ಮಳಿಗೆಗಳಿಗೆ ನಗರಸಭೆಯಿಂದ ಬೀಗ, ಬಾಡಿಗೆದಾರರು ಆಕ್ರೋಶ

| Published : Feb 24 2024, 02:31 AM IST

ಸಾರಾಂಶ

ಟೆಂಡರ್‌ ಅವಧಿ ಪೂರ್ಣ, ಬಾಡಿಗೆ ಪಾವತಿಸದೆ ಬಾಕಿ ಹಿನ್ನೆಲೆ ಮಳಿಗೆಗಳನ್ನು ವಶಕ್ಕೆ ಪಡೆಯಲಾಯಿತು. ನಗರಸಭೆ ಅಧಿಕಾರಿ, ಸಿಬ್ಬಂದಿ ವರ್ಗದವರ ವಿರುದ್ಧ ಬಾಡಿಗೆದಾರರು ವಾಗ್ವಾದ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ನಗರಸಭೆ ವ್ಯಾಪ್ತಿಯ ಮಳಿಗೆಗಳ ಟೆಂಡರ್‌ ಅವಧಿ ಪೂರ್ಣಗೊಂಡಿದ್ದರಿಂದ, ಬಾಕಿ ಬಾಡಿಗೆ ಮೊತ್ತ ವಸೂಲಿ, ಹೊಸ ಟೆಂಡರ್‌ ಕರೆಯುವ ಉದ್ದೇಶದಿಂದ ನಗರಸಭೆ ಅಧಿಕಾರಿ, ಸಿಬ್ಬಂದಿ ವರ್ಗದವರು ಮಳಿಗೆಗಳಿಗೆ ಬೀಗ ಜಡಿದಿದ್ದು, ಇದರಿಂದಾಗಿ ಆಕ್ರೋಶಗೊಂಡ ಬಾಡಿಗೆದಾರರು ಅಧಿಕಾರಿಗಳ ವಿರುದ್ಧ ವಾಗ್ವಾದಕ್ಕಿಳಿದ ಘಟನೆ ಶುಕ್ರವಾರ ನಡೆಯಿತು.

ಸ್ಥಳೀಯ ನಗರಸಭೆ ಕಚೇರಿ, ಮಹಿಳಾ ಸಮಾಜ, ಹರಿಹರ ರಸ್ತೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ 150ಕ್ಕು ಹೆಚ್ಚು ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಹಲವಾರು ವರ್ಷಗಳಿಂದ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಇದರ ಜೊತೆಗೆ ಮಳಿಗೆ ಮಾಲೀಕರು ಸಹ ಬಾಡಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಇದರಿಂದಾಗಿ ನಗರಸಭೆ ಆರ್ಥಿಕ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿ ಸ್ಥಳೀಯ ಮಹಿಳಾ ಸಮಾಜದ ಮಳಿಗೆಗಳಿಗೆ ಬೀಗ ಜಡೆದಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಮಳಿಗೆ ಮಾಲೀಕರು ವಾಗ್ವಾದಕ್ಕೆ ಮುಂದಾಗಿದ್ದು ಇದೇ ವೇಳೆ ಎಳನೀರಿನ ಅಂಗಡಿಯ ವ್ಯಕ್ತಿ ಎಳನೀರು ಕತ್ತರಿಸುವ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಜಗಳಕ್ಕೆ ನಿಂತಿದ್ದಕ್ಕೆ ಕೆಲಕಾಲ ಉದ್ವಿಗ್ನ ಉಂಟಾಗಿತ್ತು.

ಇದೇ ವೇಳೆ ನಗರಸಭೆಯ ಸಿಬ್ಬಂದಿ ವಿಡಿಯೋ ಸೆರೆಹಿಡಿದು ಬೆದರಿಸುತ್ತಿಯಾ? ಕೊಚ್ಚಿ ಹಾಕ್ತಿಯಾ ಎಂದು ಪ್ರಶ್ನಿಸಿದಾಗ ಕತ್ತಿ ಬಿಸಾಡಿ ಆನಂತರ ಅಧಿಕಾರಿಗಳ ಮಾತು ಆಲಿಸಿದ್ದಾನೆ. ನನಗೆ ಒಂದೇ ಬಾರಿ ನೋಟಿಸ್ ನೀಡಿದ್ದು ನಿಜ, ಬಾಡಿಗೆ ಪಾವತಿಗೆ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದಾಗ ಇದಕ್ಕೆ ಜಗ್ಗದ ನಗರಸಭೆ ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮಳಿಗೆಗಳಿಗೆ ಬೀಗ ಹಾಕಿದರು.

ಇದಾದ ನಂತರ ಬಾಡಿಗೆದಾರರು ಸೇರಿಕೊಂಡು ನಗರಸಭೆ ಕಚೇರಿಗೆ ತೆರಳಿ ಮಳಿಗೆಗಳಿಗೆ ಬೀಗ ಜಡೆದಿರುವುದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು.

ಬಾಡಿಗೆದಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು ಈಗಾಗಲೇ ನೋಟಿಸ್‌ ಜಾರಿ ಮಾಡಿದ್ದರು ಸಹ ಅದಕ್ಕೆ ಸರಿಯಾದ ರೀತಿಯ ಸ್ಪಂದನೆ ಕೊಟ್ಟಿಲ್ಲ, ಟೆಂಡರ್‌ ಅವಧಿ ಮುಗಿದಿದೆ, ಅನೇಕರು ಬಾಡಿಗೆ ಸಹ ಪಾವತಿ ಮಾಡಿಲ್ಲ, ಮಳಿಗೆ ಮಾಲೀಕತ್ವದಲ್ಲಿ ಹತ್ತಾರು ಗೊಂದಲಗಳಿವೆ. ಹೀಗಾಗಿ, ಹೊಸ ಟೆಂಡರ್‌ ಕರೆಯಲು ನಿರ್ಧರಿಸಿದ್ದು, ಬಾಕಿ ಬಾಡಿಗೆಯ ಮೊತ್ತ ಪಾವತಿಸಿ, ಮಳಿಗೆಗಳನ್ನು ಖಾಲಿ ಮಾಡಿ ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಿಯಮಾನುಸಾರ ಮಳಿಗೆಗಳನ್ನು ಪಡೆಯುವಂತೆ ಸೂಚನೆ ನೀಡಿದರು.