ಸಾರಾಂಶ
ಸಂಘಟನೆ ಹಾಗೂ ಒಗ್ಗಟ್ಟಿನಿಂದ ಸಾಗಿದರೆ ಎಲ್ಲವೂ ಸುಲಭ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜದವರ ಒಗ್ಗಟ್ಟು ಅನುಕರಣೀಯವಾಗಿದೆ ಎಂದು ತೇರದಾಳ ತಹಸೀಲ್ದಾರ್ ವಿಜಯ್ಕುಮಾರ ಕಡಕೋಳ ಹೇಳಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಸಂಘಟನೆ ಹಾಗೂ ಒಗ್ಗಟ್ಟಿನಿಂದ ಸಾಗಿದರೆ ಎಲ್ಲವೂ ಸುಲಭ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜದವರ ಒಗ್ಗಟ್ಟು ಅನುಕರಣೀಯವಾಗಿದೆ ಎಂದು ತೇರದಾಳ ತಹಸೀಲ್ದಾರ್ ವಿಜಯ್ಕುಮಾರ ಕಡಕೋಳ ಹೇಳಿದರು.ಪಟ್ಟಣದ ವೇದಮಾತೆ ಗಾಯತ್ರಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜದವರು ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದ ಪ್ರಥಮ ಅಭಿಯಂತರರು, ವಾಸ್ತುತಜ್ಞರೆಂದು ಹೆಸರಾದ ವಿಶ್ವಕರ್ಮರ ಕಾರ್ಯವನ್ನು ಉಳಿದೆಲ್ಲ ಸಮಾಜದವರು ಮೆಚ್ಚುತ್ತಿರುವುದು ಸಹಬಾಳ್ವೆಯ ಪ್ರತೀಕವಾಗಿದೆ. ವಿಶ್ವಕರ್ಮರು ಎಲ್ಲರೊಂದಿಗೆ ಬೆರೆತು ನಿಗರ್ವಿಯಾಗಿ ಸಾಗುವ ಸಮುದಾಯವಾಗಿದ್ದು, ವಿಶ್ವಕರ್ಮಪ್ರಭುವಿನ ಕೃಪೆಯಿಂದ ಸಮಾಜದವರು ಇನ್ನಷ್ಟು ಉತ್ತಮ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಸಾಗುವಂತಾಗಲಿ ಎಂದು ಆಶಿಸಿದರು.ಸದಾಶಿವ ಆಚಾರ್ಯರಿಂದ ವಿಶ್ವಕರ್ಮಪ್ರಭು ಭಾವಚಿತ್ರಕ್ಕೆ ಪೂಜೆ, ಪಂಚಮುಖಿ ಗಾಯತ್ರಿದೇವಿ ಮೂರ್ತಿಗೆ ಪಂಚಾಮೃತಾಭಿಷೇಕ, ಅಲಂಕಾರಿಕ ಪೂಜೆ, ಪಂಚಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಸಾಗಿದವು. ಸಮಾಜದ ಅಧ್ಯಕ್ಷ ಸಂಜು ಕಲೆಗಾರ, ಯುವ ಸಂಘಟನೆಯವರು ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು. ಬಳಿಕ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ರ್ಯಾಲಿಯು ಜಯಘೋಷಗಳೊಂದಿಗೆ ಸಾಗಿತು.