ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸಾರ್ವಜನಿಕ ಆಸ್ಪತ್ರೆಗಳು ಬಡವರ, ಬಲಹೀನರ, ಆಶಕ್ತರ ಪಾಲಿನ ಆಶಾ ಕಿರಣವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಿಮ್ಮ ಆರೋಗ್ಯ ನಮ್ಮ ಆದ್ಯತೆಯಡಿ ನಮ್ಮ ಕ್ಲಿನಿಕ್ನ್ನು ತೆರದು ಚಿಕಿತ್ಸೆಗೆ ಮುಂದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ನುಡಿದರು.ನಗರದ ಚೌಡರೆಡ್ಡಿಪಾಳ್ಯದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ ನಿಮ್ಮ ಆರೋಗ್ಯ ನಮ್ಮ ಆದ್ಯತೆ ದೃಷ್ಟಿಯಿಂದ ನಮ್ಮ ಕ್ಲಿನಿಕ್ಗಳ ಸ್ಥಾಪನೆ ಮಾಡಿದ್ದು ಪ್ರಸ್ತುತ ಸ್ಥಿತಿಯಲ್ಲಿ ಆರೋಗ್ಯ ಉತ್ತಮವಾಗಿದ್ದರೆ ಜನರು ಏನನ್ನಾದರೂ ಸಾಧಿಸಬಹುದಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆಜಿಲ್ಲೆಗೆ ೩ ತುರ್ತು ಚಿಕಿತ್ಸಾ ಆಸ್ಪತ್ರೆಗಳು ಮಂಜೂರಾಗಿದ್ದು ಇದರಲ್ಲಿ ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ತಾಲೂಕಿಗೊಂದರಂತೆ ಆಸ್ಪತ್ರೆಗಳು ನಿರ್ಮಾಣಗೊಳ್ಳಲಿವೆ. ಇದರಿಂದ ಬಡವರಿಗೆ ಉಚಿತ ಆರೋಗ್ಯ ಹಾಗೂ ತುರ್ತುಚಿಕಿತ್ಸೆ ಲಭಿಸಲಿದೆ. ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸುವುದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಹಾ ಉನ್ನತದರ್ಜೆಗೇರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು.
ಕುಡಿಯುವ ನೀರಿಗೆ ಆದ್ಯತೆನಗರದ ಕನ್ನಂಪಲ್ಲಿ ಕೆರೆ, ನೆಕ್ಕುಂದಿಪೇಟೆ ಕೆರೆ ಹಾಗೂ ಭಕ್ತರಹಳ್ಳಿ ಅರಸನಕೆರೆಗಳಿಂದ ನೀರುನ್ನು ನಗರ ಭಾಗಕ್ಕೆ ಒದಗಿಸಲಾಗುತ್ತಿದ್ದು ಇದರಿಂದ ನೀರಿನ ಸಮಸ್ಯೆ ನಿಗಲಿದ್ದು ಇವುಗಳ ಅಭಿವೃದ್ಧಿಗೆ ಹಾಗೂ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಈಗಾಗಲೇ ಕೋಟ್ಯಂತರ ರುಪಾಯಿಗಳನ್ನು ಒದಗಿಸಿದ್ದು ಇದರ ಮೂಲಕ ಈ ಭಾಗದ ಜನರಿಗೆ ಕೆಸಿ ವ್ಯಾಲಿ ಮತ್ತು ಹೆಚ್ಎನ್ ವ್ಯಾಲಿಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆಯಡಿಯಲ್ಲಿ ಶಾಶ್ವತ ನೀರನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಹೆಚ್ಒ ಮಹೇಶ್ , ತಹಸೀಲ್ದಾರ್ ಸುದರ್ಶನ್ ಯಾದವ್, ಟಿಹೆಚ್ಒ ರಾಮಚಂದ್ರರೆಡ್ಡಿ, ನಗರಸಭಾ ಅಧ್ಯಕ್ಷ ಜಗನ್ನಾಥ್, ಪೌರಾಯುಕ್ತ ಜಿ.ಎನ್ ಚಲಪತಿ ಉಪಾಧ್ಯಕ್ಷೆ ರಾಣಿಯಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ ಬಾಬು, ನಗರಸಭಾ ಸದಸ್ಯರಾದ ಹರೀಶ್, ಮಹಮ್ಮದ್ ಶಫೀಕ್, ಶಬ್ಬೀರ್ ಮತ್ತಿತರರು ಉಪಸ್ಥಿತರಿದ್ದರು.