ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಇತ್ತೀಚಿನ ದಿನಗಳಲ್ಲಿ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಸಹೋದರರು ಆಸ್ತಿಗಾಗಿ ಕಚ್ಚಾಡಿಕೊಂಡು ನ್ಯಾಯಾಲಯದ ಮೆಟ್ಟಿಲೇರಿತ್ತಿದ್ದಾರೆ ಎಂದು ಪ್ರಥಮ ಸಿವಿಲ್ ನ್ಯಾಯಾಧೀಶ ಸುರೇಶ್ ವಿಷಾದಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹೋದರರು ಆಸ್ತಿಯನ್ನು ಹಣ್ಣನ್ನು ಹಂಚಿಕೊಂಡ ರೀತಿ ಸಮವಾಗಿ ಹಂಚಿಕೊಂಡರೆ ಯಾವುದೇ ವ್ಯಾಜ್ಯಗಳು ಇರುವುದಿಲ್ಲ, ಸಮವಾಗಿ ಹಂಚಿಕೊಳ್ಳದ ಹಿನ್ನಲೆ ಅವರು ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿ ಉದ್ಬವಿಸುತ್ತಿವೆ, ಹತ್ತಾರು ವರ್ಷಗಳು ವ್ಯಾಜ್ಯ ನಡೆದ ಬಳಿಕ ನ್ಯಾಯಾಲಯದಲ್ಲಿಯೂ ಸಹ ಸಮವಾಗಿ ಆಸ್ತಿಯನ್ನು ಹಂಚಲಾಗುವುದು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಪ್ರಭು ಮಾತನಾಡಿ, ಸಣ್ಣ ವ್ಯಾಜ್ಯಗಳನ್ನು ಪ್ರತಿಷ್ಠೆಗೆ ಆಸ್ತಿಯ ವ್ಯಾಜ್ಯದ ಜೊತೆಗೆ ಆಧುನಿಕ ಯುಗದಲ್ಲಿ ಸತಿಪತಿಯರ ಕಲಹಗಳು ಹೆಚ್ಚುತ್ತಾ ಸಾಗಿವೆ, ಸತಿಪತಿಯರ ಜಗಳಗಳು ಇಂದು ಡೈವರ್ಸ್ನಲ್ಲಿ ಕೊನೆಗೊಳ್ಳುತ್ತಿವೆ ಎಂದರು.ಸಣ್ಣ ಸಣ್ಣ ಜಗಳಗಳಲ್ಲಿ ಸತಿಯಾಗಲಿ, ಪತಿಯಾಗಲಿ ಅನುಸರಿಸಿಕೊಂಡು ಹೋಗುವ ಗುಣ ಬೆಳೆಸಿಕೊಂಡು ಹೋದಲ್ಲಿ ಸುಖೀ ಸಂಸಾರಕ್ಕಡ ಅನುವಾಗುತ್ತದೆ, ಕೋರ್ಟ್ ವ್ಯಾಜ್ಯಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿವೆ ಎಂದರು.ಇದೇ ವೇಳೆ ಲೋಕ ಅದಾಲತ್ ಗೆ ಸಂಬಂಧಿಸಿದ ವಿಡಿಯೋವನ್ನು ಬಿತ್ತರಿಸಲಾಯಿತು.ಇದೇ ವೇಳೆ ಮಾಚನಾಯಕನಹಳ್ಳಿ ಗ್ರಾಮದ ಗೌರಮ್ಮ ಶಿವಲಿಂಗಶೆಟ್ಟಿ ದಂಪತಿಗಳ ಪುತ್ರಿ ಜಯಶ್ರಿ ಮತ್ತು ಮೈಸೂರಿನ ಗಾಯಿತ್ರಿ ಅವರ ಪುತ್ರ ವಿನಯಕುಮಾರ್ 9 ವರ್ಷಗಳ ಹಿಂದೆ ಮದುವೆಯಾಗಿ ಕಳೆದ ಒಂದು ವರ್ಷದ ಹಿಂದೆ ವೈ ಮನಸ್ಸಿನಿಂದ ಬೇರೆ ಬೇರೆಯಾಗಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೂಲಂಕುಶವಾಗಿ ಪ್ರಥಮ ಸಿವಿಲ್ ನ್ಯಾಯಾಧೀಶ ಸುರೇಶ್ ಅವರು ಪರಿಶೀಲನೆ ನಡೆಸಿದರು.ನ್ಯಾಯಾಲಯದ ಸಿಬ್ಬಂದಿ ನವೀನ್ ಪೌರೋಹಿತ್ಯವನ್ನು ವಹಿಸಿದ್ದರು. ದಂಪತಿಯನ್ನು ನ್ಯಾಯಾಲಯದಲ್ಲಿ ದಂಪತಿಗಳ ಪೋಷಕರು ಮತ್ತು ನ್ಯಾಯ ದೇವತೆಯ ಮುಂದೆ ಮರುಮದುವೆ ಮಾಡುವುದರ ಮೂಲಕ ಲೋಕ ಅದಾಲತ್ ಯಶಸ್ಸಿಗೆ ಕಾರಣರಾದರು. ನಂತರ ದಂಪತಿಗೆ ಒಂದಾಗಿ ಬಾಳುವಂತೆ ತಿಳಿ ಹೇಳಿದರು.ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಸುಷ್ಮಾ, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಮುನಿರಾಜ್ ಇದ್ದರು.