ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಹೂವಿನ ಪರಿಮಳವನ್ನು ಪರಿಸರಕ್ಕೆ ಹರಡುವ ವಾಯುವಿನಂತೆ ಸಮಾಜದಲ್ಲಿ ಸಚ್ಚಿಂತನೆಗಳನ್ನು ಬಿತ್ತರಿಸುವ ಮಾಧ್ಯಮಗಳ ಪಾತ್ರ ಪರಮ ಪವಿತ್ರ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಬಸವಲಿಂಗ ಮಹಾಸ್ವಾಮಿಗಳು ನುಡಿದರು.ಸಿದ್ದೇಶ್ವರ ಸ್ವಾಮಿಗಳ 2ನೇ ವರ್ಷದ ಗುರುನಮನ ಕಾರ್ಯಕ್ರಮದ ಅಂಗವಾಗಿ ನಗರದ ಜ್ಞಾನಯೋಗಾಶ್ರಮದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಮಾಧ್ಯಮಗಳ ಬಗ್ಗೆ ಅಪಾರವಾದ ನಂಬಿಕೆ ಇಟ್ಟಿದ್ದರು. ಪ್ರತಿದಿನ ಪತ್ರಿಕೆಗಳನ್ನು ಓದುವುದು ಅವರ ದಿನಚರಿಯ ಪ್ರಮುಖ ಭಾಗವಾಗಿತ್ತು. ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಆರೋಗ್ಯ ವಿಚಾರಿಸಲು ಬಂದಿದ್ದ ಮಾಧ್ಯಮಗಳ ಪ್ರತಿನಿಧಿಗಳ ಯೋಗಕ್ಷೇಮವನ್ನು ವಿಚಾರಿಸಿದ್ದ ಶ್ರೀಗಳು ಅವರಿಗೆಲ್ಲ ಹೋಳಿಗೆ ಪ್ರಸಾದ ಮಾಡಿಸಿದ್ದನ್ನು ಸ್ಮರಿಸಿದರು. ಹರ್ಷಾನಂದ ಸ್ವಾಮೀಜಿ ಮಾತನಾಡಿ, ಈಗಾಗಲೇ ಗ್ರಾಮ ಗ್ರಾಮಗಳಲ್ಲಿ ಜ್ಞಾನದಾಸೋಹ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಗುರುನಮನ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ. ಇದೀಗ ನಗರದ ವಿವಿಧ ಬಡಾವಣೆಗಳಲ್ಲಿ ಜ್ಞಾನದಾಸೋಹ ನಡೆಯುತ್ತಿದೆ. ಡಿ.25 ರಿಂದ ಜ.2 ರವರೆಗೆ ಆಶ್ರಮದಲ್ಲಿ ಗುರುನಮನ ಕಾರ್ಯಕ್ರಮದ ಅಂಗವಾಗಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸುಧಾರಿತ ಕೃಷಿ, ಜ್ಞಾನಾರಾಧನೆ, ಗ್ರಾಮ ಸಂಸ್ಕೃತಿ, ಯೋಗ ಜೀವನ, ಮಾತೃಭಕ್ತಿ, ಜಾಗತಿಕ ತಾತ್ವಿಕ ಚಿಂತನೆಗಳು, ಸೇವಾಭಾವ ಹಾಗೂ ಗುರುದೇವರ ಬದುಕು ಎಂಬ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ. ಜ.1 ರಂದು ಗುರುದೇವರಿಗೆ ದೀಪನಮನ ಹಾಗೂ ಜ.2 ರಂದು ಪುಷ್ಪನಮನ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ ಮಾತನಾಡಿ, ಜ್ಞಾನದಾಸೋಹಿ ಶ್ರೀಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ಮಾಧ್ಯಮಗಳಿಗೆ ಅಪಾರವಾದ ಶ್ರದ್ಧಾಭಕ್ತಿ. ಅವರ ಪ್ರವಚನ ಸಾರಗಳನ್ನು ಪ್ರಕಟಿಸದ ಪತ್ರಿಕೆಗಳೇ ಇಲ್ಲ. ಗುರುನಮನ ಕಾರ್ಯಕ್ರಮವನ್ನು ಮಾಧ್ಯಮದವರು ಯಶಸ್ವಿಗೊಳಿಸಲು ಸಕಲ ಸಹಕಾರ ನೀಡುವರು. ಪ್ರಚಾರ ಸಮಿತಿಗೆ ಯಾವುದೇ ಅಧ್ಯಕ್ಷ, ಉಪಾಧ್ಯಕ್ಷರು, ಪದಾಧಿಕಾರಿಗಳು ಇರುವುದಿಲ್ಲ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಸಂಯೋಜಕರಾಗಿ ಕಾರ್ಯನಿರ್ವಹಿಸುವರು ಎಂದರು.ಕಾನಿಪ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಗ್ರಾಂಥಿಕ ಭಾಷೆಯಲ್ಲಿ ಅತ್ಯಂತ ಸರಳವಾಗಿ ಪ್ರವಚನ ನೀಡುತ್ತಿದ್ದರು. ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಮಾಧ್ಯಮಗಳಿಗೆ ಅವರ ಆಶೀರ್ವಚನವೇ ದೊಡ್ಡ ಸುದ್ದಿಯಾಗಿರುತ್ತಿತ್ತು. ಗುರುನಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿಜಯಪುರದ ಎಲ್ಲ ಮಾಧ್ಯಮ ಬಂಧುಗಳು ಎಲ್ಲ ರೀತಿಯ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಶ್ರದ್ಧಾನಂದ ಸ್ವಾಮೀಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಶ ದೇವಗಿರಿ, ವಿಡಿಎ ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ, ವಿವಿಧ ಮಾಧ್ಯಮಗಳ ಪ್ರತಿನಿಧಿಗಳು, ಗುರುನಮನ ಕಾರ್ಯಕ್ರಮದ ವಿವಿಧ ಸಮಿತಿಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.ಯಾವಾಗಲೂ ಮಾಧ್ಯಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ. ಪ್ರಸಕ್ತ ವರ್ಷದ ಗುರುನಮನ ಕಾರ್ಯಕ್ರಮವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮಾಧ್ಯಮಗಳ ಸಹಕಾರವೂ ಅಗತ್ಯ. ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಇಲ್ಲಿನ ಕಾರ್ಯಕ್ರಮಗಳ ಬಗ್ಗೆ ಈ ಹಿಂದೆಯೂ ಅರ್ಥಪೂರ್ಣವಾಗಿ ನಿರ್ವಹಿಸುತ್ತ ಬಂದಿರುವ ಮಾಧ್ಯಮಗಳು ಈ ಬಾರಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.
-ಗುರು ಬಸವಲಿಂಗ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮದ ಅಧ್ಯಕ್ಷರು.