ಆಸ್ಪತ್ರೆಯ ಎಲ್ಲ ದಾದಿಯರಿಗೆ 500 ಜಿಎಸ್‌ಎಂ ಪರಿಸರ ಸ್ನೇಹಿ ಕಾಟನ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ಲಾಸ್ಟಿಕ್ ಮುಕ್ತ ಭಾರತದ ಸಂಕಲ್ಪ ಮನೆಮನೆಯಿಂದಲೇ ಆರಂಭವಾಗಬೇಕು. ಸ್ವಚ್ಛತೆಯೇ ಆರೋಗ್ಯದ ಮೂಲ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಬಿ. ಪರಮೇಶ್ ಹೇಳಿದರು. ಇದೇ ಸಂದರ್ಭದಲ್ಲಿ ಜೆಸಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ಆಡಳಿತ ವೈದ್ಯಾಧಿಕಾರಿ ಡಾ. ಉಮೇಶ್, ಹಿರಿಯ ಫಾರ್ಮಸಿ ಅಧಿಕಾರಿ ಎ. ಶಶಿಕುಮಾರ್, ಚೈತ್ರ ಹಾಗೂ ಕಿರಣ್ ಕುಮಾರ್ ಅವರಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ವೈದ್ಯಕೀಯ ಸೇವೆಯ ಜತೆಗೆ ಆತ್ಮೀಯತೆ, ಧೈರ್ಯ ಹಾಗೂ ಕಾಳಜಿಯನ್ನು ನೀಡುವ ಮೂಲಕ ಅವರ ಚೇತರಿಕೆಯಲ್ಲಿ ದಾದಿಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪರಮೇಶ್ ಹೇಳಿದರು.ನಗರದ ಜೆಸಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ದಾದಿಯರ ಕರ್ತವ್ಯ ಅತ್ಯಂತ ಮಹತ್ವದ್ದಾಗಿದೆ. ರೋಗಿಯ ಆರೋಗ್ಯ ಸ್ಥಿತಿಯನ್ನು ಗಮನಿಸುವುದರಿಂದ ಹಿಡಿದು ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡುವಲ್ಲಿ ಸಹಕರಿಸುವುದು ಹಾಗೂ ರೋಗಿಗಳು ಗುಣಮುಖರಾಗಿ ಮನೆಗೆ ಮರಳುವವರೆಗೂ ಕಾಳಜಿಯಿಂದ ಸೇವೆ ಸಲ್ಲಿಸುವ ದಾದಿಯರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ನಿಸ್ವಾರ್ಥ ಸೇವೆಗೆ ವಿಶ್ವಮಟ್ಟದಲ್ಲಿ ಮಾದರಿಯಾದ ಫ್ಲಾರೆನ್ಸ್ ನೈಟಿಂಗೇಲ್ ಮತ್ತು ಮದರ್‌ ತೆರೇಸಾ ಅವರ ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ತಿಳಿಸಿದರು.ಯುವ ಎಂಜಿನಿಯರ್‌ ಹಾಗೂ ಎಚ್.ಎಸ್. ಕನ್‌ಸ್ಟ್ರಕ್ಷನ್‌ನ ಡಿ.ಎಂ. ಹರೀಶ್, ದಾಸೇನಹಳ್ಳಿ, ಇವರ ಸಹಕಾರದೊಂದಿಗೆ ಆಸ್ಪತ್ರೆಯ ಎಲ್ಲ ದಾದಿಯರಿಗೆ 500 ಜಿಎಸ್‌ಎಂ ಪರಿಸರ ಸ್ನೇಹಿ ಕಾಟನ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ಲಾಸ್ಟಿಕ್ ಮುಕ್ತ ಭಾರತದ ಸಂಕಲ್ಪ ಮನೆಮನೆಯಿಂದಲೇ ಆರಂಭವಾಗಬೇಕು. ಸ್ವಚ್ಛತೆಯೇ ಆರೋಗ್ಯದ ಮೂಲ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಬಿ. ಪರಮೇಶ್ ಹೇಳಿದರು. ಇದೇ ಸಂದರ್ಭದಲ್ಲಿ ಜೆಸಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ಆಡಳಿತ ವೈದ್ಯಾಧಿಕಾರಿ ಡಾ. ಉಮೇಶ್, ಹಿರಿಯ ಫಾರ್ಮಸಿ ಅಧಿಕಾರಿ ಎ. ಶಶಿಕುಮಾರ್, ಚೈತ್ರ ಹಾಗೂ ಕಿರಣ್ ಕುಮಾರ್ ಅವರಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ್ ವಹಿಸಿದ್ದರು. ಲೋಕೇಶ್, ನಾಗರಾಜು, ವಾಣಿ, ರಾಘವ್ ಸೇರಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.