ಜನತೆಗೆ ನೀಡಿದ್ದ ಭರವಸೆ ಆರು ತಿಂಗಳಲ್ಲಿ ಈಡೇರಿಕೆ: ಜೋಶಿ

| Published : Dec 12 2024, 12:31 AM IST

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಕಾರಣಾಂತರಗಳಿಂದ ಅನುದಾನದ ಕೊರತೆ ಇದ್ದು ಇಂತಹ ಪರಿಸ್ಥಿತಿಯಲ್ಲಿ ಈ ಕ್ಷೇತ್ರದ ಶಾಸಕರ ಸತತ ಪ್ರಯತ್ನದಿಂದ ಈ ಭಾಗದ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ.

ಹುಬ್ಬಳ್ಳಿ:

ಶಾಸಕ ಮಹೇಶ ಟೆಂಗಿನಕಾಯಿ ಅವರು ಈ ಭಾಗದ ಜನತೆಗೆ ಆರು ತಿಂಗಳ ಹಿಂದೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ. ವಾರ್ಡ್‌ನಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ 52ನೇ ವಾರ್ಡ್‌ನಲ್ಲಿರುವ ಡಾಲರ್ಸ್‌ ಕಾಲನಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಡಿ ₹ 4 ಕೋಟಿ ಅನುದಾನದಲ್ಲಿ ಸಿಸಿ ಹಾಗೂ ಡಾಂಬರ್ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ ಕಾರಣಾಂತರಗಳಿಂದ ಅನುದಾನದ ಕೊರತೆ ಇದ್ದು ಇಂತಹ ಪರಿಸ್ಥಿತಿಯಲ್ಲಿ ಈ ಕ್ಷೇತ್ರದ ಶಾಸಕರ ಸತತ ಪ್ರಯತ್ನದಿಂದ ಈ ಭಾಗದ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರವು ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಮಾಡಬೇಕೆಂಬ ಕನಸು ಕಂಡಿದ್ದೇನೆ. ಆದರೆ, ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ರಾಜ್ಯ ಸರ್ಕಾರದಿಂದ ಹಣವನ್ನು ಕ್ರೋಡೀಕರಿಸಲು ಪದೇ ಪದೇ ಬೆಂಗಳೂರಿಗೆ ತೆರಳಬೇಕಾಗುತ್ತದೆ. ಈಗಾಗಲೇ ಕ್ಷೇತ್ರದ ₹ 35 ರಿಂದ 40 ಕಿಮೀ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಹಂತ-ಹಂತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.ಈ ವೇಳೆ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ, ಮಾಜಿ ಮೇಯರ್‌ ಪ್ರಕಾಶ ಕ್ಯಾರಕಟ್ಟಿ ಸಂತೋಷ ಶೆಟ್ಟಿ, ಹರೀಶ ಜಂಗ್ಲಿ, ಕೃಷ್ಣ ಗಂಡಗಾಳೇಕರ, ಸುಭಾಷಸಿಂಗ್ ಜಮಾದಾರ, ಕಿಶನ್ ಬಿಲಾನ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಾಲನಿಯ ನಿವಾಸಿಗಳಿದ್ದರು.