪಟ್ಟಣದ ಸಾರ್ವಜನಿಕ ಸಮುದಾಯ ಭವನ ಮುಂಭಾಗದಲ್ಲಿ ಹೊಳೆನರಸೀಪುರ ವೃತ್ತ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರು, "ಪೊಲೀಸ್ ಎಂದರೆ ಭಯವಲ್ಲ, ಭರವಸೆ " ಎಂಬ ಧ್ಯೇಯದೊಂದಿಗೆ ಕಾನೂನನ್ನು ಗೌರವಿಸುವರನ್ನು ನಾವೂ ಗೌರವಿಸುತ್ತೇವೆ ಎಂಬ ಘೋಷ ವಾಕ್ಯದೊಂದಿಗೆ ಅಭಿನಯಿಸಿರುವ "ಕುರುಕ್ಷೇತ್ರ " ಅಥವಾ "ಧರ್ಮರಾಜ್ಯ ಸ್ಥಾಪನೆ " ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಆವರಣದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಿದ ನಂತರ ಸಂಜೆ ೬ ಗಂಟೆ ನಂತರ ರೈತರು ಆರೇಳು ತಿಂಗಳು ನಾಟಕ ಕಲಿತು ವಿಶೇಷ ದಿನಗಳಲ್ಲಿ ಪ್ರದರ್ಶನ ನೀಡಿ ಸಂತಸ ಪಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾಟಕ ಕಲಿಕೆ ಜತೆಗೆ ಪ್ರದರ್ಶನ ಕಾಣೆಯಾಗುತ್ತಿದ್ದು, ಪೌರಾಣಿಕ ನಾಟಕಗಳು ಜೀವನದ ಪ್ರತಿಬಿಂಬವಾಗಿದ್ದು, ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ನಾಟಕ ಕಲೆಯನ್ನು ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ ಎಂದರು. ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಮಹಮ್ಮದ್ ಸುಜೀತ ಮಾತನಾಡಿ, ಕೆಲಸದ ಒತ್ತಡದ ನಡುವೆ ನಾಟಕ ಕಲಿತು ಪ್ರದರ್ಶನ ನೀಡುತ್ತಿರುವ ನಮ್ಮ ಪೊಲೀಸರ ಕಾರ್ಯ ಅಭಿನಂದನೀಯ ಎಂದು ಪ್ರಶಂಸಿಸಿ, ನಗರ ಪ್ರದೇಶದಲ್ಲಿ ಬೆಳೆದ ನಮಗೆ ನಾಟಕ ಪ್ರದರ್ಶನದ ಬಗ್ಗೆ ಅರಿವಿಲ್ಲ, ಆದ್ದರಿಂದ ಹೆಚ್ಚು ಕುತೂಹಲದ ಜತೆಗೆ ಕೊನೆ ತನಕ ಕುಳಿತು, ಸಂಭ್ರಮಿಸುವ ಇಚ್ಛೆಯೊಂದಿಗೆ ಆಗಮಿಸಿದ್ದೇನೆ ಎಂದು ಮನದಾಳದ ಮಾತುಗಳನ್ನಾಡಿದರು.
ವೃತ್ತ ನಿರೀಕ್ಷಕ ಪ್ರದೀಪ್ ಅವರು ಶ್ರೀ ಕೃಷ್ಣನಾಗಿ, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಗೌರವಪೂರ್ವಕ ಧರ್ಮರಾಯರಾಗಿ, ಪಿಎಸ್ಸೈ ರಂಗಸ್ವಾಮಿ ೧ನೇ ದುರ್ಯೋಧರಾಗಿ, ಎಸ್ಸೈಗಳಾದ ರಂಗೇಗೌಡ ಧರ್ಮರಾಯನಾಗಿ, ಮುತ್ತುರಾಜ್ ಭೀಮನಾಗಿ ಹಾಗೂ ದೇವಯ್ಯ ಅರ್ಜುನನಾಗಿ, ಪುರುಷೋತ್ತಮ್ ದುಷ್ಯಾಸನನಾಗಿ, ಧನರಾಜ್ ಸಾತ್ಯಕಿಯಾಗಿ, ಮೋಹನ್ ಕುಮಾರ್ ಸೂತ್ರಧಾರಿಯಾಗಿ ಹಾಗೂ ಇತರೆ ಪಾತ್ರಧಾರಿಗಳು ಉತ್ತಮವಾಗಿ ಅಭಿನಯಿಸಿದರು. ಹಿರಿಯ ನಾಗರಿಕರು ಹಾಗೂ ಸಭಿಕರಾದ ಎಚ್.ಎನ್.ವೆಂಕಟರಮಣಯ್ಯ ಮಾತನಾಡಿ, ಪುರಾಣದ ಪಾತ್ರಗಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ, ಅವರಿಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕು ಸಾಗಿಸುವ ಸನ್ಮಾರ್ಗದ ದಾರಿಯನ್ನು ತೋರಿಸುವ ಕಾರ್ಯವನ್ನು ನಾವುಗಳು ಮಾಡಬೇಕಿದೆ. ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ನಾಟಕ ಪ್ರದರ್ಶಿಸುವ ಅಭಿಲಾಷೆ ಪ್ರಶಂಸನೀಯವಾಗಿದೆ ಎಂದು ನಾಟಕ ವೀಕ್ಷಿಸಿದರು.ಕೆಎಸ್ಪಿಎಸ್ ಅಧಿಕಾರಿಗಳಾದ ತಮ್ಮಯ್ಯ, ವೆಂಕಟೇಶ್ ನಾಯ್ಡು, ರವಿಪ್ರಸಾದ್ ಪಿ. ಹಾಗೂ ಪಾಲಾಕ್ಷ ಟಿ.ಆರ್., ಡಿವೈಎಸ್ಪಿ ಶಾಲು, ರಂಗ ಕೌಸ್ತುಭ ಪ್ರಶಸ್ತಿ ಪುರಸ್ಕೃತರು ಹಾಗೂ ನಿರ್ದೇಶಕ ಎಂ.ಪಿ.ಪದ್ಮರಾಜು, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಇದ್ದರು.ಎಚ್ಸಿ ಮಂಗಳ ಹಾಗೂ ತಂಡ ಪ್ರಾರ್ಥಿಸಿದರು, ಪಿಎಸ್ಸೈ ಅಭಿಜೀತ್ ಸಿ. ಸ್ವಾಗತಿಸಿದರು ಹಾಗೂ ಪ್ರಾಂಶುಪಾಲ ಕುಮಾರಯ್ಯ ನಿರೂಪಿಸಿದರು.