ಹಿರಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿನ ನೆಹರೂ ಗ್ರಾಮಾಂತರ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಗುರುವಂದನಾ ಸಮಾರಂಭವನ್ನು ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ದೇಶ ನಿರ್ಮಾಣಕ್ಕೆ ಶ್ರಮಿಸುವ ಸೈನಿಕರು ಮತ್ತು ರೈತರಂತೆ ಶಿಕ್ಷಕರದ್ದೂ ಸಹ ಮಹತ್ವಪೂರ್ಣವಾದ ಸ್ಥಾನವಿದೆ ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಆದಿವಾಲ ಗ್ರಾಮದಲ್ಲಿನ ನೆಹರೂ ಗ್ರಾಮಾಂತರ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಶಾಶ್ವತವಾದ ಗೌರವ ಪಡೆದಿದೆ. ಮಕ್ಕಳ ಪ್ರೀತಿ ಶಿಕ್ಷಕರಿಗೆ, ಶಿಕ್ಷಕರ ಪ್ರೀತಿ ಮಕ್ಕಳಿಗೆ ಹಂಚಿಕೆಯಾಗಬೇಕು. ಬೇದ ಭಾವಗಳು ತೊಲಗಿ ಸಾಧನೆ ರೂಪುಗೊಳ್ಳಬೇಕು. ಎಲ್ಲರನ್ನೂ ಗೌರವಿಸುವ, ಬೆಳೆಸುವ, ಗುರುತಿಸುವ ಪ್ರಕ್ರಿಯೆಗಳು ನಿರಂತರವಾಗಿರಬೇಕು. ಜ್ಞಾನಕ್ಕೆ ಸಮಾನವಾದ ವಸ್ತು ಯಾವುದೂ ಇಲ್ಲ. ಶಿಕ್ಷಣದ ಬೆಳವಣಿಗೆಗೆ ಶಿಕ್ಷಕರ ಪೋಷಕರ ಪಾತ್ರ ಸಮಾನವಾಗಿದ್ದು ಮಕ್ಕಳಲ್ಲಿ ನೈತಿಕ ಪಾಠಗಳನ್ನು ಬಿತ್ತಬೇಕು. ತಂದೆ ತಾಯಿ ಆದರ್ಶ ಮತ್ತು ಕಲಿಕೆಯ ಪ್ರೀತಿಗೆ ಮಕ್ಕಳು ಒತ್ತಾಸೆಯಾಗಿ ನಿಲ್ಲಬೇಕಿದೆ.ಹಳ್ಳಿ ಭಾಗದ ಜನರ ಶಿಕ್ಷಣದ ಅವಶ್ಯಕತೆ ಅರಿತು ಅಂದು ಆರಂಭವಾದ ನೆಹರೂ ಗ್ರಾಮಾಂತರ ಪ್ರೌಢಶಾಲೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಬದುಕನ್ನು ಹಸನು ಮಾಡುತ್ತಿದೆ. ಶ್ರೀ ಮಠವು ಸರ್ಕಾರದ ಜೊತೆ ಸೇರಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಎಲ್ಲರೂ ಕಟಿಬದ್ದರಾಗಬೇಕು. ಶಿಕ್ಷಣಕ್ಕೆ ನಾಡಿನ ಮಠ ಮಾನ್ಯಗಳ ಕೊಡುಗೆ ಹೆಚ್ಚಿನದಾಗಿದ್ದು ಅಕ್ಷರದ ಜೊತೆಗೆ ದಾಸೋಹವೂ ಸೇರಿ ಲಕ್ಷಾಂತರ ಮನಸ್ಸುಗಳನ್ನು ಬೆಸೆಯಲಾಗಿದೆ. ಸಲವತ್ತುಗಳು ಕಡಿಮೆ ಇದ್ದ ಕಾಲದಲ್ಲಿ ಸಂಸ್ಕಾರಗಳು ಉತ್ತಮವಾಗಿದ್ದವು. ಇದೀಗ ಎಲ್ಲಾ ಸವಲತ್ತುಗಳು ದೊರಕಿದರು ಸಹ ಬದುಕುಗಳು ದುಸ್ತರವಾಗಿವೆ. ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಡಿ ಕನ್ನಡ ಶಾಲೆಗಳು ಹಿಂದುಳಿದಿಲ್ಲ. ಕನ್ನಡದಲ್ಲಿ ಐಎಎಸ್, ಐಪಿಎಸ್ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಸರ್ಕಾರವು ಮಾಡಲಾಗದ ಶಿಕ್ಷಣ ಸೇವೆಯನ್ನು ಸಿದ್ದಗಂಗಾ ಮಠವು ಮಾಡಿದೆ. ನಾಡಿಗೆ ಮತ್ತು ದೇಶಕ್ಕೆ ಹಲವಾರು ಜ್ಞಾನಿಗಳನ್ನು ಕೊಡುಗೆಯಾಗಿ ನೀಡಿದೆ. ನನ್ನ ಕ್ಷೇತ್ರದಲ್ಲಿ ಸಿದ್ದಗಂಗಾ ಕ್ಷೇತ್ರದ ಶಾಲೆ ಹೊಂದಿರುವುದು ನಮಗೆಲ್ಲ ಹೆಮ್ಮೆ ಅನಿಸುತ್ತಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಇದು ಭವಿಷ್ಯದ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳ ಶಾಲೆಯಾಗಿದೆ. ಶ್ರೀಗಳು ಶಿಕ್ಷಣಕ್ಕೆ ಆದ್ಯತೆ ಕೊಡುವುದರ ಜೊತೆಗೆ ಶಿಸ್ತು ಮತ್ತು ಸನ್ನಡತೆ ಕಲಿಸುತ್ತಿದ್ದಾರೆ. ಅನನ್ಯ ಕಾರ್ಯಗಳನ್ನು ಮಾಡುವ ಮೂಲಕ ಜಗದಗಲದಲ್ಲಿ ನಾಡಿನ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಕರೋನಾದ ಕರಾಳ ದಿನಗಳಲ್ಲಿ ಸಿದ್ದಗಂಗಾಮಠ ನಾಡಿನ ಬಡ ಮಕ್ಕಳಿಗೆ ಅನ್ನ ಹಾಕಿ ಮಾದರಿಯಾಯಿತು. ಹಿರಿಯ ಶ್ರೀಗಳವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಸಿದ್ದಗಂಗಾಮಠ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ ಎಂದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಂ.ಬಸವರಾಜಪ್ಪ, ಗ್ರಾಪಂ ಅಧ್ಯಕ್ಷರಾದ ವಿನೋದ ದೇವರಾಜು, ಮುಖಂಡರಾದ
ಟಿ.ತ್ರಿಯಂಬಕಮೂರ್ತಿ, ಚಮನ್ ಷರೀಫ್, ಡಾ.ಜೆ.ಆರ್.ಸುಜಾತ, ಆಸಿಫ್ ಅಲಿ, ಪಟ್ರೆಹಳ್ಳಿ ಕಿರಣ್, ಮಹಮದ್ ಫಕ್ರುದ್ದೀನ್, ಯರಗುಂಟೇಶ್ವರ ಮುಂತಾದವರು ಹಾಜರಿದ್ದರು.