- ಬೆಳಗುತ್ತಿಯಲ್ಲಿ ರೈತರು, ಗ್ರಾಮಸ್ಥರ ಪ್ರತಿಭಟನೆಯಲ್ಲಿ ಸತೀಶ್‌ರಾಜ್‌ ಅರಸ್‌

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ರಾಜ್ಯದ ರೈತರ ಐಪಿಸೆಟ್‌ ಮತ್ತು ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮುಂತಾದ ಉಚಿತ ವಿದ್ಯುತ್‌ ಸೌಲಭ್ಯಗಳನ್ನು ರದ್ದು ಮಾಡುವ ಹುನ್ನಾರದಿಂದಲೇ ರಾಜ್ಯ ಸರ್ಕಾರ ವಿದ್ಯುತ್‌ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ ಎಂದು ರೈತ ಸಂಘದ ಕಾರ್ಯಕರ್ತ ಸತೀಶ್‌ರಾಜ್‌ ಅರಸ್‌ ಆರೋಪಿಸಿದರು.

ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ರೈತರು ಮತ್ತು ಗ್ರಾಮಸ್ಥರು ಹಮ್ಮಿಕೊಂಡಿದ್ದ ವಿದ್ಯುತ್‌ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಕ್ರಮವನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ರಾಜ್ಯ ವಿದ್ಯುತ್‌ ನಿಗಮದಲ್ಲಿ ಸಾವಿರಾರು ಕೋಟಿ ಮೌಲ್ಯದ ವಿತರಣಾ ಜಾಲ, ಉಪ ಕೇಂದ್ರಗಳು, ಯಂತ್ರೋಪಕರಣಗಳಂತಹ ಬೃಹತ್‌ ಸಾರ್ವಜನಿಕ ಸೌಕರ್ಯ ಆಸ್ತಿಯಿವೆ. ವಿದ್ಯುತ್‌ ವಿತರಣಾ ಜಾಲವನ್ನು ನಿರ್ವಹಿಸುವ ಶಕ್ತಿ ರಾಜ್ಯದ ವಿದ್ಯುತ್‌ ನಿಗಮದ ನೌಕರರಿಗಿದೆ. ಈಗ ಇಂತಹ ನಿಗಮವನ್ನು ಖಾಸಗಿ ಕಂಪನಿಗಳಿಗೆ ವಹಿಸುತ್ತಿರುವುದು ರೈತರಿಗೆ, ಬಡ ಕೂಲಿ ಕಾರ್ಮಿಕರಿಗೆ ಹೊರೆಯಾಗುತ್ತದೆ. ರೈತರು ಇದನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ರೈತ ಸಂಘದ ಕಾರ್ಯಕರ್ತರಾದ ಶಾಂತವೀರಪ್ಪ, ಮೈಲಾರಪ್ಪ ಮಾತನಾಡಿ, ಟಾಟಾ ಪವರ್‌ ಕಂಪನಿಗೆ ವಿದ್ಯುತ್‌ ಖಾಸಗೀಕರಣ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ತಕ್ಷಣವೇ ಕೈ ಬಿಡಬೇಕು, ರೈತರಿಗೆ ಉಚಿತ ವಿದ್ಯುತ್‌ ಯೋಜನೆಗೆ ಸರ್ಕಾರದ ನಡೆಯಿಂದ ದೊಡ್ಡ ಹೊಡೆತ ಬೀಳಲಿದೆ. ಗೃಹಜ್ಯೋತಿ ಯೋಜನೆಯಲ್ಲಿಯೂ ಅನ್ಯಾಯವಾಗಲಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯಕರ್ತರಾದ ತೀರ್ಥಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಬೆಸ್ಕಾಂ ಶಾಖಾ ಅಧಿಕಾರಿಗೆ ಹುತ್ತೇಶ್‌ನಾಯ್ಕ, ಎನ್‌.ಯೋಗೀಶ್‌, ಕುಮಾರಸ್ವಾಮಿ, ರಾಕೇಶ್‌ ಗುತ್ತಲ, ಸಂಗಮೇಶ್‌ ಮಸ್ಕಿ, ಹನುಮಂತಪ್ಪ ಮುಂತಾದವರು ಮನವಿ ಸಲ್ಲಿಸಿದರು.

- - -

-ಚಿತ್ರ: ವಿದ್ಯುತ್ ಖಾಸಗೀಕರಣ ಖಂಡಿಸಿ ಬೆಳಗುತ್ತಿಯಲ್ಲಿ ರೈತರು ಪ್ರತಿಭಟಿಸಿದರು.