ಸಾರಾಂಶ
ರಾಮಮೂರ್ತಿ ನವಲಿ
ಕನಕಗಿರಿ: ಕಲೆ, ಸಂಸ್ಕೃತಿ, ಇತಿಹಾಸದ ಸಂದೇಶ ಪರಿಚಯಿಸುವುದೇ ಕನಕಗಿರಿ ಉತ್ಸವದ ಉದ್ದೇಶವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.ಕನಕಗಿರಿ ಉತ್ಸವ ನಿಮಿತ್ತ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆ ನೀಡಿದಾಗ ತಮಗೇ ಅಚ್ಚರಿಯಾಗಿತ್ತು. ಬರಹಗಾರ ಅಲ್ಲ, ಸಾಹಿತಿ ಅಲ್ಲ, ಆದರೂ ಇದನ್ನು ಏಕೆ ಕೊಟ್ಟಿದ್ದಿರಿ ಎಂದು ಸಿಎಂ ಅವರನ್ನೇ ಕೇಳಿದ್ದೆ. ಆದರೂ ವಿಶ್ವಾಸವಿಟ್ಟು ಸಚಿವ ಸ್ಥಾನ ಕೊಟ್ಟರು. ಆ ಇಲಾಖೆಯ ಸಚಿವನಾದ ಮೇಲೆಯೇ ಮುಖ್ಯಮಂತ್ರಿಯಾಗಿದ್ದೇನೆ ಎಂದು ಸಿಎಂ ಹೇಳಿದ್ದರು. ಆದರೂ ನನಗೇನು ಅಂತಹ ದೊಡ್ಡ ಹುದ್ದೆಯ ಆಸೆ ಇಲ್ಲ ಎಂದು ಖಾತೆ ತೆಗೆದುಕೊಂಡಿದ್ದೇನೆ ಎಂದರು.ಕನಕಗಿರಿಯಲ್ಲಿಯೇ ಏಕೆ ಉತ್ಸವ ಆಗುತ್ತದೆ ಎನ್ನುವುದನ್ನು ಮುಂದಿನ ಪೀಳಿಗೆಗೆ ಹೇಳಬೇಕಾಗಿದೆ. ಹಿಂದಿನ ಇತಿಹಾಸ ಗೊತ್ತಾಗಬೇಕು. ಅದಕ್ಕಾಗಿ ಉತ್ಸವ ಆಚರಿಸಬೇಕಾಗಿದೆ ಎಂದರು.ಕನಕಗಿರಿಯಲ್ಲಿ 701 ಬಾವಿಗಳು ಇದ್ದವು ಎನ್ನುವ ಇತಿಹಾಸದ ಮಹತ್ವ ಅರ್ಥವಾಗುತ್ತದೆ. ಕನಕಗಿರಿಯನ್ನು ಆಳಿದವರು ಏನು ಮಾಡಿದ್ದಾರೆ ಎನ್ನುವುದು ತಿಳಿಸಬೇಕಾಗಿದೆ ಎಂದರು.ಕನಕಗಿರಿಯ ಅಭಿವೃದ್ಧಿ ಬಗ್ಗೆ ಚಿಂತನೆಯಾಗಬೇಕು. ನಾವು ಬಂದ ಮೇಲೆಯೇ ಇಲ್ಲಿ ತಾಲೂಕಿನ ನವಲಿ ಗ್ರಾಮದ ಹತ್ತಿರ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಅದರ ಸಂಪೂರ್ಣ ಅಭಿವೃದ್ಧಿಯಾಗಬೇಕು. ಕಾರ್ಖಾನೆಗಳನ್ನು ತರಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.ಅಂಜನಾದ್ರಿ ಬಗ್ಗೆ ಪ್ರಚಾರ ಮಾಡಿದವರು ಅಭಿವೃದ್ಧಿ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ ನೂರು ಕೋಟಿ ರುಪಾಯಿ ಅನುದಾನ ನೀಡಿದ್ದು, ಶೀಘ್ರದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಬೇಕಾಗಿದೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡುತ್ತೇನೆ. ಆದರೆ ಅಧಿಕಾರದಲ್ಲಿ ಅಭಿವೃದ್ಧಿ ಮಾಡೋಣ. ರೈಸ್ ಪಾರ್ಕ್ ಮಾಡಿದ್ದೇನೆ. ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದ್ದೇನೆ. ಕೆಲವರು ಆಡಿಕೊಂಡರು. ಆದರೂ ಬಿಡಲಿಲ್ಲ. ಕೆರೆ ತುಂಬಿಸಿದರೆ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಇದರಿಂದ ಕೃಷಿ, ತೋಟಗಾರಿಕೆ ಅಭಿವೃದ್ಧಿಯಾಗುತ್ತದೆ ಎಂದರು.ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ನಾವೆಲ್ಲ ಮುಂದಾಗಬೇಕು. 14 ಸಮಾನಾಂತರ ಜಲಾಶಯ ನಿರ್ಮಾಣವಾದರೆ ಈ ಭಾಗ ಅಭಿವೃದ್ಧಿಯಾಗುತ್ತದೆ. ಇಲ್ಲಿ ಕೇವಲ ಚರ್ಚೆ ಮಾಡಿದರೆ ಸಾಲದು. ಅದಕ್ಕೆ ಪರಿಹಾರ ಸೂಚಿಸಿದರೆ ಅವುಗಳನ್ನು ಜಾರಿ ಮಾಡೋಣ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದೇವೆ. ಹಿಂದೆ ಯಾರೂ ಮಾಡದೇ ಇರುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಸರ್ವರು ಸಮಾನರು ಎನ್ನುವುದನ್ನು ಸಾರಿ ಸಾರಿ ಹೇಳಿದ್ದಾರೆ ಎಂದರು.ಇದಕ್ಕಿಂತ ಪೂರ್ವದಲ್ಲಿ ತಾಲೂಕು ಕಸಾಪ ಅದ್ಯಕ್ಷ ಮೆಹಬೂಬ ಹುಸೇನ್ ಆಶಯ ನುಡಿ ವ್ಯಕ್ತಪಡಿಸಿ, ಸಚಿವ ಶಿವರಾಜ ತಂಗಡಗಿ ಪ್ರಥಮ ಬಾರಿಗೆ ಶಾಸಕರಾಗಿ ಸಚಿವರಾಗಿದ್ದ ಸಂದರ್ಭದಲ್ಲಿಯೇ ಕನಕಗಿರಿ ಉತ್ಸವಕ್ಕೆ ಚಾಲನೆ ನೀಡಿದ ರುವಾರಿ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಶರಣಬಸಪ್ಪ ಕೋಲ್ಕಾರ್ ವಹಿಸಿದ್ದರು.ಈ ಸಂದರ್ಭದಲ್ಲಿ ಚಿಂತಕರಾದ ಕೆ.ಚೆನ್ನಬಸಯ್ಯಸ್ವಾಮಿ, ದುರ್ಗಾದಾಸ್ ಯಾದವ, ಡಾ.ನಾರಾಯಣ ಕಂದಗಲ್, ಡಾ.ಯಮನೂರಪ್ಪ ವಡಕಿ, ಶರಣಬಸಪ್ಪ ಬಿಳಿಎಲಿ, ಪವನಕುಮಾರ ಗುಂಡೂರು, ಡಾ.ಬದರಿ ಪ್ರಸಾದ, ಡಾ.ಇಮಾಮಸಾಬ ಹಡಗಲಿ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ ಸ್ವಾಗತಿಸಿದರು.