ಸಾರಾಂಶ
ನರಸಿಂಹರಾಜಪುರ, ದೇಶದ ರಾಷ್ಟ್ರೀಯತೆ, ಸಾರ್ವಭೌಮತೆ ಉಳಿಯಲು ಸೈನಿಕರ ಪಾತ್ರ ದೊಡ್ಡದಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
- ಮರಳಿ ತಾಲೂಕಿಗೆ ಆಗಮಿಸಿದ ನಿವೃತ್ತ ಸೈನಿಕ ಪ್ರದೀಪ್ ಅವರಿಗೆ ಸ್ವಾಗತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರದೇಶದ ರಾಷ್ಟ್ರೀಯತೆ, ಸಾರ್ವಭೌಮತೆ ಉಳಿಯಲು ಸೈನಿಕರ ಪಾತ್ರ ದೊಡ್ಡದಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು. ಬುಧವಾರ ಸಂಜೆ ಅಂಬೇಡ್ಕರ್ ವೃತ್ತದಲ್ಲಿ ಶೃಂಕೋನ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಸೈನ್ಯದಿಂದ ನಿವೃತ್ತರಾಗಿ ತಾಲೂಕಿಗೆ ಆಗಮಿಸಿದ ಬಿ.ಎಚ್.ಕೈಮರದ ಸುಬೇದಾರ್ ಪ್ರದೀಪ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದರು. ಪ್ರದೀಪ್ 25 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಜುಬೇದಾರ್ ಆಗಿ ನಿವೃತ್ತರಾಗಿದ್ದಾರೆ. ಇನ್ನೂ 5 ವರ್ಷ ಸೇವೆ ಸಲ್ಲಿಸಿದ್ದರೆ ಮೇಜರ್ ಆಗಬಹುದಿತ್ತು. ಸೈನಿಕರು ನಿವೃತ್ತರಾಗಿ ನರಸಿಂಹರಾಜಪುರ ತಾಲೂಕಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಿ ಸನ್ಮಾನಿಸುವ ಸಂಪ್ರದಾಯ ನಡದು ಕೊಂಡು ಬರುತ್ತಿದೆ. ಇದು ದೇಶಕ್ಕೆ ಸಲ್ಲಿಸುವ ಗೌರವ. ಯುವ ಜನರು ಶಿಕ್ಷಣ ಮುಗಿಸಿದ ನಂತರ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ವೃತ್ತದಲ್ಲಿ ನಿವೃತ್ತ ಸೈನಿಕ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು. ನಂತರ ನಾಗಲಾಪುರ ಗ್ರಾಪಂ ಆವರಣದಲ್ಲಿ ಗೌರವಿಸಲಾಯಿತು. ನಂತರ ಮೆರವಣಿಗೆ ಮೂಲಕ ನಿವೃತ್ತ ಸೈನಿಕ ಪ್ರದೀಪ್ ಅವರನ್ನು ಬಿ.ಎಚ್. ಕೈಮರದವರೆಗೆ ಕರೆ ತರಲಾಯಿತು. ಬಿ.ಎಚ್.ಕೈಮರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು, ಆಟೋ ಚಾಲಕರ ಸಂಘದವರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಶೃಂಕೋನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ವಿ.ಡೇವೀಸ್ ಮಾತನಾಡಿ, 25 ವರ್ಷ ಸುದೀರ್ಘವಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರದೀಪ್ ಅವರ ಮುಂದಿನ ಜೀವನ ಸುಖಮಯವಾಗಿರಲಿ. ಸಮಾಜದಲ್ಲಿ ಉತ್ತಮ ರೀತಿ ಸೇವೆ ಸಲ್ಲಿಸುವ ಭಾಗ್ಯ ನಿಮಗೆ ಸಿಗಲಿ. ನರಸಿಂಹರಾಜಪುರದಲ್ಲಿ ಹಿಂದೆ ಸೈನಿಕರು ಕಡಿಮೆ ಇದ್ದರು. ಈಗ ಹಾಲಿ ಹಾಗೂ ಮಾಜಿ ಸೈನಿಕರು ಸೇರಿ 100 ಸೈನಿಕರು ಇದ್ದಾರೆ ಎಂದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಜುಬೇದ, ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಹರ್ಷ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಮುಖಂಡ ರಜಿ, ಶೃಂಕೋನ ಮಾಜಿ ಸೈನಿಕರ ಸಂಘದ ಮಾಜಿ ಕಾರ್ಯದರ್ಶಿ ಯತಿರಾಜ್, ನಿರ್ದೇಶಕ ವೈ. ಎಲ್ದೋ, ಸದಸ್ಯರಾದ ರಾಜೇಶ್, ವರ್ಗೀಸ್,ಸಜಿ, ವಿಲ್ಸನ್, ಅರೆ ಸೇನಾ ಪಡೆಯ ನಿವೃತ್ತ ಯೋಧ ಸುನೀಲ್, ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ವಿದ್ಯಾನಂದಕುಮಾರ್ ,ಸದಸ್ಯ ಮನೀಶ್ ಮತ್ತಿತರರು ಇದ್ದರು.