ಕನ್ನಡ ಸಾಹಿತ್ಯ ಉಳಿವಿಗೆ ಹೋರಾಟ ಸ್ಥಿತಿ ವಿಷಾದನೀಯ

| Published : Jan 03 2024, 01:45 AM IST

ಸಾರಾಂಶ

ಕನ್ನಡ ಭಾಷೆ, ನಾಡು, ಜಲ, ಸಂಸ್ಕೃತಿ ಇನ್ನಿತರೆ ವಿಷಯಗಳು ಮಕ್ಕಳನ್ನು ಸೆಳೆಯಬೇಕು. ಇದಕ್ಕಾಗಿಯೇ ಮಕ್ಕಳ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಇಂಥ ಸಮ್ಮೇಳನಗಳು ಅವರಲ್ಲಿನ ನಾಡಿನಪ್ರಜ್ಞೆ ಜಾಗೃತಗೊಳಿಸುತ್ತವೆ. ಈ ಮಾತಿಗೆ ಪೂರಕವಾಗಿ ಭದ್ರಾ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ಭದ್ರಾವತಿಯಲ್ಲಿ ನಡದ ಮಕ್ಕಳ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಾಳಜಿ ನುಡಿದಿದ್ದಾರೆ. ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದ್ದು, ಇಂದು ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ವಿಷಾದಿಸಿದ್ದಾರೆ.

- ಭದ್ರಾವತಿಯಲ್ಲಿ 10ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ವಿದ್ಯಾರ್ಥಿನಿ ಸಿಂಚನ

- - -

ಕನ್ನಭಪ್ರಭ ವಾರ್ತೆ, ಭದ್ರಾವತಿ

ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದ್ದು, ಇಂದು ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಆಗಿರುವುದು ದುರಂತದ ಸಂಗತಿ ಎಂದು ಭದ್ರಾ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ಸಮಾಜದ ಸರಿ-ತಪ್ಪುಗಳ ಬಗ್ಗೆ ತಿಳಿವಳಿಕೆ ಹೊಂದುವುದರಿಂದ ಭವಿಷ್ಯದ ಉತ್ತಮ ಪ್ರಜೆಗಳಾಗಲು ಸಾಧ್ಯ. ಕನ್ನಡ ನಾಡಿನಲ್ಲಿ ಜನಿಸಿರುವ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ಕನ್ನಡ ಪುರಾತನ ಇತಿಹಾಸ ಹೊಂದುವುದರ ಜೊತೆಗೆ ಶ್ರೇಷ್ಠ ಕವಿಗಳನ್ನು ನೀಡಿದೆ ಎಂದರು.

ಕನ್ನಡ ತೇರು:

ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಶ್ರೀ ಸತ್ಯಸಾಯಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಆರ್. ಸೇವಂತಿ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಭಾಷೆಯನ್ನು ಮಾತೃಭಾಷೆಯಾಗಿ ಪಡೆದಿರುವ ನಾವೇ ಧನ್ಯರು. ಸಂಪತ್ಭರಿತವಾದ ಕನ್ನಡ ಭಾಷೆಯ ತೇರನ್ನು ಎಳೆಯುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಕನ್ನಡಿಗರು ಪರಭಾಷೆ ವಿರೋಧಿಗಳಲ್ಲ. ಆದರೆ. ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳದಿದ್ದರೆ ಅಪಾಯ ಖಂಡಿತ. ಕನ್ನಡಿಗರು ಕನ್ನಡಾಭಿಮಾನ ಬೆಳೆಸಿಕೊಳ್ಳದಿದ್ದರೆ ಮತ್ಯಾರು ಕನ್ನಡಾಭಿಮಾನ ಬೆಳೆಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆ ವತಿಯಿಂದ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಇದರ ಸದುಯೋಪ ಪಡೆದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ನಗರಸಭೆ ಸದಸ್ಯ ಬಿ.ಕೆ. ಮೋಹನ್, ಉದ್ಯಮಿ ಬಿ.ಕೆ. ಜಗನ್ನಾಥ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಪ್ರಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಿ.ಪ್ರಭಾಕರ್ ಬೀರಯ್ಯ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಕಸಾಪ ಹೊಳೆಹೊನ್ನೂರು ಹೋಬಳಿ ಅಧ್ಯಕ್ಷ ಸಿದ್ದಪ್ಪ, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಂ.ಆರ್. ರೇವಣಪ್ಪ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಇನ್ನಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಕೆ. ತೇಜಸ್‌ಕುಮಾರ್ ಸಾಗತಿಸಿ, ಹರ್ಷವರ್ಧನ್‌ ನಿರೂಪಿಸಿ, ಎಸ್.ಬಿ. ಹರಿ ವಂದಿಸಿದರು. ಶಿಕ್ಷಕ ಸೈಯ್ಯದ್ ಪರ್ವೇಜ್ ಕಾರ್ಯಕ್ರಮ ನಿರ್ವಹಿಸಿದರು.

ಅನಂತರ ಕವಿಗೋಷ್ಠಿ, ಕಥಾಗೋಷ್ಠಿ ಮತ್ತು ಪ್ರಚಲಿತ ವಿದ್ಯಮಾನಗಳು ಕುರಿತ ಗೋಷ್ಠಿಗಳು ಜರುಗಿದವು. ಸಮ್ಮೇಳನ ಉದ್ಘಾಟನೆಗೂ ಮೊದಲು ಪ್ರಶಾಂತಿ ಸೇವಾ ಟ್ರಸ್ಟ್ ಜಂಟಿ ಕಾರ್ಯದರ್ಶಿ ಶಿವಪ್ಪ, ರಾಷ್ಟ್ರ ಧ್ವಜಾರೋಹಣ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ನಾಡಧ್ವಜಾರೋಹಣ ಹಾಗೂ ವೇದಿಕೆ ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಪ್ರಮುಖರಾದ ಕಾಂತಪ್ಪ, ಎಚ್.ತಿಮ್ಮಪ್ಪ, ಮಾಯಮ್ಮ, ತಿಪ್ಪಮ್ಮ, ಕೋಕಿಲಾ, ಕಮಲಕುಮಾರಿ, ಹೇಮಾವತಿ ವಿಶ್ವನಾಥ್, ಸುಮತಿ ಕಾರಂತ್ ಹಾಗೂ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮ್ಮೇಳನ ಯಶಸ್ವಿಗೆ ಸಹಕರಿಸಿದರು.

- - - -ಡಿ2ಬಿಡಿವಿಟಿ:

ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿದ್ಯಾರ್ಥಿನಿ ಸಿಂಚನ ಉದ್ಘಾಟಿಸಿದರು.