ಸಾರಾಂಶ
ಕೇರಳ ಮಹಾ ದುರಂತದಲ್ಲಿ ಪಾರಾಗಿ ಬಂದ ಮಳವಳ್ಳಿ ಮೂಲದ ರಾಧಾ ಈಗಲೂ ಆ ಘಟನೆಯನ್ನು ನೆನೆದು ಬೆಚ್ಚಿ ಬೀಳುತ್ತಾರೆ. ಮಗಳ ಶಾಲಾ ದಾಖಲಾತಿಗೆ ಸಮಸ್ಯೆ ಉಂಟಾದ್ದರಿಂದ ಮೂಲತಃ ಕೇರಳದವರಾದ ರಾಧಾ ಚೂರಲ್ ಮಲೆಗೆ ತೆರಳಿ ಮಹಾ ಪ್ರಳಯಕ್ಕೆ ಸಿಲುಕಿ ಬಚಾವ್ ಆಗಿ ಚಾಮರಾಜನಗರಕ್ಕೆ ಮರಳಿ ಬಂದಿದ್ದಾರೆ.
ಚಾಮರಾಜನಗರ: ಕೇರಳ ಮಹಾ ದುರಂತದಲ್ಲಿ ಪಾರಾಗಿ ಬಂದ ಮಳವಳ್ಳಿ ಮೂಲದ ರಾಧಾ ಈಗಲೂ ಆ ಘಟನೆಯನ್ನು ನೆನೆದು ಬೆಚ್ಚಿ ಬೀಳುತ್ತಾರೆ. ಮಗಳ ಶಾಲಾ ದಾಖಲಾತಿಗೆ ಸಮಸ್ಯೆ ಉಂಟಾದ್ದರಿಂದ ಮೂಲತಃ ಕೇರಳದವರಾದ ರಾಧಾ ಚೂರಲ್ ಮಲೆಗೆ ತೆರಳಿ ಮಹಾ ಪ್ರಳಯಕ್ಕೆ ಸಿಲುಕಿ ಬಚಾವ್ ಆಗಿ ಬಂದಿದ್ದಾರೆ.
ಕತ್ತಿನ ತನಕ ಬಂದಿದ್ದ ನೀರಿನ ನಡುವೆ ಹಗ್ಗ ಹಿಡಿದು ಬೆಟ್ಟ ಏರಿ ಪಾರಾಗಿ ಬಂದಿದ್ದಾರೆ. ಕಣ್ಣೆದುರೇ ಮಹಾ ಪ್ರಳಯ ಕಂಡ ಇವರು ಅಕ್ಷರಶಃ 2 ದಿನ ನರಕ ನೋಡಿ ಬಂದಿದ್ದಾರೆ. ರಾತ್ರಿ ಶುರುವಾದ ಜೋರು ಮಳೆಯಿಂದ ಬಚಾವ್ ಆಗಲು ಬೆಟ್ಟ ಏರಿದೆವು. 10 ನಿಮಿಷದಲ್ಲೇ ಎಲ್ಲವೂ ನಾಶವಾಯಿತು. ಆಸ್ಪತ್ರೆ ಕಟ್ಟಡವೊಂದು ಬಿಟ್ಟರೇ ಏನೂ ಉಳಿದಿರಲಿಲ್ಲ, ನನ್ನ ಮಗಳ ಶಾಲಾ ದಾಖಲಾತಿಗಾಗಿ ಕೆಲವು ದಾಖಲೆಗಳನ್ನು ತರಲು ಬಂದಿದ್ದೆ, ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ಹೊತ್ತಿಗೇ ಅದರ ಅವಶೇಷವೇ ಇರಲಿಲ್ಲ ಎಂದು ಕಣ್ಣೀರಾದರು. ಗುಡ್ಡದ ಮೇಲೆ ಇದ್ದರೂ ಅದೊಂದು ರೀತಿ ನರಕವೇ ಆಗಿತ್ತು. ಒಬ್ಬರಿಗೆ ಕೈ ಇಲ್ಲಾ, ಇನ್ನೊಬ್ಬರಿಗೆ ತಲೆ ಇರಲಿಲ್ಲ. ಮನೆಯಲ್ಲಿ ಉಳಿದಿದ್ದ ಒಂದೇ ಗೋಡೆಯನ್ನು ಹಿಡಿದು ತಾಯಿ-ಮಗು ಬದುಕಿದ್ದರು, ಆ ದೃಶ್ಯ ನೋಡುವುದು ಯಾರಿಗೂ ಬೇಡ ಎಂದರು. ಜಾತಿ ಪ್ರಮಾಣಪತ್ರದಲ್ಲಿ ಉಂಟಾಗಿರುವ ದೋಷ ಸರಿಪಡಿಸಿ, ನನ್ನ ಮಗಳಿಗೆ ಶಾಲಾ ದಾಖಲಾತಿ ಕೊಡಿಸಬೇಕು ಎಂದು ರಾಧಾ ಮನವಿ ಮಾಡಿದ್ದಾರೆ.ಎರಡು ದಿನ ತಾವು ಕಂಡ ನರಕದ ದೃಶ್ಯದಿಂದ ಇನ್ನೂ ಚೇತರಿಸಿಕೊಳ್ಳದ ರಾಧಾ ಸದ್ಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.