ಸಾರಾಂಶ
ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ ಹಲವು ದಿನಗಳಿಂದ ನಗರದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು, ಕಲುಷಿತ ನೀರು ಸೇವನೆಯಿಂದ ಜಾಂಡೀಸ್ನಂತ ಕಾಯಿಲೆಗೆ ಜನ ತುತ್ತಾಗುತ್ತಿದ್ದಾರೆ. ಇಲ್ಲಿನ ಸ್ಥಳೀಯ ಆಡಳಿತದವರು ಶಿವಮೊಗ್ಗ ನಗರಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಕೈಗೊಳ್ಳಬೇಕು, ಇಲ್ಲದೇ ಹೋದರೆ ನಿರ್ವಹಣೆಯ ಜವಬ್ದಾರಿ ನಮಗೆ ಕೊಡಿ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಹರಿಹಾಯ್ದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ನಗರದಲ್ಲಿ ಶುದ್ಧ ನೀರಿನ ಕುಡಿಯುವ ವ್ಯವಸ್ಥೆ ಸರಿಯಾಗುತ್ತಿಲ್ಲ. ಇದರಿಂದ ಸಾವಿರಾರು ಜನರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಒಕ್ಕೂಟದ ಸದಸ್ಯರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಗಮನಿಸಿದಾಗ ಮಣ್ಣ ಮಿಶ್ರಿತ ನೀರು ಸರಬರಾಜು ಆಗುತ್ತಿರುವುದು ಕಂಡು ಬಂದಿದೆ ಎಂದು ದೂರಿದರು.
ನ್ಯೂ ಮಂಡ್ಲಿಯಲ್ಲಿರುವ ಕೆ.ಆರ್.ವಾಟರ್ ವರ್ಕ್ಸ್ನ ನೀರು ಶುದ್ದೀಕರಣ ಘಟಕದಲ್ಲಿ ಸರಿಯಾದ ಯಂತ್ರಗಳೇ ಇಲ್ಲ, ಅವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿದೆ. ಈ ಹಿಂದೆ ಉಪಯೋಗಿಸುತ್ತಿದ್ದ ಆಲಂ ಕೆಕೆಗೆ ಬದಲಾಗಿ ಅಲ್ಯೂಮಿನಿಯಂ ಕ್ಲೋರೈಡ್ ಬಳಸಲಾಗುತ್ತಿದೆ. ಈ ಕಾರ್ಯ ಕೂಡ ಅಪೂರ್ಣವಾಗಿ ನಡೆಯುತ್ತಿದ್ದು, ಮಣ್ಣು ಮಿಶ್ರಿತ ನೀರು ಟ್ಯಾಂಕ್ಗೆ ಸರಬರಾಜಾಗುತ್ತಿದೆ. ಆಲಂನ ಟ್ರೀಟ್ ಮೆಂಟ್ ಘಟಕ ಶಿಥಿಲಗೊಂಡಿದ್ದು, ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.ಪ್ರಮುಖವಾಗಿ ಇಲ್ಲಿರುವ ಎಲ್ಲಾ ಯಂತ್ರಗಳು ಹಾಗೂ ಶುದ್ಧೀಕರಣದ ವಿಧಾನಗಳು ಕಳೆದ 50 ವರ್ಷಗಳ ಹಳೆಯದಾಗಿವೆ. ಯಂತ್ರಗಳೆಲ್ಲ ತುಕ್ಕು ಹಿಡಿದು ಕಾರ್ಯ ನಿರ್ವಹಿಸುತ್ತಿಲ್ಲ. ನದಿ ನೀರಿನಿಂದ ಸರಬರಾಜಾಗುವ ಮಣ್ಣು ಮಿಶ್ರಿತ ನೀರನ್ನು ಈ ಯಂತ್ರಗಳು ತಿರುಗಿಸಿ ಬೇರ್ಪಡಿಸಬೇಕಾಗುತ್ತದೆ. ಆದರೆ, ಆ ಯಂತ್ರಗಳೇ ತಿರುಗುತ್ತಿಲ್ಲ, ದೋಷಪೂರಿತ ಯಂತ್ರಗಳಿವೆ ಎಂದು ಹೇಳಿದರು.
ಸಂಘಟನ ಕಾರ್ಯದರ್ಶಿ ಡಾ.ಸತೀಶ್ಕುಮಾರ್ ಶೆಟ್ಟಿ ಮಾತನಾಡಿ, ನೀರಿನ ಶುದ್ಧೀಕರಣದ ಘಟಕದ ಒಳಭಾಗ ಮತ್ತು ಹೊರಭಾಗಗಳಲ್ಲಿ ಅಸಮರ್ಪಕ ನಿರ್ವಹಣೆಯಿದೆ. ಈ ಎಲ್ಲಾ ತೊಂದರೆಗಳು ಕೆಲವು ವರ್ಷಗಳಿಂದ ಕಂಡು ಬರುತ್ತಿದ್ದರು. ಗಮನಹರಿಸಿಲ್ಲ. ಆಗಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಯಾವುದೇ ಪ್ರಯೋಗಾಲಯಗಳು ಇಲ್ಲಿ ಇಲ್ಲ ಎಂದರು. ಕುಡಿಯುವ ನೀರಿನ ವ್ಯವಸ್ಥೆಯ ಮೇಲೆ ಜನರ ಆರೋಗ್ಯವಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡಬೇಡಿ, ಕೂಡಲೇ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ವೇದಿಕೆ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದದಲ್ಲಿ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಮುಖರಾದ ಇಕ್ಬಾಲ್ ನೇತಾಜಿ, ಸೀತಾರಾಮ್, ನಾಗರಾಜ್ ಗೋರೆ, ಚನ್ನವೀರಪ್ಪ ಗಾಮನಕಟ್ಟೆ, ರಘುಪತಿ ಇದ್ದರು.