ಮಕ್ಕಳಲ್ಲಿನ ಸಾಹಿತ್ಯ ಆಸಕ್ತಿ, ಅಭಿರುಚಿಗೆ ಪ್ರೋತ್ಸಾಹ ನೀಡಬೇಕು. ಸಾಹಿತ್ಯ ಕೃಷಿಗೆ ಅವರನ್ನು ಉತ್ತೇಜಿಸಲು ಸೂಕ್ತ ವೇದಿಕೆ, ವಾತಾವರಣ ಕಲ್ಪಿಸಬೇಕು. ಈ ದಿಶೆಯಲ್ಲಿ ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿ ಅತಿ ಮುಖ್ಯವಾಗಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರಡ್ಡಿ ಹೇಳಿದರು.
ರೋಣ: ಮಕ್ಕಳಲ್ಲಿನ ಸಾಹಿತ್ಯ ಆಸಕ್ತಿ, ಅಭಿರುಚಿಗೆ ಪ್ರೋತ್ಸಾಹ ನೀಡಬೇಕು. ಸಾಹಿತ್ಯ ಕೃಷಿಗೆ ಅವರನ್ನು ಉತ್ತೇಜಿಸಲು ಸೂಕ್ತ ವೇದಿಕೆ, ವಾತಾವರಣ ಕಲ್ಪಿಸಬೇಕು. ಈ ದಿಶೆಯಲ್ಲಿ ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿ ಅತಿ ಮುಖ್ಯವಾಗಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರಡ್ಡಿ ಹೇಳಿದರು.
ಅವರು ಬುಧವಾರ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳಲ್ಲಿ ಅಡಗಿರುವ ವಿವಿಧ ಕೌಶಲಗಳನ್ನು ಬೆಳೆಸಲು ಕವಿತೆ, ಕಥೆ, ನಾಟಕ ಮುಂತಾದ ಸಾಹಿತ್ಯಿಕ ಚಟುವಟಿಕೆ ಅವಶ್ಯಕ. ಮಕ್ಕಳು ಈ ದಿಶೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮೊಬೈಲ್ ಸಂಸ್ಕೃತಿಯಿಂದ ಮಕ್ಕಳು ದೂರವಿರಬೇಕು ಎಂದರು.ಸಮಾರಂಭ ಉದ್ಘಾಟಿಸಿ ತಾಪಂ ಸಹಾಯಕ ನಿರ್ದೇಶಕ ಎಸ್.ಎಸ್. ರಿತ್ತಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಲಿಕೆಗಿಂತ ಭಿನ್ನವಾಗಿ ಸಾಹಿತ್ಯ ಸಂಭ್ರಮದಲ್ಲಿ ಮಕ್ಕಳು ಕಲಿಯುತ್ತಾರೆ. ಮಕ್ಕಳಿಗಾಗಿಯೇ ಜಿಪಂ ಮತ್ತು ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಚಿಕ್ಕಮಣ್ಣೂರ ಗ್ರಾಮದಲ್ಲಿ 3 ದಿನಗಳ ಕಾಲ ಮಕ್ಕಳ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ಮಕ್ಕಳ ಹಬ್ಬವಾಗಬೇಕು. ಈ ಹಬ್ಬಕ್ಕೆ ಮಕ್ಕಳನ್ನು ಕರೆತಂದು ಕಾರ್ಯಕ್ರಮದ ಉದ್ದೇಶ ಸಾಕಾರಗೊಳ್ಳುವಲ್ಲಿ ಪಾಲಕರು ಶ್ರಮಿಸಬೇಕು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಅದಮ್ಯವಾಗಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.
ಮಹೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಆರ್.ಎಂ. ಹುಣಸೀಮರದ, ತೋಟಪ್ಪ ಉಳ್ಳಾಗಡ್ಡಿ, ಹುಸೇನಸಾಬ್ ಜಾಲಿಹಾಳ, ಡಿ.ಎಸ್. ಬಾಪುರೆ, ಶಂಭುಕರ ಚಕ್ರವರ್ತಿ, ಶಿಕ್ಷಕ ಸಾಹಿತಿ ಎಸ್.ಬಿ. ಹಿರೇಮಠ, ಎನ್.ಆರ್. ಬೇವಿನಮರದ, ಶಿವು ಮುತ್ತಣ್ಣವರ, ಮಲ್ಲಪ್ಪ ಕುಂಬಾರ, ಬಸವರಾಜ ಕೊಪ್ಪದ, ರಾಮನಗೌಡ ಸೋಮನಕಟ್ಟಿ, ಎಸ್.ಎಸ್. ಮಾಳವಾಡ, ಪ್ರಕಾಶ ಕರಕೀಕಟ್ಟಿ, ಶೋಭಾ ಶಿವಳ್ಳಿ, ಬಸವರಾಜ ಹುಣಸೀಕಟ್ಟಿ, ಮಲ್ಲಪ್ಪ ಕುರಿ, ಬಸವರಾಜ ಗಡಗಿ, ರಮೇಶ ಪಟ್ಟೇದ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಎಸ್.ಜೆ. ಹಿರೇಮಠ ಸ್ವಾಗತಿಸಿದರು. ಜಿ.ಎಸ್. ಹೂಗಾರ ವಂದಿಸಿದರು. ಶಿಕ್ಷಕ ಬಿ.ಎಂ. ಮುಳ್ಳುತ ಕಾರ್ಯಕ್ರಮ ನಿರೂಪಿಸಿದರು.