ಸಾರಾಂಶ
ಕಾರ್ಯಕ್ರಮ । ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ಜ್ಞಾನ ವಿಕಾಸ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣದೇಶದ ಸಮಗ್ರ ಅಭಿವೃದ್ಧಿಗೆ ಮಹಿಳೆಯ ಪಾತ್ರ ಗಮನಾರ್ಹವಾದುದು. ಸಮಾಜದ ವಿವಿಧ ಹಂತಗಳಲ್ಲಿ ಮಹಿಳೆಯರು ಶಿಕ್ಷಣ, ವ್ಯವಸಾಯ, ಸ್ವ-ಉದ್ಯೋಗ, ಹೈನುಗಾರಿಕೆ ಮೊದಲಾದ ವಿಷಯಗಳಲ್ಲಿ ಸ್ವಾವಲಂಬಿಯಾಗಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.
ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಸಾಮಾಜಿಕ, ಆರ್ಥಿಕ, ಮಾನಸಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಪೂರಕವಾಗಿದೆ. ಈ ಕಾರ್ಯಕ್ರಮದ ಉದ್ದೇಶಗಳು ಹಾಗೂ ಅದರ ಪ್ರಮುಖ ವಿಶೇಷ ಯೋಜನೆಗಳಿಂದ ಮಹಿಳೆಯರ ಸಾಮಾಜಿಕ ಸ್ಥಾನ ಹಾಗೂ ಆರ್ಥಿಕ ಆಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.ಮಹಿಳೆಯರ ಆರೋಗ್ಯ ಬಗ್ಗೆ ಜಾಗರೂಕತೆ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಮೂಲಕ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಸದೃಡ ಮಾಡುವುದು, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳಿಗೆ ಪ್ರೋತ್ಸಾಹ ನೀಡುವುದು, ಸಾಮಾಜಿಕ ಸ್ಥಾನ-ಮಾನ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶ್ರಮಿಸುತ್ತಿದೆ ಎಂದು ಹೇಳಿದರು.
ಮಂಡ್ಯದ ಸ್ನೇಹಜೀವಿ ಕಲಾ ತಂಡದವರಿಂದ ಬೀದಿ ನಾಟಕ ಆಯೋಜಿಸಿ ಮದ್ಯ ವರ್ಜನೆ ಮತ್ತು ಆರ್ಥಿಕ ಸ್ವಾವಲಂಬನೆ ಬಗ್ಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಪಟೇಲ್ ಅಪ್ಪಾಜಿಗೌಡ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರ ಹೊಸಹಳ್ಳಿ, ಯೋಜನಾಧಿಕಾರಿ ಸದಾಶಿವ ಕುಲಾಲ್, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಹರ್ಷಕುಮಾರಿ, ಮೇಲ್ವಿಚಾರಕಿ ಶಿವಲೀಲಾ, ಸೇವಾ ಪ್ರತಿನಿಧಿ ಪಿ.ಕೆ.ಆಶಾ ಹಾಗೂ ಸಂಘದ ಸದಸ್ಯರು ಇದ್ದರು.