ಸಾರಾಂಶ
ಗ್ರಾಮೀಣ ಶಿಕ್ಷಣಾಧಿಕಾರಿ ಕಛೇರಿ ಈಗ ವಿಶಾಲ ಕಾಂಪೌಂಡ್, ಎದುರಿನ ಅಂಗಳದಲ್ಲಿ ಗಿಡಗಳು, ಗೋಡೆಗಳ ಮೇಲೆಲ್ಲಾ ಬಗೆಬಗೆಯ ಶೈಲಿಯ ಭಾವಗಳ ವರ್ಲಿಕಲೆಯಿಂದ ಕೈ ಬೀಸಿ ಕರೆಯುತ್ತಿದೆ.
ಧಾರವಾಡ: ಸರ್ಕಾರಿ ಶಾಲೆಗಳ ಕಟ್ಟಡ, ಅಲ್ಲಿಯ ಕೊಠಡಿಗಳು ಅಂದವಾಗಿ ಸಿಂಗರಗೊಂಡರೆ ಶಿಕ್ಷಕರಿಗೂ, ಮಕ್ಕಳಿಗೂ ಶಾಲೆ ಪರಿಸರ ಸಹಜವಾಗಿಯೇ ಮುದ ನೀಡುತ್ತದೆ. ಪೋಷಕರಿಗೆ ಶಾಲೆಯ ಬಗ್ಗೆ ಆಕರ್ಷಣೆ ಬೆಳೆಯುತ್ತದೆ ಎಂದೆಲ್ಲಾ ಶಿಕ್ಷಣಾಧಿಕಾರಿಗಳು ಉಪದೇಶ ಮಾಡುತ್ತಾರೆ.
ಹೀಗೆ ಉಪದೇಶ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಸಹ ಹಾಗೆಯೇ ಇರಬೇಕಲ್ಲವೇ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಉತ್ತರವಾಗಿ ಧಾರವಾಡ ಗ್ರಾಮೀಣ ತಾಲೂಕಿನ ಎಲ್ಲಾ ಶಾಲೆಗಳಿಗೆ ಆಡಳಿತ ಕೇಂದ್ರ ಬಿಇಓ ಕಛೇರಿ ಅಚ್ಚುಕಟ್ಟಾಗಿ ಸಜ್ಜಾಗಿ ಮಾದರಿಯಾಗಿದೆ.ವಿಶೇಷ ಶೈಲಿಯ ಚಿತ್ರಗಳು: ಗ್ರಾಮೀಣ ಶಿಕ್ಷಣಾಧಿಕಾರಿ ಕಛೇರಿ ಈಗ ವಿಶಾಲ ಕಾಂಪೌಂಡ್, ಎದುರಿನ ಅಂಗಳದಲ್ಲಿ ಗಿಡಗಳು, ಗೋಡೆಗಳ ಮೇಲೆಲ್ಲಾ ಬಗೆಬಗೆಯ ಶೈಲಿಯ ಭಾವಗಳ ವರ್ಲಿಕಲೆಯಿಂದ ಕೈ ಬೀಸಿ ಕರೆಯುತ್ತಿದೆ. ಒಳಾವರಣದ ಒಳಗೋಡೆಗಳ ಮೇಲೆಲ್ಲ ಕೂಡ ಚಿತ್ರ ಚಿತ್ತಾರ ಮೂಡಿ ಇಡೀ ಪ್ರದೇಶಕ್ಕೆ ಕಲಾತ್ಮಕ ಮೆರುಗನ್ನು ನೀಡಿವೆ. ಸಂಪೂರ್ಣ ಕಲಾ ವೈಭವ ಹೊಂದಿದೆ.
ಏನೇನು ಚಿತ್ರಗಳು?: ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅವರ ವಿಶೇಷ ಅಭಿರುಚಿಯಿಂದ ಕಚೇರಿ ಹೊಸ ರೂಪ ಪಡೆದಿದ್ದು, ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರನ್ನು ಒಂದೆಡೆ ಸೇರಿಸಿ, ಅವರಿಂದ ಅಂದವಾದ ಚಿತ್ರಪಟಗಳನ್ನು ಬರೆಸಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬೃಹತ್ ಭಾವಚಿತ್ರ, ಕಚೇರಿಯ ಹೊರ ಆವರಣದಲ್ಲಿ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದಿದೆ ಎಂಬುವುದರ ಭಾವಚಿತ್ರಗಳು, ವರ್ಲಿಚಿತ್ರ ಸುಂದರವಾಗಿದೆ. ಹಿಂದೆ ಈ ಕಚೇರಿ ನೋಟಿದವರು ಪ್ರವೇಶದ್ವಾರದ ಎದುರಲ್ಲೇ ಜಾರಿ ಬಣ್ಣವಳಿದು ಮಾಸಿ ಮುಪ್ಪಡರಿದ ಗೋಡೆಗಳು, ಜೋತಾಡುತ್ತಿದ್ದ ವಿದ್ಯುತ್ ಉಪಕರಣಗಳು, ಜಿಡ್ಡುಗಟ್ಟಿದ್ದ ಪರದೆಗಳು ಎಲ್ಲವೂ ಎಲ್ಲಿ ಹೊದವು ಎಂದು ಹುಡುಕುವಂತಾಗಿದೆ. ಚಿತ್ರ ತೆಗೆದವರಿವರು: ಕಛೇರಿ ಗೇಟ್ ಒಳಗಡೆ ಬರುತ್ತಿದ್ದಂತೆ ಸ್ವಾಗತದಿಂದ ಕರೆಯುವ ಚಿತ್ರ ಹಾಗೂ ಬಂದವರು ಕೆಲಸ ಮುಗಿಸಿ ಹೊರಗಡೆ ಹೊಗುತ್ತಿದ್ದಂತೆ ಧನ್ಯವಾದಗಳು ಹೇಳುವ ಚಿತ್ರ. ಕಂಪೌಂಡ ಒಳಗಡೆ ಇನ್ನು ಕೆಲವು ಮಕ್ಕಳು ಉಚಿತವಾಗಿ ಸಮವಸ್ತ್ರ ಬೈಸಿಕಲ್ ಪಡೆಯುವ ಸಂಭ್ರಮದಲ್ಲಿ ತೊಡಗಿದ್ದಾರೆ. ಕೆಲವು ಮಕ್ಕಳು ಕ್ರೀಡೆ, ಪ್ರತಿಭಾ ಕಾರಂಜಿಯಲ್ಲಿ ತೊಡಗಿದ್ದಾರೆ. ಈ ಕಾರ್ಯದಲ್ಲಿ ಚಿತ್ರಕಲಾ ಶಿಕ್ಷಕರಾದ ಮಹಾಂತೇಶ ಹುಬ್ಬಳ್ಳಿ, ವಿಜಯಕುಮಾರ ಗುಳೇದಗುಡ್ಡ, ವಿಜಯಕುಮಾರ್ ಗಾಯಕವಾಡ, ಬಾಬಾಜಾನ ಮುಲ್ಲಾ, ಸಿಕಂದರ ಹೊಸಳ್ಳಿ, ಎಂ.ಪಿ. ಶೇಬಣ್ಣವರ, ಎಂ.ಎಂ.ಕೊಹಲಿ, ಎಂ.ಜಿ.ಹಳ್ಳೂರ ತೊಡಗಿಸಿಕೊಂಡಿದ್ದರು. ಶಾಲಾ ಶಿಕ್ಷಕರಿಗೆ ಮಾರ್ಗದರ್ಶನ ಮಾಡುತ್ತೇವೆ. ಮಾತಿನ ಮೂಲಕ ಉಪದೇಶ ಕೊಡುವುದಕ್ಕಿಂತ, ಸ್ವಂತ ಕ್ರಿಯೆ ಮತ್ತು ಉದಾಹರಣೆಯ ಮೂಲಕ ತೋರಿಸುವುದು ಉತ್ತಮ ಎಂದು ತಿಳಿದು ಕಚೇರಿಯನ್ನು ಅಂದಗೊಳಿಸಿದ್ದೇವೆ. ತಾಲೂಕಿನ ಅತ್ಯಂತ ಪ್ರತಿಭಾನ್ವಿತ, ಕಲಾ ನೈಪುಣ್ಯತೆ ಹೊಂದಿರುವ ಚಿತ್ರಕಲಾ ಶಿಕ್ಷಕರ ತಂಡದೊಂದಿಗೆ ಈ ಕಾರ್ಯ ಮಾಡಲಾಗಿದೆ ಎಂದು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.